ತಂಬಾಕು ಬೆಳೆಗಾರರ ನೆರವಿಗೆ ಧಾವಿಸಲು ವಿಶ್ವನಾಥ್ ಆಗ್ರಹ
ಮೈಸೂರು, ಏಪ್ರಿಲ್ 15: ದೇಶದ ಪ್ರಮುಖ ವಾಣಿಜ್ಯ ಬೆಳೆ ತಂಬಾಕು ಬೆಳೆಯುವ ರೈತರ ಪರಿಸ್ಥಿತಿ ತೀರಾ ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರ ಕೂಡಲೇ ರೈತರ ನೆರವಿಗೆ ಧಾವಿಸಬೇಕೆಂದು ಮಾಜಿ ಸಚಿವ ಎಚ್.ವಿಶ್ವನಾಥ್ ಆಗ್ರಹಿಸಿದ್ದಾರೆ.
ಹುಣಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ""ತಂಬಾಕು ಬೆಳೆದಿರುವ ರೈತರ ಸ್ಥಿತಿ ಶೋಚನೀಯವಾಗಿದೆ. ತಂಬಾಕು ಬೆಳೆಗೆ ಬೆಲೆಯೇ ಇಲ್ಲದಂತಾಗಿದ್ದು, ಯಾರೂ ಖರೀದಿಗೆ ಮುಂದಾಗುತ್ತಿಲ್ಲ. ಈ ಕುರಿತು ತಾವು ಪ್ರಧಾನಮಂತ್ರಿಗೆ ಪತ್ರ ಬರೆದಿದ್ದು, ಅನಿವಾರ್ಯ ಎನಿಸಿದರೆ ಕೇಂದ್ರ ಸರಕಾರ ತಂಬಾಕು ಬೆಳೆಗೆ ರಜೆ ನೀಡಿ, ಬೆಳೆಗಾರರಿಗೆ ಪರಿಹಾರ ಘೋಷಿಸಬೇಕು. ಪರ್ಯಾಯ ಬೆಳೆಗೆ ಉತ್ತೇಜನ ನೀಡಬೇಕು'' ಎಂದು ಹೇಳಿದರು.
ತಂಬಾಕು ಕೃಷಿ ಮಾಡಲು ರೈತರು ಸಸಿ ಮಡಿ ಮಾಡಿಕೊಂಡಿರುವ ಸಮಯದಲ್ಲೇ ಕೊರೊನಾ ವೈರಸ್ ದಾಳಿಯಿಟ್ಟಿದ್ದು, ಬೆಳೆಗೆ ಬೇಕಾದ ಸೂಕ್ತ ಔಷಧ, ಗೊಬ್ಬರವೂ ಸಿಗುತ್ತಿಲ್ಲ. ತಂಬಾಕು ಬೆಳೆ ವಿದೇಶೀ ಮಾರುಕಟ್ಟೆಯನ್ನೇ ಅವಲಂಬಿಸಿರುವುದರಿಂದ ಅಲ್ಲಿಯ ಮಾರುಕಟ್ಟೆ ಯನ್ನು ಅಧ್ಯಯನ ಮಾಡಬೇಕಿದೆ ಎಂದರು.
ಕೊರೊನಾ ವೈರಸ್ ನಿಂದ ಬಹುತೇಕ ದೇಶಗಳ ಅರ್ಥಿಕ ವ್ಯವಸ್ಥೆಯೇ ಅಸ್ತವ್ಯಸ್ತಗೊಂಡಿವೆ. ಅವು ಭಾರತದಿಂದ ಹೊಗೆಸೊಪ್ಪನ್ನು ಆಮದು ಮಾಡಿಕೊಳ್ಳುವುದೇ ಅನಿಶ್ಚಿತವಾಗಿದೆ. ನಮ್ಮ ರೈತರು ಬೆಳೆಯುವ ಶ್ರೇಷ್ಠ ವರ್ಜೀನಿಯ ಗುಣಮಟ್ಟದ ತಂಬಾಕನ್ನು ಆ ದೇಶಗಳು ಖರೀದಿಸಲು ಸಾಧ್ಯವೇ ಎಂಬುದನ್ನು ಕೇಂದ್ರ ಸರಕಾರ ಖಾತ್ರಿ ಪಡಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಎಲ್ಲ ಸಾಧಕ ಬಾಧಕಗಳ ಬಗ್ಗೆ ಕೇಂದ್ರ ವಾಣಿಜ್ಯ ಸಚಿವರು ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗಂಭೀರವಾಗಿ ಆಲೋಚಿಸಬೇಕಿದೆ. ಕರ್ನಾಟಕದಲ್ಲಿ ಮೈಸೂರು, ಹಾಸನ, ಶಿವಮೊಗ್ಗ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ತಂಬಾಕು ಬೆಳೆಯಲಾಗುತ್ತಿದೆ. ಈ ಎಲ್ಲ ಕಡೆಯೂ ನಾಲ್ವರು ಸಂಸದರು ಇದ್ದಾರೆ. ಎಲ್ಲರೂ ಸೇರಿ ವಸ್ತುಸ್ಥಿತಿ ಅಧ್ಯಯನ ನಡೆಸಿ, ಕೇಂದ್ರ ಸರಕಾರಕ್ಕೆ ವರದಿ ನೀಡಬೇಕಿದೆ ಎಂದು ತಿಳಿಸಿದರು.
ತಂಬಾಕು ಬೆಳೆ ಎಂಬುದು ರಾಗಿ, ಜೋಳ ಬೆಳೆದಂತಲ್ಲ. ಯಾವುದೇ ಚುನಾಯಿತ ಪ್ರತಿನಿಧಿಗಳು ಕೂಡ ಈ ವಾಸ್ತವ ಅರಿಯದೇ, ರೈತರಿಗೆ ತಂಬಾಕು ಬೆಳೆಯಿರಿ, ನಾವಿದ್ದೇವೆ ಎಂದು ಭರವಸೆ ತುಂಬಬಾರದು. ನೂರಾರು ಕೋಟಿ ರೂ.ಗಳ ವ್ಯವಹಾರ ಇಲ್ಲಿ ಅಡಗಿದೆ ಎಂದು ಎಚ್ಚರಿಸಿದರು.