ನುಗು ವನ್ಯಧಾಮದಲ್ಲಿ ಮತ್ತೆ ಆರಂಭವಾಗುತ್ತಾ ಸಫಾರಿ?
ಮೈಸೂರು, ಜುಲೈ 28: ಅರಣ್ಯ ಇಲಾಖೆ ಅಧಿಕಾರಿಗಳು ಅಂದುಕೊಂಡಂತೆ ಆದರೆ ಬಂಡೀಪುರ ಅಭಯಾರಣ್ಯ ವ್ಯಾಪ್ತಿಯ ಹೆಡಿಯಾಲ ಉಪವಿಭಾಗದ ನುಗು ವನ್ಯಧಾಮದಲ್ಲಿ ಮತ್ತೆ ಸಫಾರಿ ಆರಂಭವಾಗಿ, ಪ್ರಾಣಿ ಪ್ರಿಯರಿಗೆ ವನ್ಯಪ್ರಾಣಿಗಳ ದರ್ಶನವಾಗಲಿದೆ.
ಈ ಕುರಿತಂತೆ ಅರಣ್ಯ ಇಲಾಖೆ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದ್ದು, ಹಸಿರು ನಿಶಾನೆಗಾಗಿ ಕಾಯುತ್ತಿದೆ. ಒಂದು ವೇಳೆ ನುಗು ವನ್ಯಧಾಮದಲ್ಲಿ ಸಫಾರಿ ಆರಂಭವಾಗಿದ್ದೇ ಆದರೆ ಹೆಚ್ಚಿನ ಪ್ರವಾಸಿಗರನ್ನು ಈ ಸಫಾರಿ ಕೇಂದ್ರ ತನ್ನತ್ತ ಸೆಳೆಯುವ ಸಾಧ್ಯತೆಯಿದೆ. ಜಲಾಶಯದ ಹಿನ್ನೀರು ಮತ್ತು ಅರಣ್ಯದ ನಡುವಿನ ವನ್ಯಪ್ರಾಣಿಗಳ ಸ್ವಚ್ಛಂದ ವಿಹಾರ ಪ್ರವಾಸಿಗರನ್ನು ಸೆಳೆಯಲಿದೆ.
ಕಾಕನಕೋಟೆಯ ಮೊದಲ ದಿನದ ಸಫಾರಿಯಲ್ಲೇ ಹುಲಿ ದರ್ಶನ
ಇಲ್ಲಿ ಕರಿಚಿರತೆಗಳೇ ಆಕರ್ಷಣೆ
ಈ ವ್ಯಾಪ್ತಿಯಲ್ಲಿ ಸಫಾರಿ ಮಾಡಲು ಅರಣ್ಯ ಇಲಾಖೆ ಉತ್ಸುಕರಾಗಲು ಕಾರಣವೂ ಇದೆ. ನುಗು ವನ್ಯಧಾಮವು 30.32 ಚದರ ಕಿಲೋ ಮೀಟರ್ ಇದ್ದು, ಈ ಪ್ರದೇಶವನ್ನು ಪ್ರವಾಸೋದ್ಯಮಕ್ಕೆ ಬಳಸಿಕೊಳ್ಳಲು ಅರಣ್ಯ ಇಲಾಖೆ ಮುಂದಾಗಿದೆ. ಇಲ್ಲಿ ಎರಡು ಕರಿ ಚಿರತೆಗಳಿದ್ದು, ಅವು ಪ್ರಮುಖ ಆಕರ್ಷಣೆಗಳಾಗಿವೆ. ಈಗಾಗಲೇ ಹಲವು ಬಾರಿ ಜನರಿಗೆ ಕಾಣಿಸಿಕೊಂಡು ರೋಮಾಂಚನಗೊಳಿಸಿವೆ. ಒಂದು ವೇಳೆ ಸಫಾರಿ ಆರಂಭಿಸಿದ್ದೇ ಆದರೆ ಹೆಚ್ಚಿನವರು ಈ ಕರಿಚಿರತೆಗಳನ್ನು ನೋಡುವ ಸಲುವಾಗಿಯೇ ಬರುವುದು ಖಚಿತ. ಇವು ಮಾತ್ರವಲ್ಲದೆ ಸದಾ ಅಲೆಯಾಡುವ ಹಿನ್ನೀರು, ಇದನ್ನು ಕುಡಿಯಲು ಬರುವ ಕಾಡಾನೆ, ಹುಲಿ, ಚಿರತೆ, ಕರಡಿ, ಕಾಡೆಮ್ಮೆ, ಕಾಡುಹಂದಿ, ಜಿಂಕೆ, ಸೀಳುನಾಯಿ, ನೀರುನಾಯಿ, ವಿವಿಧ ಬಗೆಯ ಪಕ್ಷಿಗಳು ಕಾಣಸಿಗಲಿವೆ.
