ಬಂಡೀಪುರ ಹಸಿರಾಗಿಸಲು ಬೃಹತ್ ಬಿತ್ತನೆ ಕಾರ್ಯ ಆರಂಭ
ಮೈಸೂರು, ಮೇ 16: ಯಾರದ್ದೋ ಹೊಟ್ಟೆಕಿಚ್ಚಿಗೆ ಬಲಿಯಾಗಿದ್ದ ಬಂಡೀಪುರದ ಬೃಹತ್ ಅಭಯಾರಣ್ಯವನ್ನು ಹಸಿರುಮಯವಾಗಿಸಲು ಅರಣ್ಯ ಇಲಾಖೆ ಮುಂದಾಗಿದೆ. ಈಗಾಗಲೇ ಕೆಲ ಜಾಗಗಳಲ್ಲಿ ಬಿದಿರು ಸೇರಿದಂತೆ ಸ್ಥಳೀಯವಾಗಿ ಬೆಳೆಯುವ ಮರಗಳ ಬೀಜವನ್ನು ಬೆಳೆಸುವ ಸಲುವಾಗಿ ಬಿತ್ತನೆ ಕಾರ್ಯವನ್ನು ಆರಂಭಿಸಲಾಗಿದೆ.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ಕಳೆದೊಂದು ವಾರದಿಂದ ಈ ಕೆಲಸಕ್ಕೆ ಅರಣ್ಯ ಅಧಿಕಾರಿಗಳು ಚಾಲನೆ ನೀಡಿದ್ದಾರೆ. ಕಳೆದ ತಿಂಗಳನಿಂದೀಚೆಗೆ ಬಂಡೀಪುರ ಅಭಯಾರಣ್ಯದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಈಗಾಗಲೇ ಕಾನನ ಹಸಿರು ಹೊದ್ದು ನಿಂತಂತಿದೆ. ಇದರೊಟ್ಟಿಗೆ ಅಗ್ನಿ ಜ್ವಾಲೆಗೆ ನಲುಗಿದ್ದ ಗೋಪಾಲಸ್ವಾಮಿ ಬೆಟ್ಟ, ಕುಂದಕರೆ ವಲಯದಲ್ಲಿ ಸುಟ್ಟ ಗಿಡಗಳ ಚಿಗುರೊಡೆಯುತ್ತಿದ್ದರೂ, ಅಕ್ಕ- ಪಕ್ಕ ಹುಲ್ಲುಗಳು ಬೆಳೆಯುತ್ತಿಲ್ಲ.
ಜೂನ್ 2 ರಿಂದ ಬಂಡೀಪುರದಲ್ಲಿ ಸಫಾರಿ ಸ್ಥಳ ಬದಲಾವಣೆ
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ. ದಕ್ಷಿಣ ಭಾರತದಲ್ಲಿಯೇ ಅತೀ ಹೆಚ್ಚು ಹುಲಿಗಳಿರುವ ರಾಷ್ಟ್ರೀಯ ಉದ್ಯಾನವನ ಎಂಬ ಕೀರ್ತಿಗೆ ಪಾತ್ರವಾಗಿದೆ. 1200 ಚ.ಕಿ.ಮೀ ವಿಸ್ತೀರ್ಣದ ಬಂಡೀಪುರ 136 ಹುಲಿಗಳು, ಸಾವಿರಾರು ಆನೆ, ನೂರಾರು ಕಾಡೆಮ್ಮೆ, ಚಿರತೆ, ಕರಡಿ, ಸಾಂಬಾರ್, ಮೌಸ್ ಡೀರ್, ಚುಕ್ಕೆ ಜಿಂಕೆ, ಕಾಡುನಾಯಿ ಸೇರಿದಂತೆ ಕಾನನದ ಪ್ರಾಣಿಗಳನ್ನು ತನ್ನೊಡಲಲ್ಲಿಟ್ಟುಕೊಂಡಿದೆ.
ಸುಮಾರು 3೦ ಮಂದಿ ಮಣ್ಣನ್ನು ಸಡಿಲಿಸಿ ಬೀಜ ಹಾಕುವ ಕಾರ್ಯದಲ್ಲಿ ಈಗಾಗಲೇ ಮಗ್ನರಾಗಿದ್ದಾರೆ . 2500 ಹೊಂಗೆ ಬೀಜ, 500 ಶ್ರೀಗಂಧ, 200 ಫೈಕಸ್, 470 ಎಲಚಿ, 200 ಹುಣಸೆ, 4000 ಹೆಬ್ಬೇವು, 110 ಗೊಬ್ಬಳಿ, 14 ಶಿವನೆ, 1500 ಹೆಮಟಾ, 13 ಕೆಜಿ ಹೊಳೆದಾಸವಾಳ ಬೀಜವನ್ನು ನೆಡುವುದಕ್ಕೆ ಪೂರ್ವ ತಯಾರಿ ನಡೆಸಲಾಗಿದೆ.
ಬಂಡೀಪುರದಲ್ಲಿ ವನ್ಯ ಪ್ರಾಣಿಗಳದ್ದೇ ಕಾರುಬಾರು:ಪ್ರಯಾಣಿಕರಿಗೆ ರಸ್ತೆ ಬದಿಯಲ್ಲೇ ದರ್ಶನ
10 ಸಾವಿರ ಕೆಜಿಗೂ ಹೆಚ್ಚು ವಿವಿಧ ಗಿಡ, ಮರಗಳ ಬೀಜ ತರಲಾಗಿದ್ದು, ಇನ್ನು 2500 ಕೆಜಿ ಬಿತ್ತನೆ ಬೀಜ ತರಲು ಅರಣ್ಯ ಇಲಾಖೆ ಮುಂದಾಗಿದೆ. ಕಾಡ್ಗಿಚ್ಚಿನಿಂದ ಹಾನಿಗೊಳಗಾದ ಪ್ರದೇಶದ ಬೀಜ ಬಿತ್ತನೆ ಕಾರ್ಯದಲ್ಲಿ ಸಂಘ-ಸಂಸ್ಥೆ ಕಾರ್ಯಕರ್ತರು ಹಾಗೂ ಸ್ವಯಂ ಸೇವಕರನ್ನು ಬಳಸಿಕೊಳ್ಳುವುದಕ್ಕೂ ಅರಣ್ಯ ಇಲಾಖೆ ಅವಕಾಶ ನೀಡಿಲ್ಲ. ಇಲಾಖೆ ಸಿಬ್ಬಂದಿ ಮೂಲಕವೇ ಬಿತ್ತನೆ ಬೀಜ ಬಿತ್ತಲಾಗುತ್ತಿರುವುದು ವಿಶೇಷ.