ಮುಂದಿನ ಚುನಾವಣೆಗೆ ಎಲ್ಲಿಂದ ಸ್ಪರ್ಧೆ? ಕುಮಾರಸ್ವಾಮಿ ಅಚ್ಚರಿಯ ನಿರ್ಧಾರ
ಮೈಸೂರು, ಫೆ 11: ಮೇ 2023ರ ಒಳಗೆ ನಡೆಯಬೇಕಾಗಿರುವ ಅಸೆಂಬ್ಲಿ ಚುನಾವಣೆಗೆ ಮೂರು ಪಕ್ಷಗಳು ಪೂರ್ವತಾಲೀಮನ್ನು ಆರಂಭಿಸಿದೆ. ಅದರ ಭಾಗವಾಗಿಯೇ ಜೆಡಿಎಸ್ಸಿನಿಂದ ಕಾರ್ಯಾಗಾರ, ಕಾಂಗ್ರೆಸ್ಸಿನಿಂದ ಮೇಕೆದಾಟು ಯಾತ್ರೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.
ಯಾರು ಎಲ್ಲಿಂದ ಸ್ಪರ್ಧಿಸುತ್ತಾರೆ ಎನ್ನುವ ಚರ್ಚೆಗೆ ಪೀಠಿಕೆ ಹಾಡಿದವರು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ. ಬಾದಾಮಿಯಿಂದಲೋ, ಕೋಲಾರದಿಂದಲೋ, ಚಾಮರಾಜಪೇಟೆಯಿಂದಲೋ ಅಥವಾ ಚಾಮುಂಡೇಶ್ವರಿ ಕ್ಷೇತ್ರದಿಂದಲೋ ಎನ್ನುವ ಚರ್ಚೆ ನಡೆಯುತ್ತಲೇ ಇತ್ತು. ಈಗ ಆ ಚರ್ಚೆಗೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ.
ಹಿಜಾಬ್: 'ಬಿಜೆಪಿ, ಕಾಂಗ್ರೆಸ್ ಪಕ್ಷಗಳು ಕಂಡವರ ಮಕ್ಕಳನ್ನು ಬಾವಿಗೆ ತಳ್ಳಿ ತಮಾಷೆ ನೋಡುತ್ತಿವೆ'
ದೇವೇಗೌಡ್ರ ಕುಟುಂಬದಿಂದ ಯಾರ್ಯಾರು ಸ್ಪರ್ಧಿಸಲಿದ್ದಾರೆ ಎನ್ನುವ ಚರ್ಚೆಯೂ ಆರಂಭವಾಗಿದೆ. ಅನಿತಾ ಕುಮಾರಸ್ವಾಮಿಯವರು ಸ್ಪರ್ಧಿಸುವುದಿಲ್ಲ ಎಂದು ಕನ್ನಡಪರ ಸಂಘಟನೆಯ ಸದಸ್ಯರ ಜೊತೆಗಿನ ಮುಕ್ತ ಮಾತುಕತೆಯ ವೇಳೆ ಹೇಳಿದ್ದ ಕುಮಾರಸ್ವಾಮಿ ಈಗ, ಚುನಾವಣೆಯ ದಿನಾಂಕ ಘೋಷಣೆಯಾದ ನಂತರ ಅಂತಿಮ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.
ಕಳೆದ ಬಾರಿಯ ಅಸೆಂಬ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲು ರಾಮನಗರ ಮತ್ತು ಚನ್ನಪಟ್ಟಣವನ್ನು ಆಯ್ಕೆ ಮಾಡಿಕೊಂಡಿದ್ದ ಎಚ್.ಡಿ.ಕುಮಾರಸ್ವಾಮಿ ಈಗ ಕ್ಷೇತ್ರ ಬದಲಾವಣೆಯತ್ತ ಚಿತ್ತ ಹರಿಸಿದ್ದಾರಾ ಎನ್ನುವ ಪ್ರಶ್ನೆಗೆ ಅವರಿಂದಲೇ ಅಸ್ಪಷ್ಟತೆಯ ಉತ್ತರ ಸಿಕ್ಕಿದೆ.