26 ವರ್ಷಗಳ ಹಿಂದೆ ನಡೆಯುತ್ತಿದ್ದ ಸಫಾರಿ
ನುಗು ಮತ್ತು ಗುಂಡ್ರೆಯಲ್ಲಿ ಈ ಹಿಂದೆಯೇ ಸಫಾರಿಯಿತ್ತು. ಈ ಪ್ರದೇಶಗಳು ಮೈಸೂರು ಜಿಲ್ಲೆಗೆ ಸೇರಿದ್ದು, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಗೆ ಬರುತ್ತವೆ. 1994ರ ತನಕವೂ ಇಲ್ಲಿ ಸಫಾರಿ ನಡೆಯುತ್ತಿತ್ತಾದರೂ ಆ ನಂತರ ಕಾರಣಾಂತರದಿಂದ ಅರಣ್ಯ ಇಲಾಖೆ ಈ ಎರಡು ಸಫಾರಿ ವಲಯವನ್ನು ಹಿಂಪಡೆದಿದ್ದು ಇತಿಹಾಸ. ಇದೀಗ ನುಗು ವನ್ಯಧಾಮದಲ್ಲಿ ಸಫಾರಿ ಆರಂಭಿಸುವ ಚಿಂತನೆ ಮಾಡಿರುವುದು ಪ್ರವಾಸೋದ್ಯಮ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ನುಗು ವನ್ಯಧಾಮದಲ್ಲಿ ಸುಮಾರು 21 ಕಿ.ಮೀ ರಸ್ತೆಯಿದ್ದು, ಇದನ್ನು ಸಫಾರಿಗೆ ಬಳಸಿಕೊಳ್ಳಲು ಅರಣ್ಯ ಇಲಾಖೆ ಮುಂದಾಗಿದೆ. ಸಫಾರಿಗೆ ಮಾರ್ಗವನ್ನು ಸೂಚಿಸಲಾಗಿದ್ದು, ನುಗು ವಲಯ ಕಚೇರಿಯಿಂದ ಆನಂದಿ ಕೆರೆವರೆಗಿನ ಎಂಟು ಕಿ.ಮೀ. ಹಾಗೂ ನುಗು ಜಲಾಶಯದ ಹಿನ್ನೀರು ಮಾರ್ಗವಾಗಿರುವ ನವಿಲಾಡಿ ಕೆರೆಯಿಂದ ನುಗು ವಲಯ ಕಚೇರಿವರೆಗೆ ಎಂಟು ಕಿ.ಮೀ. ದೂರವನ್ನು ಸಫಾರಿಗೆ ಬಳಸಿಕೊಳ್ಳಲಾಗುತ್ತಿದೆ.
