"ರಾಜಸ್ಥಾನದ ಇಂದಿನ ರಾಜಕೀಯ ಬೆಳವಣಿಗೆಗೆ ನಾವೇ ಮೂಲ ಕಾರಣ''
ಮೈಸೂರು, ಜುಲೈ 17: ರಾಜಸ್ಥಾನದ ಇಂದಿನ ರಾಜಕೀಯ ಬೆಳವಣಿಗೆ ಮಾದರಿಗೆ ನಾವೇ ಕಾರಣ, ನಾವು ಹುಟ್ಟುಹಾಕಿದ ಸಂಸ್ಕೃತಿಯಿಂದ ಇಷ್ಟೆಲ್ಲ ಬೆಳವಣಿಗೆ ಆಗ್ತಿದೆ, ಐ ಆ್ಯಮ್ ಫೀಲ್ ಪ್ರೌಡ್ ಎಂದು ಮಾಜಿ ಸಚಿವ ಎಚ್ ವಿಶ್ವನಾಥ್ ಹೇಳಿದರು.
Recommended Video
ರಾಜಸ್ಥಾನದ ರಾಜಕೀಯ ಬೆಳವಣಿಗೆ ಕುರಿತು ಮೈಸೂರಿನಲ್ಲಿಂದು ಪ್ರತಿಕ್ರಿಯಿಸಿದ ಎಚ್.ವಿಶ್ವನಾಥ್, ಆಡಳಿತ ಪಕ್ಷದ ವಿರುದ್ಧ ಸೆಡ್ಡು ಹೊಡೆದಿದ್ದು ಮೊದಲು ಕರ್ನಾಟಕದಲ್ಲಿ. ಸಂವಿಧಾನದಲ್ಲಿ ಇಂತಹ ಸ್ವಾತಂತ್ರ್ಯ ಹೋರಾಟದ ಮಾದರಿಯ ಹೋರಾಟ ನಡೆಯಬೇಕು. ಇದರಿಂದ ಜನತಂತ್ರ ವ್ಯವಸ್ಥೆಗೆ ಒಂದು ಬೆಲೆ ಬರುತ್ತದೆ. ಒಬ್ಬ ಜನಪ್ರತಿನಿಧಿಯನ್ನು ಅಷ್ಟು ಸುಲಭವಾಗಿ ಯಾರೂ ಕಡೆಗಣಿಸಬಾರದು ಎಂದು ತಿಳಿಸಿದರು.
ರಾಜಸ್ಥಾನದಲ್ಲಿ ಗೆಹ್ಲೋಟ್ ಬೆನ್ನಿಗೆ ನಿಂತ ವಸುಂಧರಾ ರಾಜೇ: ಬಿಜೆಪಿ ಸರಕಾರ ರಚನೆಯ ಮಹತ್ವಾಕಾಂಕ್ಷೆಗೆ ತಣ್ಣೀರು?
ಇತ್ತೀಚಿಗೆ ವಿರೋಧ ಪಕ್ಷದಿಂದ ಆಡಳಿತ ಪಕ್ಷಕ್ಕೆ ಯಾರೂ ಹೋಗ್ತಿಲ್ಲ. ಆಡಳಿತ ಪಕ್ಷದಿಂದಲೇ ವಿರೋಧ ಪಕ್ಷದ ಕಡೆಗೆ ಹೋಗ್ತಿದ್ದಾರೆ. ಅದು ಪಕ್ಷಾಂತರವಲ್ಲ, ಅದು ಶಿಕ್ಷೆ ನೀಡುವಂತಹ ಅಪರಾಧವು ಅಲ್ಲ. ರಾಜಸ್ಥಾನದ ರಾಜಕೀಯ ಬೆಳವಣಿಗೆ ಬಗ್ಗೆ ದೇಶದ್ಯಾಂತ ಚರ್ಚೆ ಆಗಬೇಕು. ಸಂವಿಧಾನಕ್ಕೆ ಗೌರವ ನೀಡುವವರು ಈ ಬಗ್ಗೆ ಮಾತನಾಡಬೇಕು ಎಂದರು.