ಹಿಜಾಬ್: ಹಿಂದೂ ಮೈಂಡ್ ರೀಡಿಂಗ್ ಗೆದ್ದ ಬಿಜೆಪಿ, ಬೆಳ್ಳಿತಟ್ಟೆಯಲ್ಲಿ ಗರಿಗರಿ ವೋಟ್ ಬ್ಯಾಂಕ್?
ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿಕೆ
"ಕುಮಾರಸ್ವಾಮಿ, ರೇವಣ್ಣನ ಹೊರತಾಗಿ ಕುಟುಂಬದಿಂದ ಯಾರನ್ನೂ ಕಣಕ್ಕಿಳಿಸುವ ಉದ್ದೇಶವಿಲ್ಲ. ಆದರೆ, ಯಾರೂ ಸ್ಪರ್ಧಿಸಲು ಮುಂದೆ ಬರದೇ ಇರುವುದರಿಂದ ಕುಟುಂಬವರು ಸ್ಪರ್ಧಿಸುತ್ತಿದ್ದಾರೆ. ಕಳೆದ ಬಾರಿ ಮೂರನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಗೆಲ್ಲಿಸಿಕೊಂಡು ಬಂದಿದ್ದೆ, ಅವರು ಈಗ ಜೆಡಿಎಸ್ ತೊರೆದು ಕಾಂಗ್ರೆಸ್ ಅನ್ನು ಸೇರಿಕೊಂಡಿದ್ದಾರೆ" ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದ್ದಾರೆ. ಆ ಮೂಲಕ, ಕುಮಾರಸ್ವಾಮಿ, ರೇವಣ್ಣ ಹೊರತಾಗಿ ಕುಟುಂಬದಿಂದ ಬೇರೆಯವರೂ ಸ್ಪರ್ಧಿಸಬಹುದು ಎನ್ನುವುದನ್ನು ಸೂಕ್ಷ್ಮವಾಗಿ ಗೌಡ್ರು ಹೇಳಿದ್ದಾರೆ.
ಚಾಮುಂಡೇಶ್ವರಿಯಿಂದಲೂ ಕುಮಾರಸ್ವಾಮಿ ಸ್ಪರ್ಧಿಸಲಿದ್ದಾರಾ ಎನ್ನುವ ಕುತೂಹಲ
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ಎಚ್.ಡಿ.ಕುಮಾರಸ್ವಾಮಿಯವರಿಗೆ, ಮುಂದಿನ ಚುನಾವಣೆಯಲ್ಲಿ ಚಾಮುಂಡೇಶ್ವರಿಯಿಂದ ಯಾರು ಸ್ಪರ್ಧಿಸುತ್ತಾರೆ ಎನ್ನುವ ಪ್ರಶ್ನೆಯನ್ನು ಕೇಳಲಾಯಿತು, "ಇಲ್ಲಿಂದ ಯಾರು ಜೆಡಿಎಸ್ ಅಭ್ಯರ್ಥಿಯಾಗಲಿದ್ದಾರೆ ಎಂದು ನಮ್ಮ ಕಾರ್ಯಕರ್ತರು ಕೇಳುತ್ತಿದ್ದಾರೆ. ನಾನೇ ಈ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಎನ್ನುವ ಮಾಹಿತಿಯನ್ನು ನಮ್ಮ ಕಾರ್ಯಕರ್ತರಿಗೆ ನೀಡಿದ್ದೇನೆ" ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಸ್ವಕ್ಷೇತ್ರವನ್ನು ಉಳಿಸಿಕೊಂಡು ಚಾಮುಂಡೇಶ್ವರಿಯಿಂದಲೂ ಕುಮಾರಸ್ವಾಮಿ ಸ್ಪರ್ಧಿಸಲಿದ್ದಾರಾ ಎನ್ನುವ ಕುತೂಹಲ ಹಾಗೇ ಉಳಿದುಕೊಂಡಿದೆ.
