ಕದನ ವಿರಾಮ ಘೋಷಿಸಿದ ಎಚ್ಡಿಕೆ: ಸಾ.ರಾ ಮಹೇಶ್ ಪ್ರಯತ್ನ ಫಲಕೊಟ್ಟಿತಾ?
ಮೈಸೂರು, ಜುಲೈ 10: ಸಂಸದೆ ಸುಮಲತಾ ಅಂಬರೀಶ್ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನಡುವೆ ಆರಂಭವಾದ ವಾಕ್ಸಮರ ನಿಲ್ಲದೆ ಮುಂದುವರೆಯುತ್ತಿದ್ದು, ಇದು ಹೀಗೆಯೇ ಮುಂದುವರೆದರೆ ಎಚ್ಡಿಕೆಗೆ ಮತ್ತು ಜೆಡಿಎಸ್ ಪಕ್ಷಕ್ಕೆ ಮಾರಕವಾಗುತ್ತದೆ ಎಂಬುದನ್ನು ಅರಿತ ಶಾಸಕ ಸಾ.ರಾ. ಮಹೇಶ್ ಇತಿಶ್ರೀ ಹಾಡಲು ಪ್ರಯತ್ನ ಮಾಡಿದ್ದು, ಅದು ಫಲಕೊಟ್ಟಂತೆ ಕಂಡುಬರುತ್ತದೆ.
ಇದೀಗ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಾಕ್ಸಮರಕ್ಕೆ ಕದನ ವಿರಾಮ ಘೋಷಿಸಿದಂತೆ ಕಂಡು ಬರುತ್ತಿದೆ. ಅದು ಅವರು ಮಾಡಿರುವ ನಾವು ಸಿಡಿಯಬೇಕಾದ ಪರಿಸ್ಥಿತಿ ಇದೆ, ಸಿಡಿಯೋಣ. ಕಾವೇರಿ ಜಲದ ಯೋಜನೆಗಳಿಗೆ ತಡೆಯೊಡ್ಡುತ್ತಿರುವವರ ವಿರುದ್ಧ ಸಿಡಿಯೋಣ. ನಮ್ಮ ನೆಲದಲ್ಲಿ ನಮ್ಮ ಕನ್ನಡ ಧ್ವಜವನ್ನು ಹಾರಿಸಲು ಬಿಡಲೊಲ್ಲದ ಪಟ್ಟಭದ್ರರ ವಿರುದ್ಧ ಸಿಡಿಯೋಣ. ನಮಗೆ ನೀಡಬೇಕಾದ ಪರಿಹಾರ, ಅನುದಾನ ನೀಡದ ವ್ಯವಸ್ಥೆಯ ವಿರುದ್ಧ ಸಿಡಿಯ ಬೇಕಾಗಿದೆ ಸಿಡಿಯೋಣ. ಇದು ನಮ್ಮ ಆಯ್ಕೆಯಾಗಲಿ ಎಂದು ಟ್ವೀಟ್ ಮಾಡುವ ಮೂಲಕ ದೃಢವಾಗಿದೆ.
ಸುಮಲತಾ ಜತೆ ಕದನ ವಿರಾಮ ಘೋಷಿಸಿ, ರಾಜ್ಯದ ಸಮಸ್ಯೆಯೆಡೆ ದೃಷ್ಟಿ ಇಟ್ಟ ಕುಮಾರಸ್ವಾಮಿ
ಹಾಗೆ ನೋಡಿದರೆ ಕೆಆರ್ಎಸ್ ಜಲಾಶಯದಿಂದ ಆರಂಭವಾದ ಸಂಸದೆ ಸುಮಲತಾ ಅಂಬರೀಶ್ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನಡುವಿನ ರಾಜಕೀಯ ಕದನ ಕ್ರಮೇಣ ವೈಯುಕ್ತಿಕ ವಿಚಾರಕ್ಕಿಳಿದಿದೆ. ದಳಪತಿಗಳೆಲ್ಲ ಒಬ್ಬರಾದ ಮೇಲೆ ಒಬ್ಬರಂತೆ ಸರತಿ ಸಾಲಿನಲ್ಲಿ ನಿಂತು ವಾಗ್ಬಾಣ ಸುರಿಸುತ್ತಿದ್ದರೆ ಎಲ್ಲದಕ್ಕೂ ಏಕಾಂಗಿಯಾಗಿಯೇ ಸುಮಲತಾ ತಿರುಗೇಟು ನೀಡುತ್ತಿರುವುದು ಈಗಿನ ಬೆಳವಣಿಗೆಯಾಗಿದೆ.
