ಮೈಸೂರು ದಸರಾ ಆನೆಗಳಿಗೂ ಕ್ವಾರಂಟೈನ್!
ಮೈಸೂರು, ಅಕ್ಟೋಬರ್ 5: ಕೊರೊನಾ ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ಈ ಬಾರಿಯ ದಸರಾ ಆನೆಗಳನ್ನು ಅರಣ್ಯ ಇಲಾಖೆಯು ಕ್ವಾರಂಟೈನ್ ನಲ್ಲಿರಿಸಲು ತೀರ್ಮಾನಿಸಿದೆ.
ದಸರಾದಲ್ಲಿ ಪಾಲ್ಗೊಳ್ಳುವ ಆನೆಗಳನ್ನು ತೂಕ ಮಾಡಿಸಲೂ ಕೂಡ ಹೊರಗೆ ಕರೆದೊಯ್ಯಲಾಗುತ್ತಿಲ್ಲ. ಅರಣ್ಯ ಇಲಾಖೆ ಕೂಡ ಕೆಲ ಕಾರ್ಯವಿಧಾನಗಳನ್ನು ಕೈಬಿಟ್ಟಿದ್ದು, ಆನೆಗಳು, ಮಾವುತರು ಹಾಗೂ ಕಾವಾಡಿಗಳೂ ಕೂಡ ಹೊರಗಡೆ ಎಲ್ಲೂ ತೆರಳದಂತೆ ಕಟ್ಟುನಿಟ್ಟಿನ ನಿಯಗಳನ್ನು ಜಾರಿ ಮಾಡಿದ್ದಾರೆ.
ಮೈಸೂರು ದಸರಾ ವೈಭವಕ್ಕೆ ಸಾಕ್ಷಿಯಾಗಿರುವ ಸೀತಾವಿಲಾಸ ಛತ್ರ
ಮೈಸೂರು ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅರಣ್ಯ ಉಪ ಸಂರಕ್ಷಣಾಧಿಕಾರಿ ಜೆ.ಅಲೆಕ್ಸಾಂಡರ್ ಅವರು ಈ ಬಾರಿ ಹೆಚ್ಚಿನ ಎಚ್ಚರಿಕೆ ವಹಿಸುತ್ತಿದ್ದಾರೆ. ಆನೆಗಳು ಹುಣಸೂರಿನ ವೀರನಹೊಸಳ್ಳಿಯಿಂದ ಹೊರಡುವಾಗ ತೂಕ ಮಾಡಲಾಗಿದೆ ಎಂದು ಹೇಳಿದ್ದಾರೆ.
ಅರಣ್ಯ ಸಿಬ್ಬಂದಿ ಸೇರಿದಂತೆ 19 ಜನರಿಗೂ ಕೊರೊನಾ ನೆಗೆಟಿವ್
ಈ ನಡುವೆ ದಸರಾ ಗಜಪಡೆಯೊಂದಿಗೆ ಮೈಸೂರು ಅರಮನೆಗೆ ಆಗಮಿಸಿರುವ ಮಾವುತರು, ಕಾವಾಡಿಗಳು, ಸಹಾಯಕರು ಹಾಗೂ ಆನೆಗಳ ಮೇಲುಸ್ತುವಾರಿ ನೋಡಿಕೊಳ್ಳುತ್ತಿರುವ ಅರಣ್ಯ ಸಿಬ್ಬಂದಿ ಸೇರಿದಂತೆ 19 ಮಂದಿಗೂ ಕೊರೊನಾ ಪರೀಕ್ಷೆ ಮಾಡಿಸಲಾಗಿದ್ದು, ಎಲ್ಲರ ಫಲಿತಾಂಶವೂ ನೆಗೆಟಿವ್ ಬಂದಿದೆ ಎಂದು ತಿಳಿದುಬಂದಿದೆ.
