ಶಾಸಕ ಯತೀಂದ್ರ ಸಿದ್ದರಾಮಯ್ಯರಿಂದ ಆಹಾರ ಕಿಟ್ ವಿತರಣೆ
ಮೈಸೂರು, ಏಪ್ರಿಲ್ 08: ಮೈಸೂರು ಜಿಲ್ಲೆಯ ವರುಣ ವಿಧಾನ ಸಭಾ ಕ್ಷೇತ್ರದ ಬಡವರು, ಸ್ಲಂ ನಿವಾಸಿಗಳು ಹಾಗೂ ಮಂಗಳಮುಖಿಯರಿಗೆ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ಬುಧವಾರ ಆಹಾರ ಕಿಟ್ ಗಳನ್ನು ವಿತರಣೆ ಮಾಡಿದರು.
ಇದೇ ಸಂದರ್ಭ ಮಾತನಾಡಿದ ಯತೀಂದ್ರ ಅವರು, ಜನ ಪ್ರತಿನಿಧಿ ಆದವರು ಜನರ ಮಧ್ಯೆ ಇದ್ದು ಕೆಲಸ ಮಾಡಿದಾಗ ಮಾತ್ರ ಜನ ಪ್ರತಿನಿಧಿ ಎಂಬ ಪದಕ್ಕೆ ಅರ್ಥ ಸಿಗುತ್ತದೆ ಜನರಿಗೂ ಕೂಡ ನಮ್ಮ ಮೇಲೆ ವಿಶ್ವಾಸ ವೃದ್ದಿಯಾಗುತ್ತದೆ, ಮತದಾರರೊಂದಿಗೆ ಬಾಂಧವ್ಯ ಬೆಳೆಯುತ್ತದೆ ಎಂದು ಹೇಳಿದರು.
ಕೇವಲ ಚುನಾವಣಾ ಸಂದರ್ಭದಲ್ಲಿ ಜನರ ಬಳಿ ಹೋಗಿ ಅವರಿಗೆ ಭರವಸೆಗಳನ್ನ ನೀಡಿ ಅವರಿಂದ ಮತ ಪಡೆದು ಅಧಿಕಾರದ ಗದ್ದುಗೆ ಏರಿದ ನಂತರ ಮತ್ತೆ ಜನರತ್ತ ತಿರುಗಿ ನೋಡದೆ ಇರುವುದು ಜನ ನಾಯಕನ ಲಕ್ಷಣವಲ್ಲ. ಸದಾ ಕಾಲ ಜನರ ಕಷ್ಟ ಸುಖಗಳಿಗೆ ಸ್ಪಂದಿಸಿ ಅವರ ನಡುವೆ ಇದ್ದು ಕೆಲಸ ಮಾಡುವವನೇ ನಿಜವಾದ ಜನ ನಾಯಕ ಎಂದರು. ನಾನು ಚುನಾವಣಾ ಸಂದರ್ಭದಲ್ಲಿ ಜನತೆಗೆ ನೀಡಿದ ಭರವಸೆಯಂತೆ ನಾನು ನಡೆದುಕೊಳ್ಳುತ್ತಿದ್ದೇನೆ ಎಂದರು.
ತಿ.ನರಸೀಪುರ ತಾಲೂಕು ಕಚೇರಿ ಬಳಿ ಬಿಪಿಎಲ್ ಕಾರ್ಡ್ ಇಲ್ಲದ ವರುಣಾ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ನಿವಾಸಿಗಳು, ಮಂಗಳ ಮುಖಿಯರು ಅಲ್ಲದೆ ಇವರ ಜೊತೆಗೆ ಅಂತರ ರಾಜ್ಯದಿಂದ ಕಬ್ಬು ಕಟಾವು ಮಾಡಲು ಬಂದು ನಿರಾಶ್ರಿತರಾಗಿರುವವರು ಸೇರಿದಂತೆ ಸುಮಾರು 200 ಕುಟುಂಬಗಳಿಗೆ ಆಹಾರ ಪದಾರ್ಥಗಳನ್ನು ವಿತರಿಸಿದರು.