ಜೆಡಿಎಸ್ ವರ್ಸಸ್ ಸುಮಲತಾ ಅಂಬರೀಶ್
ಕಳೆದ ಲೋಕಸಭಾ ಚುನಾವಣೆ ಬಳಿಕ ಜೆಡಿಎಸ್ ವರ್ಸಸ್ ಸುಮಲತಾ ಎಂಬಂತಾಗಿದೆ. ಆಗಿಂದಾಗ್ಗೆ ದಳಪತಿಗಳು ಸಮಯ ಸಿಕ್ಕಾಗಲೆಲ್ಲ ಸುಮಲತಾ ಅವರ ವಿರುದ್ಧ ಕಿಡಿಕಾರುತ್ತಲೇ ಬಂದಿದ್ದಾರೆ. ಆದರೆ ಎಲ್ಲದಕ್ಕೂ ಸುಮಲತಾ ಕೂಡ ತಿರುಗೇಟು ನೀಡುತ್ತಲೇ ಬಂದಿದ್ದಾರೆ. ಆದರೆ ಅದು ಈ ಮಟ್ಟಕ್ಕೆ ಬಂದು ನಿಲ್ಲುತ್ತದೆ ಎಂಬುದನ್ನು ಯಾರೂ ಕೂಡ ಊಹಿಸಿರಲಿಲ್ಲ.
ಹಳೇ ಮೈಸೂರಿನಲ್ಲಿ ಜೆಡಿಎಸ್ ಸಾಮ್ರಾಜ್ಯ ಗಟ್ಟಿಯಾಗಿಯೇ ಇತ್ತು. ಅದರಲ್ಲೂ ಮಂಡ್ಯದಲ್ಲಿ ಜೆಡಿಎಸ್ ತನ್ನ ನೆಲೆಯನ್ನು ಗಟ್ಟಿಗೊಳಿಸಿತ್ತು. ಆದರೆ ಕಳೆದ ಲೋಕಸಭಾ ಚುನಾವಣೆ ವೇಳೆ ಸುಮಲತಾ ವಿರುದ್ಧ ಎಚ್.ಡಿ. ಕುಮಾರಸ್ವಾಮಿ ಸೇರಿದಂತೆ ದಳಪತಿಗಳು ನೀಡಿದ ಹೇಳಿಕೆಗಳು ಮತ್ತು ನಂತರದ ಬೆಳವಣಿಗೆಗಳು ಜೆಡಿಎಸ್ ಪಕ್ಷಕ್ಕೆ ಹೊಡೆತ ನೀಡಿದೆ. ಇದಕ್ಕೆ ವಿಧಾನಸಭಾ ಉಪ ಚುನಾವಣೆಯಲ್ಲಿ ಕೆ.ಆರ್. ಪೇಟೆ ಕ್ಷೇತ್ರದಲ್ಲಿ ಬಿಜೆಪಿ ಖಾತೆ ತೆರೆದಿರುವುದೇ ನಿದರ್ಶನವಾಗಿದೆ.
ಸೋಲಿನ ನೋವು ಕಾಡುತ್ತಲೇ ಇದೆ!
ಲೋಕಸಭಾ ಚುನಾವಣೆಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿಗೆ ಪುತ್ರ ನಿಖಿಲ್ ಸೋಲುಂಡಿರುವುದನ್ನು ಅರಗಿಸಿಕೊಳ್ಳುವುದಕ್ಕೆ ಇವತ್ತಿಗೂ ಸಾಧ್ಯವಾಗಿಲ್ಲ ಎಂಬುದಕ್ಕೆ ಅವರು ನೀಡುತ್ತಿರುವ ಹೇಳಿಕೆಗಳು ಸಾಕ್ಷಿಯಾಗಿವೆ. ಸುಮಲತಾ ಅವರು ನೀಡಿದ್ದ ಕೆಆರ್ಎಸ್ ಬಿರುಕು ಹೇಳಿಕೆಗೆ ಪ್ರಬುದ್ಧ ರಾಜಕಾರಣಿಯಾಗಿ, ರಾಜಕೀಯವಾಗಿಯೇ ಹೇಳಿಕೆಗಳನ್ನು ನೀಡಿದ್ದರೆ ಬಹುಶಃ ಈ ಮಟ್ಟಿಗೆ ಅದು ತಲುಪುತ್ತಿರಲಿಲ್ಲವೇನೋ?
ಈಗ ಜೆಡಿಎಸ್ನ ನಾಯಕರು ಸುಮಲತಾ ವಿರುದ್ಧ ಆಕ್ರೋಶದ ಮಾತುಗಳನ್ನಾಡುತ್ತಿದ್ದಾರೆ. ಅದರಿಂದ ಸುಮಲತಾ ವಿರುದ್ಧ ಹರಿಹಾಯ್ದ ತೃಪ್ತಿ ದಳಪತಿಗಳಿಗಾದರೂ ಅದರ ಪರಿಣಾಮಗಳು ಪಕ್ಷದ ಮೇಲೆ ಬೀರುತ್ತದೆ ಎಂಬುದನ್ನು ಬಹುತೇಕ ನಾಯಕರು ಮರೆತಂತೆ ಕಾಣುತ್ತಿದೆ. ಸುಮಲತಾ ಮೇಲೆ ಯಾವುದೇ ಮಾತಿನ ಬಾಣ ಎಸೆದರೂ ಅದನ್ನು ತಿರುಗಿಸಿ ಎಸೆಯುವ ಚಾಕಚಕ್ಯತೆ ಅವರಿಗಿದೆ. ಜತೆಗೆ ಎಲ್ಲವನ್ನು ಅರಗಿಸಿಕೊಳ್ಳುವ ಶಕ್ತಿಯನ್ನು ಅವರು ಹೊಂದಿದ್ದಾರೆ.
