ಬಿಎಸ್ವೈ ಸಂಪುಟದ ಸಚಿವರೊಬ್ಬರ ವಿರುದ್ದ 'ನಾಲಗೆ, ತೆವಲು' ಪದಬಳಸಿದ ಕುಮಾರಸ್ವಾಮಿ
ಮೈಸೂರು, ಮಾರ್ಚ್ 8: ಸಾಲಮನ್ನಾ ಕುರಿತು ಹೇಳಿಕೆ ನೀಡಿದ್ದ ಕೃಷಿ ಸಚಿವ ಬಿ.ಸಿ ಪಾಟೀಲ್ ವಿರುದ್ದ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
"ಕೃಷಿ ಸಚಿವರೇ ನಾಲಗೆ ಇದೆ ಅಂತ ತೆವಲಿಗೆ ಮಾತನಾಡಬೇಡಿ. ಸುಮ್ಮನೆ ಸುಳ್ಳು ಹೇಳಿಕೊಂಡು ಓಡಾಡಬೇಡಿ" ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ವಿರುದ್ದ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ದೇಶದ್ರೋಹಿಗಳಿಗೆ ಗುಂಡು: ಮತ್ತೆ ಗುಡುಗಿದ ಸಚಿವ ಬಿ.ಸಿ ಪಾಟೀಲ್
"ಕುಮಾರಸ್ವಾಮಿ ಬರೀ ಸಾಲಮನ್ನಾ ಘೋಷಣೆ ಮಾಡಿಹೋದರೇ ಹೊರತು ಅದಕ್ಕಾಗಿ ಸೂಕ್ತ ರೂಪು ರೇಷೆ ಸಿದ್ಧಪಡಿಸಲಿಲ್ಲ. ಬಾಯಿಗೆ ಬಂದಂತೆ ಘೋಷಣೆ ಮಾಡಿ ಹೋಗುವುದು ದೊಡ್ಡ ವಿಷಯವೇನಲ್ಲ" ಎಂದು ಸಚಿವ ಬಿ.ಸಿ ಪಾಟೀಲ್ ಹೇಳಿಕೆ ನೀಡಿದ್ದರು.
ಈ ಕುರಿತು ಭಾನುವಾರ (ಮಾ 8) ಮೈಸೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, "ಆಯಪ್ಪನಿಗೆ ಸಾಲ ಮನ್ನಾದ ಬಗ್ಗೆ ಮಾಹಿತಿಯೇ ಇಲ್ಲ. ಸಾಲಮನ್ನಾದ ಬಗ್ಗೆ ಆ ಕೃಷಿ ಸಚಿವರಿಗೆ ವಿಷಯವೇ ಗೊತ್ತಿಲ್ಲ ಅನಿಸುತ್ತೆ" ಎಂದು ವಾಗ್ದಾಳಿ ನಡೆಸಿದರು.
ಕಣ್ಣೀರು ಹಾಕುವ ಸಿಎಂ ಹೋಗಿ, ಕಣ್ಣೀರು ಒರೆಸುವ ಸಿಎಂ ಬಂದಿದ್ದಾರೆ
800 ಕೋಟಿ ಹಣವನ್ನ ಇನ್ನು ಬಿಡುಗಡೆ ಮಾಡಿಲ್ಲ
"ನಾನು ಅಧಿಕಾರದಿಂದ ಇಳಿಯುವಾಗ ಬರಿ ಘೋಷಣೆ ಮಾಡಿಲ್ಲ. ಬದಲಿಗೆ 25 ಸಾವಿರ ಕೋಟಿ ಹಣ ಹೊಂದಿಸಿ ಅಧಿಕಾರದಿಂದ ಇಳಿದಿದ್ದೇನೆ. ನಾನು ಹೊಂದಿಸಿಕೊಟ್ಟಿದ್ದ 800 ಕೋಟಿ ಹಣವನ್ನ ಇನ್ನು ಬಿಡುಗಡೆ ಮಾಡದೆ ಹಾಗೆಯೇ ಇಟ್ಟುಕೊಂಡಿದ್ದಾರೆ" - ಕುಮಾರಸ್ವಾಮಿ.
ತೆವಲಿಗೆ ಮಾತನಾಡೋದು, ಸುಳ್ಳು ಹೇಳಿಕೊಂಡು ಓಡಾಡೋದು ಬೇಡ
"ನಾವು ರೈತರಿಂದ ಸರಳ ದಾಖಲೆ ಕೇಳಿದ್ವಿ. ರೈತರ ದಾಖಲೆ ತಪ್ಪಿದ್ದರೆ ಸರಿಪಡಿಸೋದು ಇಲಾಖೆ ಕೆಲಸ. ಅದನ್ನ ಬಿಟ್ಟು ತೆವಲಿಗೆ ಮಾತನಾಡೋದು, ಸುಳ್ಳು ಹೇಳಿಕೊಂಡು ಓಡಾಡೋದು ಬೇಡ" ಎಂದು ಸಚಿವ ಬಿ.ಸಿ ಪಾಟೀಲ್ ಗೆ ಕುಮಾರಸ್ವಾಮಿ ಟಾಂಗ್ ಕೊಟ್ಟರು.
ಶಾದಿ ಭಾಗ್ಯ ಒಂದೇ ಅಲ್ಲ
"ಬಿಜೆಪಿ ಸರ್ಕಾರ ಶಾದಿ ಭಾಗ್ಯ ಒಂದೇ ಅಲ್ಲ ರಾಜ್ಯದ ಎಲ್ಲಾ ಅಭಿವೃದ್ಧಿ ಕಾರ್ಯಗಳನ್ನ ಸ್ಥಗಿತ ಮಾಡಿದೆ. ಬೆಳಗಾವಿಯಲ್ಲಿ ಬಿಜೆಪಿ ಶಾಸಕರೇ ನನ್ನ ಕ್ಷೇತ್ರ ಅನುದಾನ ಬಂದಿಲ್ಲ ಅಂತ ಗಲಾಟೆ ಮಾಡಿದ್ದಾರೆ. ಅದು ಸಹ ಮಂತ್ರಿಯನ್ನ ಕೂರಿಸಿಕೊಂಡು ಅನುದಾನ ಕೊಡಿ ಅಂತ ಕೇಳಿದ್ದಾರೆ". - ಕುಮಾರಸ್ವಾಮಿ
ಕೃಷಿ ಸಚಿವರು ನಾಲಗೆ ಇದೆ ಎಂದು ತೆವಲು ತೋರಿಸುವುದಲ್ಲ
"ಸಿಎಂ ನೆರೆ ಹಾವಳಿಯ ಜನರಿಗೆ ಹಣ ಬಿಡುಗಡೆ ಮಾಡಿ ಅಂತ ಹೇಳಿದ್ದಾರೆ. ಆದ್ರೂ ಅಧಿಕಾರಿಗಳು ಬಿಡುಗಡೆ ಮಾಡಿಲ್ಲ ಅಂತ ಬಿಜೆಪಿ ಶಾಸಕರೇ ಆರೋಪಿಸಿದ್ದಾರೆ. ಇದು ಸದ್ಯದ ಬಿಜೆಪಿ ಸರ್ಕಾರದ ಸ್ಥಿತಿ. ಕೃಷಿ ಸಚಿವರು ನಾಲಗೆಇದೆ ಎಂದು ತೆವಲು ತೋರಿಸುವುದಲ್ಲ" ಎಂದು ಕುಮಾರಸ್ವಾಮಿ ಕಟು ಶಬ್ದಲ್ಲಿ ಟೀಕಿಸಿದರು.