ಕಾಂಗ್ರೆಸ್ಸಿನಲ್ಲಿ ಕುಮಾರಸ್ವಾಮಿ ಟಾರ್ಗೆಟ್ ಮಾಡುತ್ತಿರುವುದೇ ಸಿದ್ದರಾಮಯ್ಯನವರನ್ನು
ಕುಮಾರಸ್ವಾಮಿಯವರು ಚಾಮುಂಡೇಶ್ವರಿ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಬಹುದು ಎನ್ನುವುದಕ್ಕೆ ರಾಜಕೀಯ ಜಿದ್ದಿನ ಕಾರಣ ಇರಬಹುದು. ಕಾಂಗ್ರೆಸ್ಸಿನಲ್ಲಿ ಕುಮಾರಸ್ವಾಮಿ ಟಾರ್ಗೆಟ್ ಮಾಡುತ್ತಿರುವುದೇ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರನ್ನು. ಬಾದಾಮಿಯಿಂದ ಮತ್ತೆ ಸ್ಪರ್ಧಿಸಲು ಸ್ಥಳೀಯ ಕಾಂಗ್ರೆಸ್ ಮುಖಂಡರ ಒಲವು ಸರ್ವಾನುಮತದಿಂದ ಅವರಿಗೆ ಸಿಗುತ್ತಿಲ್ಲ. ಹಾಗಾಗಿ, ಚಾಮುಂಡೇಶ್ವರಿ ಕ್ಷೇತ್ರದ ಮೇಲೆ ಅವರ ಒಲವು ಇರುವುದರಿಂದ, ಒಂದು ವೇಳೆ ಸಿದ್ದರಾಮಯ್ಯ ಅಲ್ಲಿಂದ ಸ್ಪರ್ಧಿಸಿದರೆ, ಅವರಿಗೆ ಠಕರ್ ನೀಡಲು ಕುಮಾರಸ್ವಾಮಿ ಅಲ್ಲಿಂದ ಸ್ಪರ್ಧಿಸಲು ಬಯಸಿರಬಹುದು.
ತಮ್ಮ ಇನ್ನೋರ್ವ ರಾಜಕೀಯ ಎದುರಾಳಿ ಜಿ.ಟಿ.ದೇವೇಗೌಡ
ಇನ್ನೊಂದು ಆಯಾಮದ ಪ್ರಕಾರ, ತಮ್ಮ ಇನ್ನೋರ್ವ ರಾಜಕೀಯ ಎದುರಾಳಿ ಜಿ.ಟಿ.ದೇವೇಗೌಡ ಅವರಿಗೆ ಬಿಸಿಮುಟ್ಟಿಸಲು ಕುಮಾರಸ್ವಾಮಿ ಈ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಲುವ ಸಾಧ್ಯತೆಯಿಲ್ಲದಿಲ್ಲ. ಜಿಟಿಡಿ ಮತ್ತು ಎಚ್ಡಿಕೆ ನಡುವಿನ ರಾಜಕೀಯ ಸಂಬಂಧ ತೀರಾ ಹಳಸಿ ಹೋಗಿದೆ. ಅವರು ಅಥವಾ ಅವರ ಪುತ್ರ ಇಲ್ಲಿಂದ ಸ್ಪರ್ಧಿಸ ಬಹುದು ಎನ್ನುವ ಮಾತು ಕೇಳಿಬರುವುದರಿಂದ ಕಳೆದ ಚುನಾವಣೆಯಲ್ಲಿ ಸಿ.ಪಿ.ಯೋಗೇಶ್ವರ್ ಅವರಿಗೆ ಬಿಸಿ ಮುಟ್ಟಿಸಲು ಚನ್ನಪಟ್ಟಣದಿಂದ ಸ್ಪರ್ಧಿಸಿದಂತೆ, ಕುಮಾರಸ್ವಾಮಿಯವರು ಚಾಮುಂಡೇಶ್ವರಿ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡರೂ ಮಾಡಿಕೊಳ್ಳಬಹುದು.