ಕುಮಾರಸ್ವಾಮಿ ಇನ್ನಾದರೂ ಬದಲಾಗಲಿ, ಆತ್ಮಾವಲೋಕನ ಮಾಡಿಕೊಳ್ಳುವುದು ಯಾವಾಗ?
ಮೈಸೂರು, ಡಿ 11: "ಕುಮಾರಸ್ವಾಮಿಯವರು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದವರು, ಒಮ್ಮೆ, ಲೋಕಸಭಾ ಸದಸ್ಯರೂ ಆಗಿದ್ದರು. ಅವರು ಹೆಚ್ಚು ಮಾತನಾಡುವುದರಿಂದ ಪಕ್ಷಕ್ಕೆ ಒಳ್ಳೆಯದಾಗುವುದಿಲ್ಲ. ಅವರು ಇನ್ನಾದರೂ ಬದಲಾಗಬೇಕಿದೆ" ಎಂದು, ಶಾಸಕ ಜಿ,ಟಿ.ದೇವೇಗೌಡ ಹೇಳಿದ್ದಾರೆ.
"ಹಿಂದೆ ಸಿಎಂ ಆಗಿದ್ದ ಎಸ್.ಎಂ.ಕೃಷ್ಣ ಅವರು ಬಾಯಿಯೇ ಬಿಡುತ್ತಿರಲಿಲ್ಲ. ಮಾತು ಆಡಿ ಕೆಡ್ತು, ಮುತ್ತು ಒಡೆದು ಕೆಟ್ತು ಎನ್ನುವ ಹಾಗೇ, ಕುಮಾರಸ್ವಾಮಿಯವರು ಮಾತನಾಡುವಾಗ ತೂಕವಾಗಿ ಹೇಳಿಕೆಯನ್ನು ನೀಡಬೇಕು" ಎಂದು ಜಿಟಿಡಿ ಹೇಳಿದ್ದಾರೆ.
ಹುಣಸೂರಿನಲ್ಲಿ ವಿಶ್ವನಾಥ್ ಸೋಲಿಗೆ ಜಿಟಿಡಿ ಬೊಟ್ಟು ಮಾಡಿದ್ದು ಇವರತ್ತ
"ನೀವು ಹಿಂದೆ ಏನು ಮಾತನಾಡಿದ್ರಿ, ಈಗ ಏನು ಮಾತನಾಡುತ್ತಿದ್ದೀರಿ ಎನ್ನುವುದರ ಬಗ್ಗೆ ಅರಿವಿರಬೇಕು. ಜನಾಭಿಪ್ರಾಯ ಏನಿದೆ ಎನ್ನುವುದನ್ನು ಮೊದಲು ಕುಮಾರಸ್ವಾಮಿಯವರು ತಿಳಿಯಬೇಕು" ಎಂದು ಜಿಟಿಡಿ ಅಭಿಪ್ರಾಯ ಪಟ್ಟಿದ್ದಾರೆ.
"ಕುಮಾರಣ್ಣ ಮುತ್ತಿನಂತಹ ಮಾತನಾಡುತ್ತಾರೆ ಎಂದೇ ಜನ ಬಯಸಿದ್ದು. ಇತ್ತೀಚಿನ ದಿನಗಳಲ್ಲಿ ಅವರು ಮಾತನಾಡುತ್ತಿರುವ ಹೇಳಿಕೆಗಳು, ಅವರ ಅಭಿಮಾನಿಗಳಿಗೇ ಬೇಸರ ತರುತ್ತಿದೆ" ಎಂದು ಜಿಟಿಡಿ ಬೇಸರ ವ್ಯಕ್ತ ಪಡಿಸಿದರು.
"ಕುಮಾರಸ್ವಾಮಿಯವರು ತಮ್ಮ ರಾಜಕೀಯ ಶೈಲಿಯನ್ನು ಬದಲಾಯಿಸಿಕೊಳ್ಳಲೇಬೇಕಿದೆ. ಅಭಿಮಾನಿಗಳು, ಅವರ ವಿರುದ್ದ ಈಗ ಇದ್ದಾರೆಂದರೆ, ಅವರು ಯೋಚಿಸುವ ಸಮಯವಿದು" ಎಂದು ಜಿಟಿಡಿ, ಹೇಳಿದ್ದಾರೆ.
"ಎಲ್ಲಿ ತಪ್ಪಾಗಿದೆ, ಏಕೆ ಸೋಲಾಗಿದೆ ಎಂದು ಆತ್ಮಾವಲೋಕನ ಮಾಡಿಕೊಳ್ಲಬೇಕು. ಮುಂದೆ ಏನು ಮಾಡಬೇಕು ಎನ್ನುವುದರ ಬಗ್ಗೆ ಪ್ಲಾನ್ ಮಾಡಬೇಕು. ಸಾಕಷ್ಟು ಬಾರಿ ಇದರ ಅನುಭವ ಅವರಿಗೆ ಆಗಿದೆ" ಎಂದು ಜಿ.ಟಿ.ದೇವೇಗೌಡ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿಗೆ ಸಲಹೆಯನ್ನು ನೀಡಿದ್ದಾರೆ.