ಮೈಸೂರು: ಕಬಿನಿ ಹಿನ್ನೀರಲ್ಲಿ ಹುಲಿ ಸೆರೆ ಕಾರ್ಯಾಚರಣೆ ಸ್ಥಗಿತ
ಮೈಸೂರು, ನವೆಂಬರ್ 6: ನಾಗರಹೊಳೆ ಅರಣ್ಯ ವ್ಯಾಪ್ತಿಯ ಅಂತರಸಂತೆ ಅರಣ್ಯದ ಕಾರಾಪುರ ಕಬಿನಿ ರಿವರ್ ಲಾಡ್ಜ್ (ಜಂಗಲ್ ಲಾಡ್ಜ್) ನಲ್ಲಿ ಕಳೆದ ಮೂರು ದಿನಗಳ ಹಿಂದೆ ಕಾಣಿಸಿಕೊಂಡಿದ್ದ ಹುಲಿಯನ್ನು ಹಿಡಿಯಲು ಆರಂಭಿಸಿದ್ದ ಕಾರ್ಯಾಚರಣೆಯು 2ನೇ ದಿನಕ್ಕೆ ಕಾಲಿಟ್ಟಿದ್ದು, ಸೋಮವಾರ ಆನೆಗಳ ಮೂಲಕ ಹುಲಿಯನ್ನು ಹುಡುಕುವ ಕಾರ್ಯ ಆರಂಭಿಸಿ ಮಧ್ಯಾಹ್ನದ ವೇಳೆಗೆ ಸ್ಥಗಿತಗೊಳಿಸಲಾಯಿತು.
ಎಚ್ ಡಿ ಕೋಟೆಯಲ್ಲಿ ಹುಲಿ ಪ್ರತ್ಯಕ್ಷ, ಸೆರೆ ಹಿಡಿಯಲು 80 ಸಿಬ್ಬಂದಿ!
ಬೆಳಿಗ್ಗೆ 6 ಗಂಟೆಗೆ ಅರಣ್ಯ ಸಿಬ್ಬಂದಿಗಳು ಮತ್ತು ಆನೆಗಳ ಮೂಲಕ ಕೂಂಬಿಂಗ್ ಕಾರ್ಯಾಚರಣೆಯನ್ನು ಆರಂಭಿಸಿದ್ದರು. ನಂತರ ಸುಮಾರು ಎಂಟು ಗಂಟೆಯ ವೇಳೆಗೆ ಮೊದಲ ಸುತ್ತಿನ ಕಾರ್ಯಾಚರಣೆ ನಿಲ್ಲಿಸಲಾಯಿತು. ಮತ್ತೊಮ್ಮೆ ಆನೆಗಳ ಮೂಲಕ ಕಾರ್ಯಾಚರಣೆ ಆರಂಭಿಸಿದರಾದರೂ ಹುಲಿ ಕಾಣಿಸದ ಹಿನ್ನಲೆಯಲ್ಲಿ ಸುಮಾರು 12 ಗಂಟೆಯ ವೇಳೆಗೆ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ.
ಕ್ಯಾಮರಾದಲ್ಲಿ ಹುಲಿಯ ಚಲನವಲನ ಕಂಡಿದ್ದು ಚಲನೆಯ ಜಾಡು ಹಿಡಿದು ಹುಲಿಯ ಹೆಜ್ಜೆಯನ್ನು ಹುಡುಕುತ್ತಾ ಹೊರಟ ಕಾರ್ಯಾಚರಣೆ ತಂಡಕ್ಕೆ ಹುಲಿಯು ಜಂಗಲ್ ಲಾಡ್ಜ್ ನಿಂದ ಹೊರಹೋದಂತೆ ಭಾಸವಾಗಿದ್ದು, ಹುಲಿಯು ಹೊರಹೋಗಿರಬಹುದು ಎಂದು ಶಂಕಿಸಲಾಗಿದೆ.
ಹುಲಿ ಹೊರಗಡೆ ಹೋದ ಜಾಗದಲ್ಲಿ ಕಬಿನಿ ಹಿನ್ನೀರು ಇರುವುದರಿಂದ ಅರಣ್ಯ ಸಿಬ್ಬಂದಿ ಜಂಗಲ್ ಲಾಡ್ಜ್ ನ ಬೋಟ್ಗಳ ಮೂಲಕ ಎರಡು ಕಡೆಯ ದಡವನ್ನು ಪರಿಶೀಲಿಸಿದ್ದಾರೆ. ಆದರೆ ಹುಲಿಯ ಯಾವುದೇ ಹೆಜ್ಜೆ ಗುರುತುಗಳು ಕಂಡುಬಂದಿಲ್ಲ.
ಹುಲಿ ಕಾಣಿಸಿಕೊಳ್ಳದ ಹಿನ್ನಲೆಯಲ್ಲಿ ಅಧಿಕಾರಿಗಳು ಕಾರ್ಯಾಚರಣೆ ಸ್ಥಗಿತಗೊಳಿಸಿ, ಕೆಲ ಅರಣ್ಯ ಸಿಬ್ಬಂದಿಯನ್ನು ಸ್ಥಳದಲ್ಲಿ ಮೊಕ್ಕಾಂ ಹೂಡುವಂತೆ ಹೇಳಿ ತಮ್ಮ ಸ್ವಸ್ಥಾನಕ್ಕೆ ತೆರಳಿದ್ದಾರೆ.