"ಸಿಎಂ ಆಗಿದ್ದಾಗ ಒಳ್ಳೇ ಹೆಸರಿತ್ತು; ಸಿದ್ದರಾಮಯ್ಯ ಅಂಡ್ ಟೀಂ ಹಾಳು ಮಾಡಿತು''
ಮೈಸೂರು, ಡಿಸೆಂಬರ್ 5: ನಾನು ಹಿಂದೆ ಸಿಎಂ ಆಗಿದ್ದಾಗ ಬಂದ ಒಳ್ಳೆಯ ಹೆಸರನ್ನು, ಸಿದ್ದರಾಮಯ್ಯ ಅಂಡ್ ಟೀಂ ಹಾಳು ಮಾಡಿದರು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ತಿಳಿಸಿದರು.
ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, ಪ್ರೀ ಪ್ಲಾನ್ ಮಾಡಿ ನನ್ನ ಹೆಸರು ಹಾಳು ಮಾಡಿದರಲ್ಲದೇ, ಕಾಂಗ್ರೆಸ್ನಿಂದಲೇ ಎಲ್ಲವೂ ಸರ್ವನಾಶವಾಯಿತು ಎಂದು ಆರೋಪಿಸಿದರು. ಎಮೋಷನಲ್ ಟ್ರ್ಯಾಪ್ಗೆ ನಾವು ಬಲಿಯಾದೆವು ಕಾಂಗ್ರೆಸ್ ಜೊತೆ ಕೈ ಜೋಡಿಸಿದ ಕಾರಣ ನಮ್ಮ ಶಕ್ತಿ ಕುಂದಿತು ಎಂದು ಎಚ್ಡಿಕೆ ಹೇಳಿದರು.
ಕುಮಾರಸ್ವಾಮಿ ಮತ್ತು ಡಿ.ಕೆ.ಶಿವಕುಮಾರ್ ಕಷ್ಟ ಅನುಭವಿಸುವುದು ಇನ್ನೂ ಬೇಕಾದಷ್ಟಿದೆ
ರಾಜಕೀಯದಲ್ಲಿ ಅನಾಥರಾದಾಗ ಮರುಜೀವ ಕೊಟ್ಟವರ ಬಗ್ಗೆ ಮಾತನಾಡುತ್ತಾರೆ. ದೇವೇಗೌಡರ ಫೋಟೋ ಇಟ್ಟುಕೊಳ್ಳುತ್ತೇನೆ ಅಂತಾರೆ, ಆದರೆ ನನ್ನನ್ನು ಟೀಕೆ ಮಾಡುತ್ತಾರೆ. ನಾನು ಏನು ತಪ್ಪು ಮಾಡಿದ್ದೇನೆ? ನಮ್ಮ ಕುಟುಂಬಕ್ಕೆ ಶಾಪ ಇದೆ. ನಾವು ಯಾರನ್ನು ಬೆಳೆಸುತ್ತೇವೆಯೋ, ಅವರೇ ನಮ್ಮ ಬಗ್ಗೆ ಮಾತನಾಡುತ್ತಾರೆ ಎಂದು ಅಡಗೂರು ಎಚ್.ವಿಶ್ವನಾಥ್ ವಿರುದ್ಧ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸದರು.
