ಸಂಸದ ಪ್ರತಾಪ್ ಸಿಂಹಗೆ ಎಚ್.ಸಿ.ಮಹದೇವಪ್ಪ ಹೇಳಿದ ಬುದ್ದಿಮಾತು
ಮೈಸೂರು, ಜೂನ್ 30: ನಗರದ ಅಭಿವೃದ್ದಿ ವಿಚಾರದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಹಿರಿಯ ಕಾಂಗ್ರೆಸ್ ಮುಖಂಡ ಡಾ. ಎಚ್.ಸಿ.ಮಹದೇವಪ್ಪ ಮತ್ತು ಮೈಸೂರು ಸಂಸದ ಪ್ರತಾಪ್ ಸಿಂಹ ನಡುವಿನ ಜಟಾಪಟಿ ತಾರಕಕ್ಕೇರಿದೆ.
ಬಿಜೆಪಿ ಮತ್ತು ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಹೊರಟ ಎರಡು ಪಕ್ಷಗಳ ಕಾರ್ಯಕರ್ತರನ್ನು ಪೊಲೀಸರು, ಬುಧವಾರ (ಜೂನ್ 29) ಬಂಧಿಸಿ ನಂತರ ಬಿಡುಗಡೆ ಮಾಡಿದ್ದಾರೆ. ಈ ಬಗ್ಗೆ ಮಹದೇವಪ್ಪ ಪ್ರತಿಕ್ರಿಯೆ ನೀಡಿದ್ದಾರೆ.
ಗಂಧದ ಜೊತೆ ಗುದ್ದಾಡುವೆ, ಹಂದಿ ಜೊತೆಯಲ್ಲ: ಸಂಸದ ಪ್ರತಾಪ್ಸಿಂಹ ಲೇವಡಿ
"ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಕರ್ನಾಟಕದ ಉದ್ದಕ್ಕೂ ಮೂಲಸೌಕರ್ಯ ಅಭಿವೃದ್ಧಿಗೆ ಶ್ರಮಿಸಿದ್ದೀರ ಸರ್, ಎಂದು ಗೌರವದಿಂದ ಸನ್ಮಾನ ಮಾಡಿದ್ದರು. ಕೆಲಸ ಮಾಡಿದ ಒಬ್ಬರನ್ನು ಗೌರವಿಸುವ ನಿಟ್ಟಿನಲ್ಲಿ ಇದು ಇತ್ತೀಚಿನ ರಾಜಕಾರಣದಲ್ಲಿ ಪಕ್ಷಾತೀತವಾಗಿ ನಾವು ರೂಢಿಸಿಕೊಳ್ಳಬೇಕಾದ ಆರೋಗ್ಯಕರ ಪ್ರಜಾಪ್ರಭುತ್ವದ ನಡೆ"ಎಂದು ಮಹದೇವಪ್ಪ ಅಭಿಪ್ರಾಯ ಪಟ್ಟಿದ್ದಾರೆ.
"ಇದು ಸಂಸದ ಪ್ರತಾಪ್ ಸಿಂಹ ಅವರಿಗೆ ತಿಳಿಯದೇ ಹೋದರೆ ಅದು ಅವರ ಸಮಸ್ಯೆಯೇ ವಿನಃ ನಮ್ಮದಲ್ಲ. ಅಭಿವೃದ್ಧಿ ಮಾಡಲು ಯೋಗ್ಯತೆ ಇಲ್ಲದ ಬಿಜೆಪಿಗರು ತಮ್ಮ ಕಳಪೆ ಐಟಿ ಸೆಲ್ ಗಳಲ್ಲಿ ಫೋಟೋಶಾಪ್ ಮೂಲಕ ಅಭಿವೃದ್ಧಿಯ ಪರ್ವವನ್ನೇ ಹರಿಸಿದ್ದಾರೆ"ಎಂದು ಮಹದೇವಪ್ಪ ಲೇವಡಿ ಮಾಡಿದ್ದಾರೆ.
