ದಸರೆಗೆ ಮುನ್ನವೇ ಹಿಂತಿರುಗಿ ಹೋಗುವನೇ ಈಶ್ವರ ಆನೆ?
ಮೈಸೂರು, ಸೆಪ್ಟೆಂಬರ್ 10: ಇದೇ ಮೊದಲ ಬಾರಿಗೆ ದಸರೆಗೆ ಆಗಮಿಸಿದ ಈಶ್ವರ ಆನೆಯು ನಗರದ ವಾತಾವರಣಕ್ಕೆ ಹೊಂದಿಕೊಳ್ಳದ ಹಿನ್ನೆಲೆಯಲ್ಲಿ ಕಾಡಿಗೆ ಹಿಂದಕ್ಕೆ ಕಳುಹಿಸಲು ಅರಣ್ಯ ಇಲಾಖೆ ಚಿಂತನೆ ನಡೆಸಿದೆ.
ಜಂಬೂಸವಾರಿಗೆ ಹೆಜ್ಜೆ ಹಾಕಲು ನಾಡಿಗೆ ಬಂದಿಳಿದ ಮತ್ತೊಂದು ಸುತ್ತಿನ ಗಜಪಡೆ
ಇಂದು ನಡೆದ ದಸರಾ ಸಿದ್ಧತಾ ಸಭೆಯಲ್ಲಿ ಈಶ್ವರ ಆನೆ ಬಗ್ಗೆ ಸಚಿವ ಸೋಮಣ್ಣ ಆತಂಕ ವ್ಯಕ್ತಪಡಿಸಿದ್ದಾರೆ. ಈಶ್ವರ ಆನೆಯೂ ನಗರದ ವಾತಾವರಣಕ್ಕೆ ಒಗ್ಗುತ್ತಿರಲಿಲ್ಲ. ಹೆದರಿಕೊಳ್ಳುತ್ತಿದ್ದ ಕಾರಣ ಅರಣ್ಯಾಧಿಕಾರಿಗಳು ಆನೆಯನ್ನು ವಾಪಸ್ ಕಾಡಿಗೆ ಬಿಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಅಲ್ಲದೆ ಈ ಆನೆಯ ಬದಲಿಗೆ ಬೇರೆ ಆನೆ ತರಲು ಅರಣ್ಯಾಧಿಕಾರಿಗಳು ಮುಂದಾಗಿರುವುದಾಗಿ ಮೂಲಗಳು ತಿಳಿಸಿವೆ.
ಇದೇ ಮೊದಲ ಬಾರಿಗೆ ಪುಂಡಾನೆ ಎಂದೇ ಹೆಸರಾದ ಈಶ್ವರ ಆನೆಯನ್ನು ದಸರಾ ಗಜಪಡೆಗೆ ಸೇರಿಸಿಕೊಳ್ಳಲಾಗಿತ್ತು. ಈ ಆನೆ ವಿಚಾರವಾಗಿ ಸಾರ್ವಜನಿಕರಿಂದ ದೂರು ಬರುತ್ತಿರುವುದರಿಂದ ಈ ಬಗ್ಗೆ ಸೋಮಣ್ಣ ಅವರು ಸಭೆಯಲ್ಲಿ ಪ್ರಸ್ತಾಪಿಸಿದ್ದರು. ಇಂತಹ ದೂರುಗಳು ಬಂದಾಗ ನಾವು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಆನೆಯನ್ನು ಬದಲಾಯಿಸಲೇಬೇಕಾಗುತ್ತದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಸುರಕ್ಷತೆ ದೃಷ್ಟಿಯಿಂದ ಈ ನಿರ್ಧಾರ ಅನಿವಾರ್ಯ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ನಗರ ಪ್ರದೇಶದಲ್ಲಿ ಗಜಪಡೆ ತಾಲೀಮು ಆರಂಭಿಸಿದ ದಿನದಿಂದಲೂ ಈಶ್ವರ ಆನೆ ಗಾಬರಿಗೊಳ್ಳುತ್ತಿತ್ತು. ವೈದ್ಯರು ಹಾಗೂ ಅಧಿಕಾರಿಗಳು ದಿನ ಕಳೆಯುತ್ತಿದ್ದಂತೆ ಆನೆ ಈ ವಾತಾವರಣಕ್ಕೆ ಹೊಂದಿಕೊಳ್ಳುತ್ತದೆ ಎಂಬ ವಿಶ್ವಾಸದಲ್ಲಿದ್ದರು. ಆದರೆ ಇದು ಸಾಧ್ಯವಾಗದ ಕಾರಣ ಆನೆಯನ್ನು ದಸರೆಯ ಜಂಬೂಸವಾರಿಯಲ್ಲಿ ಸೇರಿಸಿಕೊಳ್ಳದಿರಲು ಚಿಂತನೆ ನಡೆದಿದೆ.