ಮಧ್ಯೆ ಪ್ರವೇಶ ಮಾಡಿದ ಸಾ.ರಾ. ಮಹೇಶ್
ಇದೆಲ್ಲವನ್ನು ಗಮನಿಸಿದ ಜೆಡಿಎಸ್ ಕೆ.ಆರ್. ನಗರ ಶಾಸಕ ಸಾ.ರಾ. ಮಹೇಶ್ ಮಧ್ಯೆ ಪ್ರವೇಶ ಮಾಡಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರದ್ದಾಗಲಿ ಅಥವಾ ನಮ್ಮ ಪಕ್ಷದ್ದಾಗಲಿ ಯಾವುದೇ ಕೊಡುಗೆ ಸುಮಲತಾರ ಕುಟುಂಬಕ್ಕಿಲ್ಲ. ಹಾಗಾಗಿ ಅವರ ಬಗ್ಗೆ ಮಾತನಾಡುವಷ್ಟು ಯೋಗ್ಯತೆ ನಮಗಿಲ್ಲ. ಹೀಗಾಗಿ ಏನನ್ನೂ ಮಾತನಾಡಬೇಡಿ ಎಂದು ಕುಮಾರಸ್ವಾಮಿಯವರಿಗೆ ಮನವಿ ಮಾಡಿದ್ದರು.
"ಸುಮಲತಾ ಅಂಬರೀಶಣ್ಣನವರ ಧರ್ಮಪತ್ನಿ, ನನ್ನ ಕ್ಷೇತ್ರದ ಸಂಸದರಾಗಿದ್ದಾರೆ. ಕೋವಿಡ್ ಪ್ರಾರಂಭವಾದ ಬಳಿಕ ನನ್ನ ಕ್ಷೇತ್ರದಲ್ಲಿ ತುಂಬಾ ಹಳ್ಳಿ, ಹಳ್ಳಿಗೂ ಹೋಗಿ ತುಂಬಾ ಒತ್ತಡದಲ್ಲಿದ್ದಾರೆ. ಈ ಸಂದರ್ಭದಲ್ಲಿ ಯಾರೋ ಕೆಲ ಮಾಹಿತಿಯನ್ನು ಕೊಟ್ಟಿದ್ದರಿಂದ ಹಾಗೆ ಮಾತನಾಡಿರಬಹುದು. ಆದರೆ ಕನ್ನಂಬಾಡಿ ಅಣೆಕಟ್ಟೆ ಬಗ್ಗೆ ಮಾತನಾಡುವಾಗ ಒಂದು ಬಾರಿ ಯೋಚಿಸಿ ನೋಡಬೇಕಿತ್ತು.''
ಅವರ ಬಗ್ಗೆ ಮಾತನಾಡುವಷ್ಟು ಯೋಗ್ಯತೆ ನಮಗಿಲ್ಲ
"ಕನ್ನಂಬಾಡಿ ಅಣೆಕಟ್ಟೆ ಮೈಸೂರು, ಮಂಡ್ಯ ಜಿಲ್ಲೆಯ ಕಟ್ಟೆಯಲ್ಲ. ಇಡೀ ರಾಜ್ಯದ ನಿತ್ಯದ ಜೀವನಾಡಿಯಾಗಿದೆ. ಅದರ ಮಾಹಿತಿಯನ್ನು ಪರಿಶೀಲಿಸದೆ ಏಕಾಏಕಿ ಸಂಸದರು ಮಾತನಾಡಿರಬಹುದು. ಅವರ ಬಗ್ಗೆ ಮಾತನಾಡುವಷ್ಟು ಯೋಗ್ಯತೆ ನಮಗಿಲ್ಲ. ಕುಮಾರಣ್ಣ ಮಾಡಬೇಕಾದುದು ಸಾಕಷ್ಟು ಇದೆ.
ಹೀಗಾಗಿ ಮಾತನಾಡಬೇಡಿ,'' ಎಂದು ಮನವಿ ಮಾಡಿದ್ದರು.ಬಹುಶಃ ಶಾಸಕ ಸಾ.ರಾ. ಮಹೇಶ್ ಕಳಕಳಿ ಕದನ ವಿರಾಮಕ್ಕೆ ಕಾರಣವಾಯಿತಾ ಗೊತ್ತಿಲ್ಲ. ಈಗಿನ ಪರಿಸ್ಥಿತಿಯಲ್ಲಿ ಏನೇ ಮಾತನಾಡಿದರೂ ಅದರ ಪರಿಣಾಮ ಜೆಡಿಎಸ್ ಪಕ್ಷದ ಮೇಲಾಗುತ್ತದೆ ಎಂಬುದಂತು ಸತ್ಯ.
Recommended Video