ಜಂಬೂ ಸವಾರಿ ಮುನ್ನ 21 ಸುತ್ತು ಕುಶಾಲತೋಪು
ಈಗ ಅರಮನೆಯ ಅಂಗಳದಲ್ಲಿ ಕುಶಾಲತೋಪು ಸಿಡಿಸುವ ಡ್ರೈ ತಾಲೀಮು ನಡೆಸಲಾಗುತ್ತಿದೆ. ಮೈಸೂರು ನಗರ ಸಶಸ್ತ್ರ ಮೀಸಲು ಪೊಲೀಸ್ ಪಡೆ ಇಂದು ಸಿಡಿಮದ್ದು ಸಿಡಿಸದೆಯೇ ತಾಲೀಮು ನಡೆಸಿದೆ. ವಿಜಯ ದಶಮಿಯಂದು ಜಂಬೂ ಸವಾರಿ ಹೊರಡುವ ಮುನ್ನ 21 ಸುತ್ತು ಕುಶಾಲತೋಪು ಸಿಡಿಸಲಾಗುತ್ತದೆ. ಇದಕ್ಕಾಗಿ ಮುಂಚಿತವಾಗಿ ತಾಲೀಮು ಪ್ರಾರಂಭಿಸಲಾಗಿದೆ. ಸಿಎಆರ್ ನ 30 ಸಿಬ್ಬಂದಿ ಕುಶಾಲತೋಪು ಡ್ರೈ ಪ್ರಾಕ್ಟೀಸ್ ನಲ್ಲಿ ಭಾಗಿಯಾಗಿದ್ದರು. ದಸರಾ ವೇಳೆ ಕುಶಾಲತೋಪು ಸಿಡಿಸಲು 7 ಫಿರಂಗಿ ಗಾಡಿಗಳನ್ನು ಬಳಸಲಾಗುತ್ತದೆ. ಆನೆಗಳು, ಕುದುರೆಗಳು ಬೆದರದಂತೆ ನೋಡಿಕೊಳ್ಳುವುದು ತಾಲೀಮಿನ ಉದ್ದೇಶವಾಗಿದೆ.
ಅರಮನೆಯ ಸಮೀಪವೇ ತಾಲೀಮು ನಡೆಯಲಿದೆ
ಇನ್ನು ಕೆಲವು ದಿನಗಳಲ್ಲಿ ಆನೆ ಮತ್ತು ಕುದುರೆಗಳ ಸಮ್ಮುಖದಲ್ಲಿ ಸಿಡಿಮದ್ದು ಸಿಡಿಸಿ, ತಾಲೀಮು ಆರಂಭಿಸಲಾಗುತ್ತದೆ. ವಿಜಯದಶಮಿಯ ದಿನ ಅರಮನೆ ಬಳಿ ಪೊಲೀಸರು 21 ಬಾರಿ ಕುಶಾಲತೋಪು ಸಿಡಿಸುವ ಮೂಲಕ ಗೌರವ ಸಲ್ಲಿಸುತ್ತಾರೆ. ಪ್ರತಿ ಬಾರಿ ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ತಾಲೀಮು ನಡೆಸಲಾಗುತ್ತಿತ್ತು. ಆದರೆ ಈ ಬಾರಿ ಆನೆಗಳನ್ನು ಹೊರಗಡೆ ಕರೆದುಕೊಂಡು ಹೋಗುವಂತಿಲ್ಲ. ಹೀಗಾಗಿ ಅರಮನೆಯ ಸಮೀಪವೇ ತಾಲೀಮು ನಡೆಯಲಿದೆ ಎನ್ನಲಾಗುತ್ತಿದೆ.
ಸರ್ಕಾರದ ಮಾರ್ಗಸೂಚಿಯಂತೆ ದಸರಾ ಮಹೋತ್ಸವ
ಮೈಸೂರಿನಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಪ್ರಕರಣ ಹೆಚ್ಚುತ್ತಲೇ ಇದ್ದು, ಸಾರ್ವಜನಿಕರು ಈ ಬಾರಿ ದಸರಾ ಮಹೋತ್ಸವ ಸಂಭ್ರಮದಿಂದ ವಂಚಿತರಾಗಲಿದ್ದಾರೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ದಸರಾ ಮಹೋತ್ಸವ ನಡೆಯಲಿದ್ದು, 2000 ಮಂದಿಗೆ ಮಾತ್ರ ಪಾಲ್ಗೊಳ್ಳಲು ಅವಕಾಶವಿದೆ.