ಶಾಪ ವಿಮೋಚನೆ ಹೇಗೆ
ಈ ಶಾಪ ವಿಮೋಚನೆ ಹೇಗೆ ಅಂತಾ ಕಂಡು ಹಿಡಿಯಬೇಕಾಗಿದ್ದು, ಇದರ ಬಗ್ಗೆ ಸಂಶೋಧನೆ ಮಾಡಬೇಕಿದೆ ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಮೈಸೂರಿನಲ್ಲಿ ಹೇಳಿದರು. ಮುಂದಿನ ಸಂಕ್ರಾಂತಿ ನಂತರ ಪಕ್ಷವನ್ನು ಪುನಶ್ಚೇತನಗೊಳಿಸಲಾಗುವುದು, ರಾಜ್ಯಾದ್ಯಂತ ಸಂಚರಿಸಿ ಪಕ್ಷ ಸಂಘಟನೆ ಮಾಡುತ್ತೇನೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಹೊರಗಡೆ ಬಿಜೆಪಿ ಮೇಲೆ ಅಟ್ಯಾಕ್ ಮಾಡುತ್ತಿದ್ದಾರೆ. ಆದರೆ ಅದರಲ್ಲಿ ಯಾವುದೇ ಸತ್ವ ಇಲ್ಲ. ದಾಖಲೆಗಳಿಲ್ಲದ ಕೇವಲ ಚರ್ಚೆಗೆ ಮೀಸಲಾಗಿದೆ ಎಂದರು.
ನಾಲ್ಕು ಮಂತ್ರಿಗಳಿಂದ ಚುನಾವಣಾ ತಯಾರಿ
ಸಮುದಾಯಕ್ಕೆ ನೀಡುವ ಮೀಸಲಾತಿಯಿಂದ ಆರ್ಥಿಕವಾಗಿ, ಸಾಮಾಜಿಕವಾಗಿ ಬಲಿಷ್ಠವಾಗುವ ಭ್ರಮೆ ಇಲ್ಲ. ನಿಗಮಗಳಿಂದ ಸಮಾಜವನ್ನು ಮೇಲೆತ್ತೆಲು ಸಾಧ್ಯವಿಲ್ಲವೆಂದು ಎಚ್.ಡಿ ಕುಮಾರಸ್ವಾಮಿ ಅಭಿಪ್ರಾಯಪಟ್ಟರು. ಈಗಾಗಲೇ 15 ತಿಂಗಳು ಸರ್ಕಾರ ನಡೆದಿದ್ದು, ಸಾಕಷ್ಟು ರಾಜಕೀಯ ಬೆಳವಣಿಗೆ ನಡೆಯುತ್ತಿದೆ. ನೆರೆ ಹಾವಳಿ, ಕೊರೊನಾ ಸಮಸ್ಯೆಯಾಗಿದೆ.
ಗ್ರಾ.ಪಂ ಚುನಾವಣೆ ಹಿನ್ನೆಲೆ ಗ್ರಾಮ ಸ್ವರಾಜ್ಯ ಕಾರ್ಯಕ್ರಮ, ಮೂರರಿಂದ ನಾಲ್ಕು ಮಂತ್ರಿಗಳಿಂದ ಚುನಾವಣಾ ತಯಾರಿಯಾಗುತ್ತಿದ್ದು, ಜನರ ಸಮಸ್ಯೆಗೆ ಮಂತ್ರಿಗಳು ಸ್ಪಂದಿಸುತ್ತಿಲ್ಲ. ಯಾವ ಇಲಾಖೆಗೆ ಯಾವ ಮಂತ್ರಿಗಳಿದ್ದಾರೆ ನಮಗೆ ಗೊತ್ತಾಗುತ್ತಿಲ್ಲ ಎಂದು ರಾಜ್ಯ ಬಿಜೆಪಿ ಸರ್ಕಾರವನ್ನು ಲೇವಡಿ ಮಾಡಿದರು.
