ಮೈಸೂರಿನಲ್ಲಿ ಒಂದರ ಮೇಲೊಂದು 5 ಬ್ರೇಕಿಂಗ್ ನ್ಯೂಸ್ ನೀಡಿದ ಕುಮಾರಸ್ವಾಮಿ
Recommended Video
ಮೈಸೂರು, ನ 21: ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಪ್ರಚಾರಕ್ಕಾಗಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಮೈಸೂರು ಜಿಲ್ಲಾ ಪ್ರವಾಸದಲ್ಲಿದ್ದಾರೆ.
ಹುಣಸೂರಿಗೆ ಆಗಮಿಸಿದ ಕುಮಾರಸ್ವಾಮಿಯವರನ್ನು ಕಾರ್ಯಕರ್ತರು ಅದ್ದೂರಿಯಾಗಿ ಸ್ವಾಗತಿಸಿದ್ದಾರೆ. ಚುನಾವಣಾ ಪ್ರಚಾರ ದೊಡ್ಡ ಹೆಜ್ಜೂರು ನಿಂದ ಆರಂಭವಾಗಿದೆ.
ಅನರ್ಹರನ್ನು ಸೋಲಿಸಲು ಬಿಜೆಪಿಯಲ್ಲೇ ಟೀಂ ರೆಡಿ: ಏನಿದು ಶಾಕಿಂಗ್ ಹೇಳಿಕೆ?
ತೆರೆದ ಜೀಪಿನಲ್ಲಿ ಪ್ರಚಾರ ಆರಂಭಿಸಿರುವ ಕುಮಾರಸ್ವಾಮಿ, "ಬಿಜೆಪಿ ಮತ್ತು ಕಾಂಗ್ರೆಸ್, ತಮ್ಮತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಲು ಏನು ಚುನಾವಣಾ ತಂತ್ರ ರೂಪಿಸುತ್ತಿವೆಯೋ, ಅದೇ ರೀತಿ ನಾವೂ ಗೇಮ್ ಪ್ಲಾನ್ ಮಾಡುತ್ತಿದ್ದೇವೆ" ಎಂದು ಹೇಳಿದರು.
ಉಪಚುನಾವಣೆ: ತ್ಯಾಗಕ್ಕೆ ತಯಾರಾಗಿ, ಸಚಿವರಿಗೆ ಯಡಿಯೂರಪ್ಪ ಸೂಚನೆ
ನಾಗಮಂಗಲದ ಶಾಸಕ ಸುರೇಶ್ ಗೌಡ, ಎಚ್ಡಿಕೆ ಚುನಾವಣಾ ಪ್ರಚಾರದ ವೇಳೆ ಹಾಜರಿದ್ದರು. ಇದಕ್ಕೂ ಮುನ್ನ, ಮೈಸೂರಿನಲ್ಲಿ ಮಾತನಾಡುತ್ತಿದ್ದ ಕುಮಾರಸ್ವಾಮಿ, ಐದು ವಿಚಾರಗಳ ಬಗ್ಗೆ ಹೇಳಿಕೆಯನ್ನು ನೀಡಿದರು.
ಹಿರೇಕೆರೂರಿನಲ್ಲಿ ನಮ್ಮ ಅಭ್ಯರ್ಥಿ
1. ಬಿಜೆಪಿ ಒತ್ತಡ ತಂತ್ರ ಅನುಸರಿಸಿ ಚುನಾವಣೆ ಗೆಲ್ಲಲು ಹೊರಟಿದೆ. ಹಿರೇಕೆರೂರಿನಲ್ಲಿ ನಮ್ಮ ಅಭ್ಯರ್ಥಿಯಾಗಬೇಕಿದ್ದ ಸ್ವಾಮೀಜಿಯವರನ್ನು ಚುನಾವಣಾ ಕಣದಿಂದ ಹಿಂದೆ ಸರಿಸಲು ಸಿಎಂ ಯಡಿಯೂರಪ್ಪ ಪುತ್ರನೇ ಸಭೆ ನಡೆಸಿದ್ದಾರೆ. ಅದೇ ರೀತಿ ರಂಭಾಪುರಿ ಸ್ವಾಮೀಜಿಯವರು ಮನವೊಲಿಸುತ್ತಿದ್ದಾರಂತೆ. ಇಷ್ಟು ಒತ್ತಡಗಳನ್ನಾಕಿ ಚುನಾವಣೆ ಗೆಲ್ಲುವ ಅಗತ್ಯ ಇದೆಯಾ. ನಾನು ಸ್ವಾಮೀಜಿಗೆ ಕರೆದು ಟಿಕೆಟ್ ಕೊಟ್ಟಿರಲಿಲ್ಲ. ಅವರೇ ನಿಮ್ಮ ಪಕ್ಷದಿಂದ ಟಿಕೆಟ್ ಕೊಡಿ ಅಂದಿದ್ದು. ಅದೇ ರೀತಿ ಅವರ ಅಭಿಮಾನಿಗಳು ಒತ್ತಡ ಹಾಕಿದರು" - ಕುಮಾರಸ್ವಾಮಿ ಹೇಳಿಕೆ.