ತುಳಿಯುವ ಕೆಲಸ ಕಾಂಗ್ರೆಸ್ ನಲ್ಲಿ ನಡೆದಿದೆ
ಕಾಂಗ್ರೆಸ್ ಪಕ್ಷದಲ್ಲಿ ಯುವ ನಾಯಕತ್ವವನ್ನು ದಮನ ಮಾಡಲಾಗುತ್ತಿದೆ. ರಾಹುಲ್ಗಾಂಧಿ ವಯಸ್ಸಿನ ಯುವಕರನ್ನು ತುಳಿಯುವ ಕೆಲಸ ಆಗುತ್ತಿದೆ. ಮಧ್ಯಪ್ರದೇಶದಲ್ಲಿ ಜ್ಯೋತಿರಾಧಿತ್ಯ ಸಿಂಧಿಯಾ, ರಾಜಸ್ಥಾನದಲ್ಲಿ ಸಚಿನ್ ಪೈಲಟ್. ಈ ಎರಡು ಯುವ ನಾಯಕರು ಜಾತ್ಯಾತೀತ ಮನಸ್ಥಿತಿ ಉಳ್ಳವರು. ಕಾಂಗ್ರೆಸ್ಗಾಗಿ ದುಡಿದವರು ಈ ಯುವಕರು. ಇವರನ್ನು ತುಳಿಯುವ ಕೆಲಸ ಕಾಂಗ್ರೆಸ್ ನಲ್ಲಿ ನಡೆದಿದೆ. ಆ ಕಾರಣಕ್ಕಾಗಿಯೇ ಅವರು ಸಿಡಿದೆದ್ದಿದ್ದಾರೆ. ಇಂತಹ ಪರಿಸ್ಥಿತಿಯಿಂದ ಕಾಂಗ್ರೆಸ್ ಶಕ್ತಿ ದೇಶದಲ್ಲಿ ಕ್ಷೀಣಿಸುತ್ತಿದೆ ಎಂದು ಎಚ್.ವಿಶ್ವನಾಥ್ ವಿವರಿಸಿದರು.
ಸಿದ್ದರಾಮಯ್ಯ 4 ಬಾರಿ ಪಕ್ಷಾಂತರ ಮಾಡಿದ್ದಾರೆ
ಮಾಜಿ ಸಿಎಂ ಸಿದ್ದರಾಮಯ್ಯ 4 ಬಾರಿ ಪಕ್ಷಾಂತರ ಮಾಡಿದ್ದಾರೆ. ಮಾಜಿ ಸ್ಪೀಕರ್ ರಮೇಶ್ ಕುಮಾರ್ 10 ಬಾರಿ ಪಕ್ಷಾಂತರ ಮಾಡಿದ್ದಾರೆ. ಇನ್ನೊಬ್ಬ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಅವರು ಪಕ್ಷವನ್ನೇ ಪಕ್ಷಾಂತರ ಮಾಡಿದ್ದಾರೆ. ಇಂತವರೆಲ್ಲ ನಮ್ಮನ್ನು ಪಕ್ಷಾಂತರಿಗಳು ಎಂದು ಕರೆದರು ಎಂದು ವಾಗ್ದಾಳಿ ನಡೆಸಿದರು.