ಚನ್ನಪಟ್ಟಣಕ್ಕೆ ನಾನೇ ಮಂತ್ರಿ, ನಾನೇ ಸರ್ಕಾರ: ಎಚ್.ಡಿ ಕುಮಾರಸ್ವಾಮಿ
ನನಗೆ ಸಾಫ್ಟ್ ಕಾರ್ನರ್ ಇಲ್ಲ
ಬಿಜೆಪಿ ಪಕ್ಷದ ಸರ್ಕಾರದ ಬಗ್ಗೆ ನನಗೆ ಸಾಫ್ಟ್ ಕಾರ್ನರ್ ಇಲ್ಲ, ಅದು ಪಕ್ಷದ ಸರ್ಕಾರ ಅಲ್ಲ ರಾಜ್ಯದ ಸರ್ಕಾರ. ಹಾಗಾಗಿ ಒಳ್ಳೆಯ ಕೆಲಸಕ್ಕೆ ಸದಾ ಸಹಕಾರ ನೀಡುತ್ತೇನೆ. ಆದರೆ ಈಗ ಸಾಗುತ್ತಿರುವ ದಾರಿ ಸರಿಯಿಲ್ಲವೆಂದರು. ಪ್ರಾಧಿಕಾರದ ಅಧ್ಯಕ್ಷರ ನೇಮಕ ವಿಚಾರವಾಗಿ ಮಾತನಾಡಿದ ಮಾಜಿ ಸಿಎಂ, ಅಧ್ಯಕ್ಷರ ವೆಚ್ಚ ವರ್ಷಕ್ಕೆ 3 ರಿಂದ ನಾಲ್ಕು ಕೋಟಿ ಬೇಕು. ಆದರೆ ಅಲ್ಲಿ ಹಣವೇ ಇಲ್ಲ. ಖರ್ಚು ಮಾಡುವುದು ಎಲ್ಲಿಂದ? ಕೊರೊನಾ ಸಂದರ್ಭದಲ್ಲಿ ಇಷ್ಟು ದೊಡ್ಡ ಪ್ರಮಾಣದ ನಿಗಮ ಮಂಡಳಿ ಅಧ್ಯಕ್ಷರ ನೇಮಕ ಬೇಕಾಗಿರಲಿಲ್ಲ. ಕೇಂದ್ರ ಸರ್ಕಾರ ನಿಮ್ಮನ್ನು ಲೆಕ್ಕಕ್ಕೆ ಇಟ್ಟಿಲ್ಲ. ಬಿಜೆಪಿ ಸಿಎಂ ಇದ್ದಾರೆ ಅನ್ನುವುದನ್ನು ಕೇಂದ್ರ ಮರೆತು ಬಿಟ್ಟಿದೆ ಎಂದು ತಿಳಿಸಿದರು.
ದೇಶದಲ್ಲಿ ಕಾಂಗ್ರೆಸ್ ಅಪ್ರಸ್ತುತವಾಗುತ್ತದೆ
ದೇಶದಲ್ಲಿ ಕಾಂಗ್ರೆಸ್ ಅಪ್ರಸ್ತುತವಾಗುತ್ತದೆ, ಇದಕ್ಕೆ ವೇದಿಕೆ ಅವರೇ ಸಿದ್ಧ ಮಾಡಿಕೊಂಡಿದ್ದಾರೆ. ದೇಶದಲ್ಲಿ ಬಿಜೆಪಿಗೆ ಪರ್ಯಾಯ ಶಕ್ತಿ ಬಗ್ಗೆ ಸಭೆ ಮಾಡತ್ತಿದ್ದು, ತೆಲಂಗಾಣ ಸಿಎಂ ಕೆಸಿಆರ್ ಈ ಬಗ್ಗೆ ನನಗೆ ಕರೆ ಮಾಡಿದ್ದರು. ಬಿಜೆಪಿ ವಿರುದ್ಧವಾಗಿ ಪ್ರಾದೇಶಿಕ ಪಕ್ಷಗಳು ನಿಲ್ಲುತ್ತವೆ ಅನ್ನುವ ವಿಶ್ವಾಸವಿದೆ ಎಂದರು. ಇನ್ನು ಬೆಳಗಾವಿಯಲ್ಲಿ ಬಿಜೆಪಿ ಕೋರ್ ಕಮಿಟಿ ಸಭೆ ನಡೆಸಲಾಗುತ್ತದೆ. ಬೆಳಗಾವಿಯಲ್ಲಿ ಸಾಕಷ್ಟು ಹಾನಿಯಾಗಿದ್ದು, ಕಳೆದ ಬಾರಿ ನೀಡಿದ ಭರವಸೆ ಇನ್ನೂ ಈಡೇರಿಸಿಲ್ಲ. ಯಾರೂ ಸೌಜನ್ಯಕ್ಕಾದರೂ ಹಳ್ಳಿ ಭೇಟಿ ಮಾಡುತ್ತಿಲ್ಲ. ಸರ್ಕಾರವು ಸಲಹೆ ಮತ್ತು ಟೀಕೆ ಎರಡನ್ನು ಲೆಕ್ಕಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿದರು.
