"ವಿಶ್ವನಾಥ್ ಆರೋಪಕ್ಕೆ ಬೇಸತ್ತು ಸೆಪ್ಟೆಂಬರ್ 18ಕ್ಕೇ ರಾಜೀನಾಮೆ ನೀಡಿದ್ದೆ"
ಮೈಸೂರು, ಅಕ್ಟೋಬರ್ 16: "ಎಚ್. ವಿಶ್ವನಾಥ್ ನನ್ನ ಮೇಲೆ ಮಾಡಿದ ಕೀಳು ಮಟ್ಟದ ಆರೋಪದಿಂದ ಬೇಸತ್ತು ಸ್ಪೀಕರ್ ಕಚೇರಿಗೆ ಸೆಪ್ಟೆಂಬರ್ 18 ರಂದೇ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೆ. ಆಗ ಸ್ಪೀಕರ್ ಹೊರ ದೇಶದಲ್ಲಿದ್ದರು. ಸ್ಪೀಕರ್ ವಿದೇಶದಿಂದ ಬಂದ ನಂತರ ನನ್ನನ್ನು ಸ್ಪೀಕರ್ ಮನವೊಲಿಸಿ ಕಳುಹಿಸಿದ್ದರು. ಇನ್ನೂ ನನ್ನ ರಾಜೀನಾಮೆ ಪತ್ರ ಸ್ಪೀಕರ್ ಕಚೇರಿಯಲ್ಲಿಯೇ ಇದೆ" ಎಂದು ಹೇಳಿದ್ದಾರೆ ಸಾರಾ ಮಹೇಶ್.
ಇದರ ಜೊತೆಗೆ, ಅನರ್ಹ ಶಾಸಕ ಎಚ್ ವಿಶ್ವನಾಥ್ ಅವರು ತಾವು ಜೆಡಿಎಸ್ ಹಾಗೂ ಶಾಸಕ ಸ್ಥಾನಕ್ಕೆ ತಮ್ಮ ಸ್ವಂತ ಇಚ್ಛೆಯಿಂದಲೇ ರಾಜೀನಾಮೆ ನೀಡಿದ್ದೇನೆ, ಇದರ ಹಿಂದೆ ಯಾವುದೇ ಪಕ್ಷದ ಆಮಿಷಕ್ಕೆ ಬಲಿಯಾಗಿಲ್ಲ ಎಂದು ಪ್ರಮಾಣ ಮಾಡಿದರೆ ತಾವು ಈ ಹಿಂದೆ ಮಾಡಿರುವ ಆರೋಪಗಳಿಗೆ ರಾಜ್ಯದ ಜನತೆಯ ಕ್ಷಮೆ ಕೇಳುವುದಾಗಿ ಕೆ.ಆರ್.ನಗರ ಶಾಸಕ ಸಾರಾ ಮಹೇಶ್ ಹೇಳಿದರು.
ವಿಶ್ವನಾಥ್-ಸಾರಾ ಮಹೇಶ್ ಮಧ್ಯೆ ಮತ್ತೆ ಶುರುವಾಯ್ತ ಮಾತಿನ ಸಮರ?
ಇಂದು ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ವಿಶ್ವನಾಥ್ ಅವರು 25 ಕೋಟಿ ರೂಪಾಯಿ ಹಣಕ್ಕಾಗಿ ಯಾರು ಯಾರನ್ನು ಸಂಪರ್ಕಿಸಿದ್ದಾರೆ ಎಂಬುದೆಲ್ಲ ಎಲ್ಲರಿಗೂ ಗೊತ್ತಿರುವ ವಿಷಯ ಎಂದರಲ್ಲದೆ ತಾವೂ ವಿಶ್ವನಾಥ್ ಅವರ ಸವಾಲನ್ನು ಸ್ವೀಕರಿಸಿ ಗುರುವಾರ ಬೆಳಿಗ್ಗೆ 9 ಗಂಟೆಗೆ ಚಾಮುಂಡಿ ಬೆಟ್ಟಕ್ಕೆ ಬರುವುದಾಗಿ ತಿಳಿಸಿದರು.
"ಈ ಹಿಂದೆ ಮಾಜಿ ಮುಖ್ಯಮಂತ್ರಿ ಡಿ ದೇವರಾಜು ಅವರ ಮಗಳಿಗೆ ಟಿಕೆಟ್ ವಿಚಾರದಲ್ಲಿ ಮೋಸ ಮಾಡಿರುವ ವಿಶ್ವನಾಥ್ ಯಾವ ಮುಖ ಇಟ್ಟುಕೊಂಡು ಅರಸು ಅವರ ಹೆಸರು ಹೇಳುತ್ತಾರೆ" ಎಂದು ಪ್ರಶ್ನಿಸಿದ ಮಹೇಶ್, ಇವರು ಟಿಕೆಟ್ ವಿಚಾರದಲ್ಲಿ ಮಾಜಿ ಶಾಸಕ ಮಂಚನಹಳ್ಳಿ ಮಹದೇವ್ ಅವರಿಗೂ ಮೋಸ ಮಾಡಿದ್ದಾರೆ" ಎಂದು ಆರೋಪಿಸಿದರು.
"ಹುಣಸೂರಿನಲ್ಲಿ ವಿಶ್ವನಾಥ್ ಆಗಲಿ, ಅವರ ಕುಟುಂಬಸ್ಥರಾಗಲಿ ಸ್ಪರ್ಧೆ ಮಾಡಲ್ಲ. ಹೊರ ಜಿಲ್ಲೆಯವರು ಬಂದು ಸ್ಪರ್ಧೆ ಮಾಡ್ತಾರೆ. ಅದಕ್ಕಾಗಿ ಒಂದು ಒಪ್ಪಂದ ಮಾಡಿಕೊಂಡಿದ್ದಾರೆ. ಆ ಒಪ್ಪಂದ ಏನು ಆಗಿದೆ ಎನ್ನುವುದನ್ನು ಹೇಳೋಕೆ ಅವರು ಮತ್ತೆ ದೇವರ ಮುಂದೆ ಬರಬೇಕು" ಎಂದು ಸವಾಲು ಹಾಕಿದರು.