ಮೈಸೂರು ಕೈ ಪಾಳಯದಲ್ಲಿ ಭುಗಿಲೆದ್ದ ಅಸಮಾಧಾನ: ಶಾಸಕ ತನ್ವೀರ್ ಸೇಠ್ ಉಚ್ಚಾಟನೆಗೆ ಆಗ್ರಹ
ಮೈಸೂರು, ಫೆಬ್ರವರಿ 27: ಮೈಸೂರು ಮಹಾನಗರ ಪಾಲಿಕೆ ಮೇಯರ್ ಆಯ್ಕೆ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಆಗಿದ್ದೇ ತಡ, ಇತ್ತ ಕಾಂಗ್ರೆಸ್ ಪಾಳಯದಲ್ಲಿ ಅಸಮಾಧಾನ ಭುಗಿಲೆದ್ದಿದೆ.
ಶಾಸಕ ತನ್ವೀರ್ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಅಂಡ್ ಟೀಂ ರೊಚ್ಚಿಗೆದ್ದಿದ್ದು, ಯಾವಾಗ ತನ್ವೀರ್ ಬೆಂಬಲಿಗರು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರೋ ಅಂದಿನಿಂದ ಮೈಸೂರು ಕಾರ್ಪೊರೇಟರ್ಸ್ ಕೆಂಡಾಮಂಡಲರಾಗಿದ್ದಾರೆ.
ಮೈಸೂರು ಕಾಂಗ್ರೆಸ್ ಬಿಕ್ಕಟ್ಟು; ಡಿಕೆಶಿ ಭೇಟಿಗೆ ತನ್ವೀರ್ ಸೇಠ್ಗೆ ಕರೆ!
ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಮಾಜಿ ಮೇಯರ್ ಅಯೂಬ್ ಖಾನ್, ತನ್ವೀರ್ ಸೇಠ್ 5 ಬಾರಿ MLA ಆಗಿದ್ದರೂ, ಮೆಚ್ಯೂರಿಟಿ ಇಲ್ಲ. ಮಾಜಿ ಸಿಎಂ ಕುಮಾರಸ್ವಾಮಿ ಮೆಚ್ಚಿಸಲು ತನ್ವೀರ್ ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡರು. ತನ್ವೀರ್ ಸೇಠ್ ಅವರ ಏಕಪಕ್ಷೀಯ ತೀರ್ಮಾನದಿಂದ ಜೆಡಿಎಸ್ ಜತೆ ಮೈತ್ರಿ ಆಗಿದೆ ಎಂದು ಕಿಡಿಕಾರಿದರು.
ಜೆಡಿಎಸ್ ಪಕ್ಷಕ್ಕೆ ಮೇಯರ್ ಕೊಡುವುದಕ್ಕೆ ನಮಗೆ ಒಪ್ಪಿಗೆ ಇರಲಿಲ್ಲ. ಬಿಜೆಪಿ ದೂರ ಇಡುವುದು ನಮ್ಮೆಲ್ಲರ ಅಭಿಪ್ರಾಯ ಆಗಿತ್ತು. ಅದಕ್ಕಾಗಿ ಕಾಂಗ್ರೆಸ್ ಪಕ್ಷವನ್ನು ಅಡಮಾನ ಇಡುವ ಪ್ರಮೇಯ ಇರಲಿಲ್ಲ. ನಮ್ಮ ಮೇಯರ್ ಅಭ್ಯರ್ಥಿಯನ್ನು ವಿತ್ ಡ್ರಾ ಮಾಡಿಸಬೇಕಿತ್ತು. ಅನಗತ್ಯ ಕಾಂಗ್ರೆಸ್ ಅಭ್ಯರ್ಥಿಯನ್ನ ನಿಲ್ಲಿಸಿ ಸೋಲಿಸಿದರು ಎಂದು ಅಯೂಬ್ ಖಾನ್ ಆರೋಪಿಸಿದರು.
ಅಲ್ಲದೇ, ತನ್ವೀರ್ ಸೇಠ್ ಅವರನ್ನು ಮಂತ್ರಿ ಮಾಡಿದ್ದೆ ಸಿದ್ದರಾಮಯ್ಯ. ಚುನಾವಣೆ ದಿನ ಸಿದ್ದರಾಮಯ್ಯನವರು ತನ್ವೀರ್ ಸೇಠ್ ಅವರಿಗೆ ಕರೆ ಮಾಡಿದ್ದು, ಬರೋಬ್ಬರಿ 12 ಬಾರಿ ಕಾಲ್ ಮಾಡಿದ್ದಾರೆ. ಆದರೆ ರಿಸೀವ್ ಮಾಡಲಿಲ್ಲ. ತನ್ವೀರ್ ಅವರು ಸಿದ್ದರಾಮಯ್ಯನವರ ಋಣ ತೀರಿಸಬೇಕಿತ್ತು. ಬದಲಾಗಿ ಸಿದ್ದರಾಮಯ್ಯ ವಿರುದ್ಧವೇ ತನ್ವೀರ್ ಷಡ್ಯಂತ್ರ ರೂಪಿಸುತ್ತಿದ್ದಾರೆ. ಹೀಗಾಗಿ ಅವರನ್ನು ಪಕ್ಷದಿಂದ ಉಚ್ಛಾಟಿಸಬೇಕು ಅಂತ ಆಗ್ರಹಿಸಿದರು.
ಹೈಕಮಾಂಡ್ ತೀರ್ಮಾನದ ವಿರುದ್ಧವೇ ತನ್ವೀರ್ ನಡೆದುಕೊಂಡರು. ಹೀಗಾಗಿ ಅವರ ವಿರುದ್ಧ ಕಾಂಗ್ರೆಸ್ ನಾಯಕರು ಕ್ರಮ ಕೈಗೊಳ್ಳಬೇಕು ಅಂತ ಮೈಸೂರು ಮಾಜಿ ಮೇಯರ್ ಅಯೂಬ್ ಖಾನ್ ಆಗ್ರಹಿಸಿದ್ದಾರೆ.