ರಾಜ್ಯದ ಚಿತ್ರಣವನ್ನು ಬದಲಾಯಿಸುವ ಭರವಸೆ
ಗಾದೆ ಮಾತಿನ ಮೂಲಕ ಟೀಕಿಸಿದ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ, ಜನರಿಗೆ ದ್ರೋಹ ಮಾಡುವ ಕೆಲಸ ಮಾಡಬೇಡಿ, ಉಪ ಚುನಾವಣೆ ಗೆಲುವಿನಿಂದ ಬೀಗಬೇಡಿ. ಇದು ಯಾವುದು ಯಾರಿಗೂ ಶಾಶ್ವತವಲ್ಲ ಎಂದು ನಂಜನಗೂಡು ಹಾಗೂ ಗುಂಡ್ಲುಪೇಟೆ ಉಪ ಚುನಾವಣೆ ಉದಾಹರಣೆ ನೀಡಿದರು. ರಾಜ್ಯದ ಚಿತ್ರಣವನ್ನು ಬದಲಾಯಿಸುವ ಭರವಸೆ ನೀಡಿದ್ದ ಸಿಎಂ ಯಡಿಯೂರಪ್ಪನವರೇ, ಜನರ ತುಟಿಗೆ ತುಪ್ಪ ಸವರುವ ಕೆಲಸ ಮಾಡಬೇಡಿ. ಸಮಾಜದ ಮೂಗಿಗೆ ತುಪ್ಪ ಸವರಿ ಶಾಶ್ವತವಾಗಿ ಹಿಡಿದಿಡಲು ಸಾಧ್ಯವಿಲ್ಲ, ಸತ್ಯಾಂಶ ಹೊರಗೆ ಬಂದೇ ಬರುತ್ತದೆ. ಸಂಕುಚಿತ ಕೀಳುಮಟ್ಟದ ರಾಜಕೀಯವನ್ನು ಬಿಡಿ, ಇನ್ನು ಮುಂದೆಯಾದರೂ ಜನರಿಗಾಗಿ ಕೆಲಸ ಮಾಡಿ ಎಂದು ಮಾತಿನ ಮೂಲಕ ತಿವಿದರು.