ಮೈಸೂರು: ಐದು ವರ್ಷದ ಬಳಿಕ ಭರ್ತಿಯಾದ ನುಗು-ತಾರಕ ಜಲಾಶಯ
ಸುತ್ತಮುತ್ತ ಪ್ರವಾಸಿ ತಾಣಗಳ ಆಕರ್ಷಣೆ
ಇದೀಗ ಸಫಾರಿ ನಡೆಸಲು ಚಿಂತನೆ ಮಾಡಿರುವ ನುಗು ವನ್ಯಧಾಮವು ನಾಗರಹೊಳೆ ಮತ್ತು ಬಂಡೀಪುರ ಅರಣ್ಯಕ್ಕೆ ಹೊಂದಿಕೊಂಡಂತಿರುವುದರಿಂದ ಸುತ್ತಮುತ್ತ ಪ್ರವಾಸಿ ತಾಣಗಳಾದ ಚಿಕ್ಕದೇವಮ್ಮನ ಬೆಟ್ಟ, ಕಬಿನಿ ಮತ್ತು ನುಗು ಜಲಾಶಯವಿದ್ದು, ಮೈಸೂರಿಗೂ ಹತ್ತಿರವಾಗುವುದರಿಂದ ಪ್ರವಾಸಿಗರು ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುವ ಸಾಧ್ಯತೆಯಿದೆ. ಇದರಿಂದ ಬಂಡೀಪುರದ ಮೆಲುಕಾಮನಹಳ್ಳಿಯಲ್ಲಿ ನಡೆಯುತ್ತಿರುವ ಸಫಾರಿಯ ಒತ್ತಡವೂ ಕಡಿಮೆಯಾಗಲಿದೆ. ಸ್ಥಳೀಯ ಗ್ರಾಮೀಣ ಜನಕ್ಕೆ ವರ್ಷಪೂರ್ತಿ ಉದ್ಯೋಗವೂ ದೊರೆಯಲಿದೆ.
ಎಲ್ಲ ಸರಿಹೋದರೆ ಶೀಘ್ರವೇ ಸಫಾರಿ ಶುರು
ಮುಂದಿನ ದಿನಗಳಲ್ಲಿ ಎಲ್ಲವೂ ಅಂದುಕೊಂಡಂತೆಯೇ ನಡೆದಿದ್ದೇ ಆದರೆ ಮೈಸೂರಿಗೆ ಹತ್ತಿರದಲ್ಲಿ ಸಫಾರಿ ನಡೆಯಲಿರುವುದರಿಂದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಇತ್ತ ಧಾವಿಸಲಿದ್ದಾರೆ. ನುಗು ವನ್ಯಧಾಮದಲ್ಲಿ ಸಫಾರಿ ಆರಂಭಿಸುವ ಪ್ರಸ್ತಾವನೆ ಕುರಿತಂತೆ ಸುದ್ದಿಗಳು ಹೊರಬರುತ್ತಿದ್ದಂತೆ ಪ್ರವಾಸಿಗರು ಖುಷಿಯಾಗಿದ್ದಾರೆ. ಕೊರೊನಾ ಸೋಂಕಿನಿಂದಾಗಿ ಈಗಾಗಲೇ ಜನಜೀವನ ಅಸ್ತವ್ಯಸ್ತವಾಗಿದ್ದು, ಪ್ರವಾಸೋದ್ಯಮ ನೆಲಕಚ್ಚಿದೆ. ಇದನ್ನೇ ನಂಬಿ ಬದುಕುತ್ತಿದ್ದವರ ಬದುಕು ಬೀದಿಗೆ ಬಿದ್ದಿದೆ. ಮುಂದಿನ ದಿನಗಳಲ್ಲಿ ಎಲ್ಲವೂ ಸರಿ ಹೋಗಿ ಜನಜೀವನ ಯಥಾ ಸ್ಥಿತಿಗೆ ಬರುವ ಹೊತ್ತಿಗೆ ನುಗು ವನ್ಯಧಾಮದಲ್ಲಿ ಸಫಾರಿ ಆರಂಭವಾದರೆ ಅದಕ್ಕಿಂತ ಸಂತೋಷ ಮತ್ತೊಂದಿಲ್ಲ.