ಪ್ರತಾಪಸಿಂಹ ಬೆಂಬಲಿಗರು, ಕಾಂಗ್ರೆಸ್ ವಕ್ತಾರ ಲಕ್ಷ್ಮಣ್ ನಡುವೆ ಅಭಿವೃದ್ಧಿ ಚರ್ಚೆ
"ಇವರು ಯಾವ ಮಟ್ಟಕ್ಕೆ ಇಳಿಯುತ್ತಾರೆ ಎಂದರೆ ಅಲ್ಲೆಲ್ಲೋ ಫ್ರಾನ್ಸ್, ಅಮೆರಿಕಾ, ಸ್ವಿಟ್ಜರ್ಲೆಂಡ್ ನಂತಹ ದೇಶದಲ್ಲಿ ಅಭಿವೃದ್ಧಿ ಮಾಡಿದ ರಸ್ತೆಗಳ ಫೋಟೋವನ್ನು ಬಳಸಿಕೊಂಡು ನೋಡಿ ಇದೇ ಉತ್ತರ ಪ್ರದೇಶದ ರಸ್ತೆ, ಇದೇ ಗುಜರಾತಿನ ಅಭಿವೃದ್ಧಿ, ಎಂದೆಲ್ಲಾ ಸುಳ್ಳು ಹಬ್ಬಿಸುತ್ತಾರೆ. ಪಾಪ ನಮ್ಮ ಜನರು ಅಲ್ಲಿಗೆಲ್ಲಾ ಹೋಗಿ ಪರೀಕ್ಷೆ ಮಾಡುವುದಿಲ್ಲ ಅಲ್ಲವೇ?" ಎಂದು ಮಹದೇವಪ್ಪ ವ್ಯಂಗ್ಯವಾಡಿದರು.
"ಇವರು ಆಡಿದ್ದೇ ಆಟ, ಹೂಡಿದ್ದೇ ಲಗ್ಗಿ ಎಂಬಂತಾಗಿದೆ ಇವರ ನಕಲಿ ಅಭಿವೃದ್ಧಿಯ ಕಥೆ. ಮೊನ್ನೆ ಪ್ರಧಾನಿಗಳು ಬಂದು ಹೋದ ಮೇಲೆ ಜನರು ಬರಿಗೈಯಲ್ಲೇ ರಸ್ತೆಯ ಡಾಂಬರ್ ಅನ್ನು ಕಿತ್ತ ಸಂಗತಿಯು ಮಾಧ್ಯಮದಲ್ಲೇ ಪ್ರಸಾರವಾಯಿತು. ಇದು ಇವರು ಎಂತಹ ನಕಲಿ ಅಭಿವೃದ್ಧಿ ಶೂರರು ಎಂಬುದನ್ನು ಸಾರಿ ಹೇಳುತ್ತದೆ" ಎಂದು ಮಹದೇವಪ್ಪ ಕಿಡಿಕಾರಿದರು.
"ನನ್ನ ಸಾರ್ವಜನಿಕ ಜೀವನದಲ್ಲಿ ಇಂತಹ ಸುಳ್ಳು ಮತ್ತು ವಂಚನೆಯ ರಾಜಕಾರಣದ ಮಾರ್ಗವನ್ನು ನಾನು ಕಂಡಿರಲಿಲ್ಲ. ಕೊನೆಯದಾಗಿ ಹೇಳುವುದಿಷ್ಟೇ, ಮಾನ್ಯ ಸಂಸದರು ತಮ್ಮದೇ ಪಕ್ಷದ ಯಡಿಯೂರಪ್ಪ ಮತ್ತು ಜಗದೀಶ್ ಶೆಟ್ಟರ್ ಹಾಗೂ ಗೋವಿಂದ ಕಾರಜೋಳ ಹಾಗೂ ಇನ್ನಿತರೆ ಬಿಜೆಪಿ ನಾಯಕರಿಗೆ ಕರೆ ಮಾಡಿ, ಸರ್ ನೀವು ಮಾಜಿ ಲೋಕೋಪಯೋಗಿ ಸಚಿವರಾದ ಮಹದೇವಪ್ಪನವನವರಿಗೆ, ಏಕೆ ಸನ್ಮಾನ ಮಾಡಿದ್ದು ಎಂದು ಕೇಳಿದರೆ ಅವರೇ ಇವರಿಗೆ ಉತ್ತರ ಹೇಳುತ್ತಾರೆ. ಆಗ ನನ್ನ ಸಮಯವೂ ಉಳಿಯುತ್ತದೆ ಮಾನ್ಯ ಸಂಸದರ ಸಮಯವೂ ಉಳಿಯುತ್ತದೆ" ಎಂದು ಡಾ.ಎಚ್.ಸಿ.ಮಹದೇವಪ್ಪ ಬುದ್ದಿಮಾತನ್ನು ಹೇಳಿದ್ದಾರೆ.