ರೈತ ಹೇಡಿಯಾಗಿ ಆತ್ಮಹತ್ಯೆ ಮಾಡಿಕೊಂಡಿಲ್ಲ
ಕೃಷಿ ಸಚಿವ ಬಿ.ಸಿ ಪಾಟೀಲ್ ಅವರ ರೈತ ವಿರೋಧಿ ಹೇಳಿಕೆ ಉಲ್ಲೇಖಿಸಿದ ಎಚ್ಡಿಕೆ, ರೈತರು ಆತ್ಮಹತ್ಯೆ ಮಾಡಿಕೊಳ್ಳುವ ವಾತಾವರಣ ಏಕೆ ಸೃಷ್ಟಿಯಾಗಿದೆ? ರೈತರ ಬೆಳೆ ನಾಶವಾಗಿದೆ ಅವರಿಗೆ ಪರಿಹಾರ ಸಿಕ್ಕಿಲ್ಲ. ಹೂವು ಬೆಳೆಗಾರರಿಗೆ ಘೋಷಣೆಯಾದ ಪರಿಹಾರ ನೀಡಿಲ್ಲ, ರೈತ ಹೇಡಿಯಾಗಿ ಆತ್ಮಹತ್ಯೆ ಮಾಡಿಕೊಂಡಿಲ್ಲ, ಸ್ವಾಭಿಮಾನ, ಮರ್ಯಾದೆಗೆ ಅಂಜಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿಯ ಬಿ ಟೀಂ ಎಂಬ ಅಪಪ್ರಚಾರ
ಕೆಲವು ಮಂತ್ರಿಗಳಿಗೆ ಅರ್ಧ ರಾತ್ರಿಯಲ್ಲಿ ಐಶ್ವರ್ಯ ಬಂದಂತೆ ಆಗಿದೆ, ಅಂತವರ ಬಗ್ಗೆ ನಾನು ಚರ್ಚೆ ಮಾಡುವುದಿಲ್ಲ. ಅವರಿಗೆ ಆ ಸ್ಥಾನ ಮಾನದ ಬೆಲೆ ಸಹ ಗೊತ್ತಿಲ್ಲ. ಒಳ್ಳೆಯ ದಾರಿಯಲ್ಲಿ ಹೋದರೆ ಸಹಕಾರ ಕೊಡುವೆ. ನಾನು ಸರಿಯಾದ ಸಮಯಕ್ಕೆ ಕಾಯುತ್ತಿದ್ದೇನೆ, ಸಮಯ ನೋಡಿ ಹೋರಾಟ ಮಾಡುತ್ತೇನೆ ಎಂದು ತಮ್ಮ ಭವಿಷ್ಯದ ನಡೆಯನ್ನು ವಿವರಿಸಿದರು. ಕಾಂಗ್ರೆಸ್ ಸೋಲು, ಗೆಲುವು ಜೆಡಿಎಸ್ ಮೇಲೆ ನಿಂತಿದೆ ಎಂದು ಅವರಿಗೆ ಗೊತ್ತಾಗಿದೆ. ಸಿದ್ದರಾಮಯ್ಯ ಅವರಿಂದ ಕಳೆದ ಬಾರಿ ಬಿಜೆಪಿಗೆ 105 ಸ್ಥಾನ ಬರುವಂತಾಯಿತು. ಜೆಡಿಎಸ್, ಬಿಜೆಪಿಯ ಬಿ ಟೀಂ ಎಂಬ ಅಪಪ್ರಚಾರದಿಂದ ಅವರಿಗೆ ಮುಳುವಾಯಿತು ಎಂದು ಟೀಕಿಸಿದರು.
ಕಾಂಗ್ರೆಸ್ ಸೋಲು, ಗೆಲುವು ಜೆಡಿಎಸ್ ಮೇಲೆ ನಿಂತಿದೆ
ಸಿದ್ದರಾಮಯ್ಯ ಅವರು ಯಾರನ್ನು ಭೇಟಿ ಮಾಡುತ್ತಾರೆ ನನಗೆ ಗೊತ್ತಿಲ್ಲವೇ? ಇತ್ತೀಚೆಗೆ ಯಾರನ್ನು ಭೇಟಿ ಮಾಡಿದ್ದರು ಎಂಬುದು ಗೊತ್ತಿದೆ. ನಾನು ಯಾರನ್ನು ಗೌಪ್ಯವಾಗಿ ಭೇಟಿ ಮಾಡಲ್ಲ, ನಾನು ರಾತ್ರಿ ಅಥವಾ ಗುಟ್ಟಾಗಿ ಭೇಟಿಯಾಗುವುದಿಲ್ಲ, ಎಲ್ಲರನ್ನೂ ಬಹಿರಂಗವಾಗಿಯೇ ಭೇಟಿ ಮಾಡುತ್ತೇನೆ ಎಂದು ಹೇಳಿದರು.