ವರ್ಗಾವಣೆ ಪ್ರಶ್ನಿಸಿ ಕೆಎಟಿ ಮೆಟ್ಟಿಲೇರಿದ ಮೈಸೂರಿನ ಹಿಂದಿನ ಡಿಸಿ ಬಿ. ಶರತ್
ಮೈಸೂರು, ಸೆಪ್ಟೆಂಬರ್ 30: ತಮ್ಮನ್ನು ಮೈಸೂರಿನ ಜಿಲ್ಲಾಧಿಕಾರಿ ಹುದ್ದೆಯಿಂದ ದಿಢೀರ್ ವರ್ಗಾವಣೆ ಮಾಡಿದ್ದನ್ನು ಪ್ರಶ್ನಿಸಿ ಬಿ. ಶರತ್ ಅವರು ಇಂದು ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ)ಯ ಮೊರೆ ಹೋಗಿದ್ದಾರೆ.
ಮೈಸೂರಿನ ಜಿಲ್ಲಾಧಿಕಾರಿಯಾಗಿದ್ದ ಅಭಿರಾಮ್ ಬಿ.ಶಂಕರ್ ಅವರ ಜಾಗಕ್ಕೆ ತಿಂಗಳ ಹಿಂದಷ್ಟೇ ಕಲಬುರಗಿ ಜಿಲ್ಲಾಧಿಕಾರಿಯಾಗಿದ್ದ ಶರತ್ ಬಿ ಅವರನ್ನು ನಿಯೋಜಿಸಿತ್ತು. ಸೆಪ್ಟೆಂಬರ್ 28ಕ್ಕೆ ಇದ್ದಕ್ಕಿದ್ದಂತೆ ರೋಹಿಣಿ ಸಿಂಧೂರಿ ಅವರನ್ನು ನೇಮಕ ಮಾಡಲಾಗಿದೆ. ಆಡಳಿತಾತ್ಮಕ ನಿಯಮಗಳ ಪ್ರಕಾರ ಸೂಕ್ತ ಕಾರಣ ನೀಡದೆ, ದಿಢೀರ್ ವರ್ಗಾವಣೆ ಮಾಡಿರುವ ಸರ್ಕಾರದ ಆದೇಶ ನಿಯಮಬಾಹಿರವಾಗಿದೆ. ಹೀಗಾಗಿ ತಮ್ಮನ್ನು ವರ್ಗಾವಣೆ ಮಾಡಿ ಹೊರಡಿಸಿರುವ ಆದೇಶವನ್ನು ರದ್ದುಗೊಳಿಸಬೇಕು ಎಂದು ಬಿ. ಶರತ್ ಕೆಎಟಿಗೆ ಅರ್ಜಿ ಸಲ್ಲಿಸಿದ್ದಾರೆ.
ಮೈಸೂರು ಜಿಲ್ಲಾಧಿಕಾರಿಯಾಗಿ ರೋಹಿಣಿ ಸಿಂಧೂರಿ ನೇಮಕ
ಇಂದು ಅರ್ಜಿ ವಿಚಾರಣೆ ನಡೆಸಿದ ಕೆಎಟಿ 30 ದಿನಕ್ಕೆ ಅಧಿಕಾರಿ ಬಿ. ಶರತ್ ಅವರನ್ನು ವರ್ಗಾಯಿಸಿದ್ದೇಕೆ ಎಂದು ಪ್ರಶ್ನಿಸಿ, ಅರ್ಜಿ ಸಂಬಂಧ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ವಿಚಾರಣೆಯನ್ನು ಅಕ್ಟೋಬರ್ 6ಕ್ಕೆ ಮುಂದೂಡಿದೆ.
ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಹಾಗೂ ದಸರಾ ಸಿದ್ಧತೆಯ ನಿರ್ವಹಣೆಯಲ್ಲಿ ಕುರಿತು ಬಿ. ಶರತ್ ಅವರು ಹಿಂದುಳಿದಿದ್ದರು ಎಂಬ ಮಾತುಗಳೂ ಕೇಳಿಬಂದಿದ್ದವು. ಡಿಸಿ ಶರತ್ ವರ್ಗಾವಣೆ ಖಂಡಿಸಿ ಜಿಲ್ಲೆಯಲ್ಲಿ ಪ್ರತಿಭಟನೆಗಳೂ ನಡೆದಿದ್ದವು.