ಯಾರೂ ಪಕ್ಷ ಬಿಡಲ್ಲ, ಸಂಪುಟ ವಿಸ್ತರಣೆಯೂ ಇಲ್ಲ; ಸಿದ್ದರಾಮಯ್ಯ
ಮೈಸೂರು, ಮೇ 27: ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟಗೊಂಡ ಬಳಿಕ ಸೋಲಿನ ಪರಾಮರ್ಶೆಗಳು ನಡೆಯುತ್ತಿವೆ. ಇದೇ ಸಂಬಂಧವಾಗಿ, ಅತೃಪ್ತ ಶಾಸಕರನ್ನು ಸಮಾಧಾನಪಡಿಸಲು ಸಚಿವ ಸಂಪುಟ ವಿಸ್ತರಣೆ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿದ್ದವು. ಈ ಮಾತಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಸ್ಫಷ್ಟನೆ ನೀಡಿದ್ದಾರೆ. ಸಂಪುಟ ಪುನರ್ ರಚನೆಯಾಗಲೀ, ವಿಸ್ತರಣೆಯಾಗಲೀ ನಡೆಸಲು ತೀರ್ಮಾನಿಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಳ್ಳಿಯವರ ನಿಧನದಿಂದ ತೆರವಾದ ಸ್ಥಾನವನ್ನು ಮಾತ್ರ ಭರ್ತಿ ಮಾಡಲಾಗುತ್ತದೆ. ಅದನ್ನು ಹೊರತುಪಡಿಸಿ ಬೇರೆ ಯಾವುದೇ ಪುನರ್ ರಚನೆ ಇಲ್ಲ. ಕಾಂಗ್ರೆಸ್ ನಲ್ಲಿ 1, ಜೆಡಿಎಸ್ ನಲ್ಲಿ 2 ಸ್ಥಾನ ಭರ್ತಿಯಾಗಬೇಕಿದೆ. ಕಾಂಗ್ರೆಸ್ 1 ಸ್ಥಾನ ಭರ್ತಿ ಮಾಡಲಿದೆ, ಜೆಡಿಎಸ್ ನದ್ದು ಗೊತ್ತಿಲ್ಲ ಎಂದರು.
ಸಿದ್ದರಾಮಯ್ಯ ತಂತ್ರದಿಂದಾಗಿ ರಮೇಶ್ ಜಾರಕಿಹೊಳಿ ಏಕಾಂಗಿ!
ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಬಿಡುವ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ರಮೇಶ್ ಜಾರಕಿಹೊಳಿ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಬಿಡುವುದಿಲ್ಲ. ಕಳೆದ ವರ್ಷ 2018ರಲ್ಲಿ ರಾಜ್ಯದ ಆಡಳಿತಕ್ಕೆ ಸಂಬಂಧಿಸಿದಂತೆ ಜನರು ಜನಾದೇಶ ನೀಡಿದ್ದರು. ಹೀಗಾಗಿ ಲೋಕಸಭೆ ಫಲಿತಾಂಶ, ರಾಜ್ಯ ಸರ್ಕಾರದ ಮೇಲೆ ಯಾವ ಪರಿಣಾಮ ಬೀರುವುದಿಲ್ಲ. ನಾವು ಉಪ ಚುನಾವಣೆಗಳಲ್ಲಿ ಗೆದ್ದಿದ್ದೆವು. ಆಗ ಮೋದಿ ರಾಜೀನಾಮೆ ಕೊಟ್ಟಿದ್ದರೆ ಎಂದು ಪ್ರಶ್ನಿಸಿದರು. ಈ ಚುನಾವಣೆಯಲ್ಲಿ ಜನರು ನೀಡಿರುವ ತೀರ್ಪನ್ನು ನಾವು ಸ್ವಾಗತಿಸುತ್ತೇವೆ. ಸಚಿವ ಸಂಪುಟ ಪುನರ್ ರಚನೆ ಆಗಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಜೂನ್ 1ಕ್ಕೆ ಸರ್ಕಾರ ಬೀಳುತ್ತೆ ಎಂಬ ಹೇಳಿಕೆ ವಿಚಾರದ ಕುರಿತು ಮಾತನಾಡಿದ ಸಿದ್ದರಾಮಯ್ಯ, ಯಡಿಯೂರಪ್ಪ ಮೇಲಿಂದ ಮೇಲೆ ಹೀಗೆ ಹೇಳುತ್ತಲೇ ಇದ್ದಾರೆ. ಜೂನ್ 1ರಂದು ಸರ್ಕಾರ ಬೀಳದೇ ಇದ್ದರೆ ರಾಜೀನಾಮೆ ಕೊಡ್ತಾರಾ? ಎಂದು ಪ್ರಶ್ನೆ ಮಾಡಿದರು. ಯಡಿಯೂರಪ್ಪ ರಾಜ್ಯ ಸರ್ಕಾರ ಬೀಳುತ್ತೆ ಅಂತ ಒಂದು ವರ್ಷದಿಂದಲೂ ಹೇಳುತ್ತಲೇ ಇದ್ದಾರೆ. ಆದರೆ ಇದುವರೆಗೂ ನಿಜವಾಗಿಲ್ಲ. ಒಂದು ವೇಳೆ ಸರ್ಕಾರ ಬೀಳದೇ ಇದ್ದರೆ ರಾಜಕೀಯದಿಂದ ನಿವೃತ್ತಿ ಪಡೀತಾರಾ ? ಎಂದು ಕಿಡಿಕಾರಿದರು.
ಕುಮಾರಸ್ವಾಮಿ-ಸಿದ್ದರಾಮಯ್ಯ ಭೇಟಿ: ಮಹತ್ವದ ಮಾತುಕತೆ
ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ನೇತೃತ್ವದಲ್ಲಿ ಆಪರೇಷನ್ ಕಮಲ ವಿಚಾರಕ್ಕೆ ಪ್ರತಿಕ್ರಿಯಿಸಿ, ಶಾಸಕ ಡಾ.ಸುಧಾಕರ್ ಹಾಗೂ ರಮೇಶ್ ಜಾರಕಿಹೊಳಿ ಎಸ್.ಎಂ.ಕೃಷ್ಣ ಮನೆಗೆ ಒಟ್ಟಿಗೆ ಭೇಟಿ ನೀಡಿದ್ದು ಕಾಕತಾಳೀಯ. ಶಾಸಕ ಸುಧಾಕರ್ ಭೇಟಿಗೆ ರಮೇಶ್ ಜಾರಕಿಹೊಳಿ ಬಂದಿದ್ದರು. ಆ ವೇಳೆ ಸುಧಾಕರ್ ಎಸ್.ಎಂ. ಕೃಷ್ಣ ಮನೆಗೆ ಹೊರಟಿದ್ದರು. ಇಬ್ಬರು ಸೇರಿ ಎಸ್.ಎಂ.ಕೃಷ್ಣ ಅವರನ್ನು ಭೇಟಿ ಮಾಡಿದ್ದಾರೆ. ಅವರ ಮನೆಯಲ್ಲಿ ಯಡಿಯೂರಪ್ಪ, ಆರ್. ಅಶೋಕ್ ಅಥವಾ ಸುಮಲತಾ ಅಲ್ಲಿಗೆ ಬರೋದು ಇಬ್ಬರಿಗೂ ಗೊತ್ತಿರಲಿಲ್ಲ. ಎಲ್ಲರ ಭೇಟಿ ಆಕಸ್ಮಿಕ. ಅದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ರಮೇಶ್ ಜಾರಕಿಹೊಳಿ ಸೇರಿದಂತೆ ಯಾರೊಬ್ಬರೂ ಕಾಂಗ್ರೆಸ್ ಬಿಟ್ಟು ಹೋಗಲ್ಲ ಎಂದು ಸ್ಪಷ್ಟಪಡಿಸಿದರು.