ಮಾಜಿ ಸಚಿವ ಎಸ್.ಎ ರಾಮದಾಸ್ಗೆ ಕೊರೊನಾ ದೃಢ: ಜನಪ್ರತಿನಿಧಿಗಳಲ್ಲಿ ಆತಂಕ
ಮೈಸೂರು, ಏಪ್ರಿಲ್ 14: ಮಾಜಿ ಸಚಿವ ಹಾಗೂ ಶಾಸಕ ಎಸ್.ಎ ರಾಮದಾಸ್ ಅವರ ಕೊರೊನಾ ವರದಿ ಪಾಸಿಟಿವ್ ಎಂದು ಬಂದಿದೆ. ಆದರೆ, ತಮ್ಮ ಆರೋಗ್ಯದಲ್ಲಿ ವ್ಯತ್ಯಾಸ ಕಾಣಿಣಿಕೊಂಡಿದ್ದರೂ, ಎಚ್ಚರಿಕೆ ವಹಿಸದ ಶಾಸಕ ರಾಮದಾಸ್, ಬುಧವಾರ ನಡೆದ ಡಾ.ಬಿ.ಆರ್ ಅಂಬೇಡ್ಕರ್ ಜಯಂತಿ ಸೇರಿದಂತೆ ಹಲವು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕೊರೊನಾ ಆತಂಕ ಉಲ್ಬಣಗೊಂಡಿರುವ ಬೆನ್ನಲ್ಲೇ ಮಾಜಿ ಸಚಿವ ಎಸ್.ಎ ರಾಮದಾಸ್ ಮಾಡಿರುವ ಎಡವಟ್ಟು ಜಿಲ್ಲೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಲ್ಲಿ ದೊಡ್ಡ ಆತಂಕ ಮೂಡಿಸಿದೆ.
ಮಂಗಳವಾರ ಜ್ವರ ಕಾಣಿಸಿಕೊಂಡಿದ್ದ ಕಾರಣ ಕೋವಿಡ್ ಟೆಸ್ಟ್ ಮಾಡಿಸಿದ್ದ ಶಾಸಕ ಎಸ್.ಎ ರಾಮದಾಸ್ ಅವರ ಕೊರೊನಾ ವರದಿ ಪಾಸಿಟಿವ್ ಎಂದು ಬಂದಿದೆ.
ಈ ವೇಳೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್, ಸಂಸದ ಪ್ರತಾಪ್ ಸಿಂಹ, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸೇರಿ ಜಿಲ್ಲೆಯ ಎಲ್ಲಾ ಅಧಿಕಾರಿಗಳ ಜೊತೆಗೆ ಶಾಸಕ ರಾಮದಾಸ್ ಪ್ರಾಥಮಿಕ ಸಂಪರ್ಕ ಹೊಂದಿದ್ದರು. ಇದರಿಂದಾಗಿ ರಾಮದಾಸ್ ಅವರೊಂದಿಗೆ ಸಂಪರ್ಕದಲ್ಲಿದ್ದ ಎಲ್ಲರಿಗೂ ಕೋವಿಡ್ ಭೀತಿ ಶುರುವಾಗಿದೆ.