ಚುನಾವಣಾ ಜಂಜಾಟ ಅಂತ್ಯ: ನಿಸರ್ಗ ಕೇಂದ್ರಕ್ಕೆ ಹೊರಟ ಸಿದ್ದರಾಮಯ್ಯ
Recommended Video
ಮೈಸೂರು, ಜೂನ್ 13: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಪ್ರಕೃತಿ ಚಿಕಿತ್ಸಾ ಕೇಂದ್ರಕ್ಕೆ ಜೂನ್ 16 ರಂದು ದಾಖಲಾಗಲಿದ್ದಾರೆ ಎಂಬ ಸುದ್ದಿ ಕೇಳಿ ಬಂದಿದೆ.
ಕಳೆದ ಆರು ತಿಂಗಳಿನಿಂದ ರಾಜ್ಯದಾದ್ಯಂತ ಸುತ್ತಾಡಿ ಕಾಂಗ್ರೆಸ್ ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಬೇಕೆಂಬ ಹಠಕ್ಕೆ ಬಿದ್ದಿದ್ದರು. ರಾಜ್ಯ ಮಾತ್ರವಲ್ಲದೆ ಆಗಾಗ್ಗೆ ದೆಹಲಿಗೆ ತೆರಳುತ್ತಿದ್ದ ಅವರು ಚುನಾವಣಾ ಸಮಯದಲ್ಲಿ ಒಂದು ನಿಮಿಷವನ್ನೂ ಹಾಳು ಮಾಡದೆ ಪಕ್ಷಕ್ಕಾಗಿ ದುಡಿದಿದ್ದರು.
ಮುದುಕನಿಗ್ಯಾಕಪ್ಪ ಮತ್ತೊಂದು ಮದುವೆ ? ಚಿಮ್ಮನಕಟ್ಟಿಗೆ ಸಿದ್ದು ಚಿನಕುರಳಿ
ಜತೆಗೆ ತಾನೇ ಮತ್ತೊಮ್ಮೆ ಮುಖ್ಯಮಂತ್ರಿಯಾಗುವ ಕನಸು ಕಂಡಿದ್ದರು. ಆದರೆ ಅದ್ಯಾವುದೂ ಆಗದೆ ಅವರ ಶ್ರಮಕ್ಕೂ ಪ್ರತಿಫಲ ಸಿಕ್ಕಿರಲಿಲ್ಲ. ಇದೆಲ್ಲದಿಂದ ಅವರು ದೈಹಿಕ ಮತ್ತು ಮಾನಸಿಕವಾಗಿ ಬಳಲಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ ಹೀಗಾಗಿ ಅವರಿಗೆ ವಿಶ್ರಾಂತಿಯ ಅಗತ್ಯವೂ ಇದೆ ಎಂದರೆ ತಪ್ಪಾಗಲಾರದು.
ಈ ನಡುವೆ ಸಿದ್ದರಾಮುಯ್ಯನವರು ಚಿಕಿತ್ಸಾ ಕೇಂದ್ರಕ್ಕೆ ದಾಖಲಾಗುವ ಸುದ್ದಿ ತಿಳಿಯುತ್ತಿದ್ದಂತೆಯೇ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಶ್ರೀ ವೀರೇಂದ್ರ ಹೆಗ್ಗಡೆಯವರು ದೂರವಾಣಿ ಮೂಲಕ ಸಂಪರ್ಕ ಮಾಡಿ ಮಾತುಕತೆ ನಡೆಸಿದ್ದಾರೆ.
ಚುನಾವಣೆಯ ಬಳಿಕ ಚಿಕಿತ್ಸೆ ಪಡೆಯುವ ನಿರ್ಧಾರ ಮಾಡಿದ್ದೆ. ಈ ಹಿನ್ನೆಲೆಯಲ್ಲಿ ಬರುತ್ತಿದ್ದೇನೆ 10 ರಿಂದ 12 ದಿನಗಳ ಕಾಲ ಚಿಕಿತ್ಸಾ ಕೇಂದ್ರದಲ್ಲಿ ಚಿಕಿತ್ಸೆಗೆ ಒಳಗಾಗುತ್ತೇನೆಂದು ಸಿದ್ದರಾಮಯ್ಯನವರು ಹೆಗ್ಗಡೆಯವರಿಗೆ ತಿಳಿಸಿದ್ದಾರೆ ಎಂದು ಹೇಳಲಾಗಿದೆ.
ಸಿದ್ದರಾಮಯ್ಯನವರು ಈ ಹಿಂದೆಯೂ ಚುನಾವಣೆ ಬಳಿಕ ತಪ್ಪದೇ ಈ ಚಿಕಿತ್ಸಾ ಕೇಂದ್ರಕ್ಕೆ ತೆರಳಿ ಚಿಕಿತ್ಸೆ ಪಡೆದಿದ್ದನ್ನು ಸ್ಮರಿಸಬಹುದಾಗಿದ್ದು, ಅದರಂತೆ ಈ ಬಾರಿಯೂ ಚುನಾವಣೆ ನಂತರ ತೆರಳಿ ಚಿಕಿತ್ಸೆ ಪಡೆಯುತ್ತಿದ್ದಾರೆ.