ವಿರೋಧ ಪಕ್ಷಗಳ ಭಯದಿಂದ ವಿಧಾನಸಭಾ ಅಧಿವೇಶನ ಕರೆಯುತ್ತಿಲ್ಲ
ಮೈಸೂರು, ಜುಲೈ 1: "ರಾಜ್ಯ ಸರ್ಕಾರಕ್ಕೆ ಆಡಳಿತ ಪಕ್ಷಗಳ ಭಯವಿದ್ದು, ಈ ಕಾರಣದಿಂದಾಗಿ ವಿಧಾನಸಭಾ ಅಧಿವೇಶನ ಕರೆಯುತ್ತಿಲ್ಲ,'' ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.
ಮೈಸೂರಿನಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ರಾಜ್ಯ ಸರ್ಕಾರಕ್ಕೆ ತಮ್ಮ ಬಣ್ಣ ಬಯಲಾಗುವ ಹೆದರಿಕೆ ಇದೆ. ಜೊತೆಗೆ ವಿರೋಧ ಪಕ್ಷಗಳನ್ನು ಎದುರಿಸಲು ಆಡಳಿತ ಪಕ್ಷಕ್ಕೆ ಭಯವಿದೆ. ಹೀಗಾಗಿಯೇ ಅಧಿವೇಶನ ಕರೆಯುತ್ತಿಲ್ಲ. ಆದರೆ ರಾಜ್ಯದಲ್ಲಿ ತುರ್ತಾಗಿ ವಿಧಾನಸಭಾ ಅಧಿವೇಶನ ಕರೆಯಬೇಕಿದೆ,'' ಎಂದು ಆಗ್ರಹಿಸಿದರು.
ರಾಜಕೀಯ ವಿಶೇಷ: ಗೌಡರ ಕುಟುಂಬದ ಮೇಲಿನ ವಾಗ್ದಾಳಿ ಫಲ ಕೊಡುತ್ತಾ?
ಕೋವಿಡ್ನಂತಹ ತುರ್ತುಪರಿಸ್ಥಿತಿಯಲ್ಲಿ ಅಧಿವೇಶನ ಕರೆಯದೆ, ಇನ್ಯಾವ ಕಾಲದಲ್ಲಿ ಅಧಿವೇಶನ ಕರೆಯುತ್ತಾರೆ?'' ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, "ಆಡಳಿತ ಪಕ್ಷದ ನಾಯಕರಿಗೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇದ್ದರೆ ತುರ್ತಾಗಿ ಮುಂಗಾರು ಅಧಿವೇಶನ ಕರೆಯಿರಿ,'' ಎಂದು ಒತ್ತಾಯಿಸಿದರು.
ಇದೇ ವೇಳೆ ರಾಜ್ಯದಲ್ಲಿ SSLC ಪರೀಕ್ಷೆ ನಡೆಸುವ ಸರ್ಕಾರದ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮಾಜಿ ಸಿಎಂ, "ರಾಜ್ಯದ ಇವತ್ತಿನ ಪರಿಸ್ಥಿತಿಯಲ್ಲಿ SSLC ಪರೀಕ್ಷೆ ನಡೆಸಬಾರದು. PUC ಪರೀಕ್ಷೆ ರದ್ದಾದ ಮೇಲೆ SSLC ಪರೀಕ್ಷೆ ಯಾಕೆ ಮಾಡುತ್ತಿದ್ದೀರಿ? ಸರ್ಕಾರದಲ್ಲಿ ಸಚಿವರ ನಡುವೆ ಸಮನ್ವಯದ ಕೊರತೆ ಇದೆ, ಸಚಿವ ಸಂಪುಟ ಸಭೆ ನಡೆಸದೆ ನಿರ್ಧಾರ ಮಾಡಲಾಗಿದೆ. ಪರೀಕ್ಷೆ ನಡೆಸುವ ಬಗ್ಗೆ ಆರೋಗ್ಯ ಸಚಿವರು ಮಾಹಿತಿ ಇಲ್ಲ ಅಂದಿದ್ದಾರೆ. ಆದರೂ ಏಕೆ ಪರೀಕ್ಷೆ ನಡೆಸುತ್ತಿದ್ದಾರೆ ಗೊತ್ತಿಲ್ಲ,'' ಎಂದು ಕಿಡಿಕಾರಿದರು.
ಕೊರೊನಾ ಲಸಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು, "ಕೊರೊನಾ ಲಸಿಕೆ ವಿಚಾರದಲ್ಲಿ ಸುಧಾಕರ್ ಸುಳ್ಳು ಹೇಳುತ್ತಿದ್ದಾರೆ. ಲಸಿಕೆ ಸ್ಟಾಕ್ ಇದ್ದರೆ ಜನ ಏಕೆ ಲಸಿಕೆ ಪಡೆಯಲು ಕ್ಯೂ ನಿಲ್ಲುತ್ತಿದ್ದರು? ಲಸಿಕೆಗಾಗಿ ಜನರು ಪರದಾಡುವ ಪರಿಸ್ಥಿತಿ ಇದ್ದು, ಸರ್ಕಾರಕ್ಕೆ ಲಸಿಕೆ ಪೂರೈಸಲು ಆಗುತ್ತಿಲ್ಲ. ಈ ವಿಷಯದಲ್ಲೂ ಸಹ ರಾಜ್ಯ ಸರ್ಕಾರದಲ್ಲಿ ಸಚಿವರ ನಡುವೆ ಸಮನ್ವಯತೆ ಇಲ್ಲ, ಲಸಿಕೆ ಹಂಚಿಕೆಯಲ್ಲಿ ಕೇಂದ್ರ ಮತ್ತು ರಾಜ್ಯ ಎರಡು ಸರ್ಕಾರ ವಿಫಲವಾಗಿವೆ. ಸರಿಯಾದ ಪ್ಲ್ಯಾನ್ ಮಾಡದ ಪರಿಣಾಮ ಜನ ಲಸಿಕೆಗಾಗಿ ಅಲೆಯುವ ಸ್ಥಿತಿ ನಿರ್ಮಾಣವಾಗಿದೆ,'' ಎಂದು ಹರಿಹಾಯ್ದರು.
ಇದೇ ವೇಳೆ ಸೂತ್ತೂರು ಶಾಖಾ ಮಠಕ್ಕೆ ಭೇಟಿ ನೀಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಸುತ್ತೂರು ಶ್ರೀಗಳ ಯೋಗಕ್ಷೇಮ ವಿಚಾರಿಸಿದರು. ಅಲ್ಲದೇ ಮಠದಲ್ಲೇ ಉಪಹಾರ ಸೇವಿಸಿದ ಸಿದ್ದರಾಮಯ್ಯರಿಗೆ ಶಾಸಕ ಯತೀಂದ್ರ ಸಿದ್ದರಾಮಯ್ಯ ಮತ್ತಿತರರು ಸಾಥ್ ನೀಡಿದರು.