ಕೋವಿಡ್ ಹೆಸರಲ್ಲಿ ಸರ್ಕಾರದಿಂದ ಭಾರಿ ಅಕ್ರಮ: ಕೆಪಿಸಿಸಿ ವಕ್ತಾರ ಆರೋಪ
ಜೆಡಿಎಸ್ ಹಾಗೂ ಕಾಂಗ್ರೆಸ್ನಲ್ಲಿ ಇರೋದು ರಾಜಪ್ರಭುತ್ವ
ಜೆಡಿಎಸ್ ಹಾಗೂ ಕಾಂಗ್ರೆಸ್ನಲ್ಲಿ ಇರೋದು ರಾಜಪ್ರಭುತ್ವ. ಅಪ್ಪನೇ ರಾಷ್ಟ್ರಾಧ್ಯಕ್ಷ, ಮಗನೇ ರಾಜ್ಯಾಧ್ಯಕ್ಷ. ಎರಡು ಪಕ್ಷದ ರಾಜಪ್ರಭುತ್ವದ ವಿರುದ್ಧವೇ ನಾವು ಸಿಡಿದೆದ್ದಿದ್ದು. ಈಗ ಅದು ಮಧ್ಯಪ್ರದೇಶ ಹಾಗೂ ರಾಜಸ್ಥಾನದಲ್ಲಿ ಮುಂದುವರೆದಿದೆ. ಪಕ್ಷಾಂತರ ನಿಷೇಧ ಕಾಯ್ದೆಯನ್ನು ಆಡಳಿತ ಪಕ್ಷದ ಮುಖ್ಯಮಂತ್ರಿಗಳು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದು ಸರ್ವಾಧಿಕಾರಿ ಧೋರಣೆ. ಈ ಬಗ್ಗೆ ದೇಶಾದ್ಯಂತ ಚರ್ಚೆ ಆಗಬೇಕು ಎಂದರು.
ವಿರೋಧ ಪಕ್ಷವಾಗಿ ಆಡಳಿತ ಪಕ್ಷಕ್ಕೆ ಸಹಕಾರ ನೀಡಿ
ಸಿದ್ದರಾಮಯ್ಯನವರೇ ಇದು ಕೊರೊನಾ ಲೆಕ್ಕ ಕೇಳುವ ಸಮಯವಲ್ಲ, ಲೆಕ್ಕ ಎಲ್ಲೂ ಹೋಗೋದಿಲ್ಲ. ಈಗ ಜನರ ರಕ್ಷಣೆ ಸರ್ಕಾರದ ಮೊದಲ ಆದ್ಯತೆ. ಸಿದ್ದರಾಮಯ್ಯಗೆ ಬರೀ ಸಹಕಾರ ಕೇಳೋದು ಮಾತ್ರ ಗೊತ್ತು, ಕೊಡೋದು ಗೊತ್ತಿಲ್ಲ. ವಿರೋಧ ಪಕ್ಷವಾಗಿ ಆಡಳಿತ ಪಕ್ಷಕ್ಕೆ ಸಹಕಾರ ನೀಡಿ. ಹಾಸಿಗೆ ಇಲ್ಲ, ದಿಂಬಿಲ್ಲ ಎನ್ನುವುದನ್ನು ಬಿಟ್ಟು ಕಾಂಗ್ರೆಸ್ ಕೋವಿಡ್ ಆಸ್ಪತ್ರೆ ಆರಂಭಿಸಿ. ಈ ಮೂಲಕ ಜನರ ನೆರವಿಗೆ ಬನ್ನಿ. ಆಡಳಿತ ಪಕ್ಷ, ವಿರೋಧ ಪಕ್ಷ ಎರಡು ಸೇರಿ ಪರಿಸ್ಥಿತಿ ನಿಭಾಯಿಸಬೇಕಿದೆ. ನೀವೂ ಜವಾಬ್ದಾರಿಯಿಂದ ವರ್ತಿಸುವುದನ್ನು ಕಲಿಯಿರಿ. ಲೆಕ್ಕ ಕೇಳುವುದು ತಪ್ಪಲ್ಲ, ಆದರೆ ಈಗ ಅದು ಸಮಯವಲ್ಲ ಎಂದು ಮಾಜಿ ಸಚಿವ ಎಚ್.ವಿಶ್ವನಾಥ್ ಹರಿಹಾಯ್ದರು.