ಸಿಎಂ ಯಡಿಯೂರಪ್ಪ
2. "ಸಿಎಂ ಯಡಿಯೂರಪ್ಪ ಹೇಳಿರುವಂತೆ ಎಂಟು ಸ್ಥಾನ ಗೆಲ್ಲದಿದ್ದರೆ ಸರ್ಕಾರ ಬೀಳಲಿದೆ. ಅಲ್ಲಿಯವರೆಗೆ ನಾನೇಕೆ ಮೈತ್ರಿ ಬಗ್ಗೆ ಮಾತನಾಡಲಿ. ಫಲಿತಾಂಶವನ್ನು ಕಾದು ನೋಡುತ್ತೇನೆ. ನಂತರದ ಬೆಳವಣಿಗೆಗಳನ್ನು ನೋಡಿ ತೀರ್ಮಾನ ಮಾಡುತ್ತೇವೆ.ಸದ್ಯ ಅನರ್ಹ ಶಾಸಕರನ್ನು ಸೋಲಿಸುವುದು ನಮ್ಮ ಗುರಿ." - ಕುಮಾರಸ್ವಾಮಿ
ಜಿ.ಟಿ.ಡಿ ಜೊತೆ ನೋ ಟಾಕಿಂಗ್
3. ಜಿ.ಟಿ.ದೇವೆಗೌಡರ ಬೆಂಬಲ ಪಡೆಯುವ ವಿಚಾರದ ಬಗ್ಗೆ ಮಾತನಾಡುತ್ತಾ, " ಚುನಾವಣೆ ಎಂದ ಮೇಲೆ ಎಲ್ಲರೂ ಒಂದೊಂದು ತಂತ್ರ ಮಾಡುತ್ತಾರೆ. ಒಬ್ಬೊಬ್ಬರ ಬೆಂಬಲ ಕೋರುತ್ತಾರೆ. ಅದೇ ರೀತಿ ಸಿದ್ದರಾಮಯ್ಯ ಜಿ.ಟಿ.ದೇವೆಗೌಡರ ಬೆಂಬಲ ಕೇಳಿರಬಹುದು.
ಆದರೆ ನಾನು ಜಿ.ಟಿ.ದೇವೆಗೌಡರ ಜೊತೆ ಮಾತನಾಡುವ ಪರಿಸ್ಥಿತಿಯಲ್ಲಿ ಇಲ್ಲ . ನಮ್ಮ ಪಕ್ಷದ ಅಭ್ಯರ್ಥಿ ನಿಂತಿದ್ದಾರೆ ಎಂದು ಅವರು ಬೆಂಬಲ ಕೊಟ್ಟರೆ ಸ್ವಾಗತ" ಎಂದು ಕುಮಾರಸ್ವಾಮಿ ಹೇಳಿದರು.
ಪಕ್ಷಾಂತರ ನಿಷೇಧ ಕಾಯ್ದೆ
4. "ಪಕ್ಷಾಂತರ ನಿಷೇಧ ಕಾಯ್ದೆ ಹಲ್ಲು ಕಿತ್ತ ಹಾವಾಗಿದೆ. ಶಾಸಕರು ಪಕ್ಷಾಂತರ ಮಾಡದಂತೆ ತಡೆಯಲು ಪಕ್ಷಾಂತರ ನಿಷೇಧ ಕಾಯ್ದೆಯನ್ನು ಮತ್ತಷ್ಟು ಗಟ್ಟಿಗೊಳಿಸಬೇಕಿದೆ. ಇಲ್ಲದಿದ್ದರೆ, ಮುಂದಿನ ದಿನಗಳಲ್ಲಿ ಕಾಯ್ದೆ ತನ್ನ ಮಹತ್ವನ್ನು ಕಳೆದುಕೊಳ್ಳಲಿದೆ" - ಕುಮಾರಸ್ವಾಮಿ.
ತನ್ವೀರ್ ಸೇಠ್ ಅರೋಗ್ಯ ವಿಚಾರಿಸಿದ ಕುಮಾರಸ್ವಾಮಿ
5. ಹಲ್ಲೆಗೊಳಗಾಗಿದ್ದ ತನ್ವೀರ್ ಸೇಠ್ ಅವರನ್ನು ಆಸ್ಪತ್ರೆಯಲ್ಲಿ ಭೇಟಿಯಾದ ಕುಮಾರಸ್ವಾಮಿ ಅವರ ಅರೋಗ್ಯ ವಿಚಾರಿಸಿದ್ದಾರೆ. "ತನ್ವೀರ್ ಸೇಠ್ ಅರೋಗ್ಯವಾಗಿದ್ದಾರೆ. ಈ ಘಟನೆಯಿಂದ ಜೀವಕ್ಕೆ ಯಾವುದೇ ಅಪಾಯವಿಲ್ಲ. ವೈದ್ಯರ ಸಹಾಯದಿಂದ ಪುನರ್ಜನ್ಮ ಪಡೆದಿದ್ದಾರೆ.
ಇಂದು ವಾರ್ಡ್ ಗೆ ಶಿಫ್ಟ್ ಆಗುತ್ತಾರೆ. ಅವರ ಒಳ್ಳೆಯತನ ಅವರನ್ನು ಕಾಪಾಡಿದೆ. ಸರಕಾರ ಸೂಕ್ತ ತನಿಖೆ ನಡೆಸುತ್ತಿದೆ ಮತ್ತು ತನಿಖೆ ಹಂತದಲ್ಲಿ ಯಾವುದೇ ಪ್ರತಿಕ್ರಿಯೆ ಕೊಡುವ ಅಗತ್ಯವಿಲ್ಲ, ಇದಕ್ಕೆ ಕಾರಣ ಯಾರು ಎನ್ನುವುದನ್ನು ಕಂಡುಹಿಡಿಯಬೇಕಿದೆ" - ಕುಮಾರಸ್ವಾಮಿ.