ಅಂಬರೀಶ್ ರ ಊಟ-ತಿಂಡಿ, ಸರಳತೆಯನ್ನು ಮನಸಾರೆ ನೆನೆವ ಹೋಟೆಲ್ ಮಾಲೀಕರು
ಮೈಸೂರು, ನವೆಂಬರ್ 25 : "ಖಾರ ಜಾಸ್ತಿ ಹಾಕೋ, ಮಟನ್ ಚೆನ್ನಾಗಿ ಫ್ರೈ ಮಾಡಿ ಬಿರಿಯಾನಿಗೆ ಹಾಕೋ ಯಶು ಎಂದು ಏಕವಚನದಲ್ಲೇ ನನಗೆ ಅಂಬಿ ಹೇಳ್ತಿದ್ದರು ಮೇಡಂ. ಆದರೆ ಅವರು ಇನ್ನಿಲ್ಲ ಅಂದರೆ ನನಗೆ ನಂಬಲಸಾಧ್ಯ. ಇಂದು ನನಗೆ ಅಂಗಡಿ ತೆರಯಲು ಸಹ ಮನಸ್ಸಾಗುತ್ತಿಲ್ಲ" ಎಂದು ದುಃಖತಪ್ತರಾಗಿ ಗದ್ಗದಿತರಾಗುತ್ತಾರೆ ಮೈಸೂರಿನ ಹನುಮಂತು ಹೋಟೆಲ್ ನ ಯಶು ಗೌಡ.
ನಮ್ಮ ಹೋಟೆಲ್ ಗೆ ಅಂಬಿ ಅಣ್ಣ ನಮ್ಮ ಮುತ್ತಾತನ ಕಾಲದಿಂದಲೂ ಬರುತ್ತಿದ್ದಾರೆ. ನಮ್ಮದು 4ನೇ ತಲೆಮಾರು. ನಮ್ಮ ಮುತ್ತಾತನಿಗೂ ಹೆಸರಿಟ್ಟು ಕರೆದು, ಭೇಷ್ ಎಂದು ಕರೆಯುತ್ತಿದ್ದ ವ್ಯಕ್ತಿತ್ವ ಅವರದ್ದು. ನಮ್ಮ ಹೋಟೆಲ್ ನಲ್ಲಿ ಅವರಿಗೆ ಮಟನ್ ಬಿರಿಯಾನಿ, ಚಿಲ್ಲಿ ಚಿಕನ್ ಬಲು ಇಷ್ಟ. ಒಮ್ಮೆ ಅವರು ಬಂದರೆ ಎರಡು ಪ್ಲೇಟ್ ನಷ್ಟು ತಿಂದೇ ಹೋಗುತ್ತಿದ್ದರು ಎನ್ನುತ್ತಾರೆ.
ಸಂದೇಶ್ ದಿ ಪ್ರಿನ್ಸ್ ಹೋಟೆಲ್ ನಂಬರ್ 1032 ರೂಮ್ ನ ಕಾಯಂ ಅತಿಥಿ ಅಂಬಿ
ಮೈಸೂರಿಗೆ ಬಂದಾಗ ಅವರು ಉಳಿದುಕೊಳ್ಳುತ್ತಿದ್ದ ಹೋಟೆಲ್ ಸಂದೇಶ್ ಪ್ರಿನ್ಸ್ ನಲ್ಲಿ ನಮ್ಮನ್ನು ಕರೆದು, ಪಾರ್ಸೆಲ್ ತರುವಂತೆ ಫೋನ್ ಮಾಡಿ ಹೇಳುತ್ತಿದ್ದರು. ಅಷ್ಟೇ ಅಲ್ಲ, ಬೆಂಗಳೂರಿಗೆ ಹೋದಾಗಲು ಸಹ ಬಿರಿಯಾನಿ ತೆಗೆದುಕೊಂಡು ಹೋಗುತ್ತಿದ್ದೆ. ನೀನು ತಾತನ ಹಾಗೆ ಮಾಡುತ್ತೀಯಾ ಕಣ್ಲಾ ಎಂದು ಬೆನ್ನು ತಟ್ಟುತ್ತಿದ್ದರು.
20 ದಿನಗಳ ಹಿಂದೆಯಷ್ಟೇ ಹೋಟೆಲ್ ಗೆ ಬಂದಿದ್ದರು
ನಮ್ಮ ಹೋಟೆಲ್ ಗೆ ಬಂದಾಗಲೆಲ್ಲಾ ತಾವೊಬ್ಬ ಸೆಲಿಬ್ರಿಟಿ ಎಂದು ಯಾವ ಹಮ್ಮು ಸಹ ತೋರಿಸುತ್ತಿರಲಿಲ್ಲ. ರಸ್ತೆ ಗಲ್ಲಿಯಲ್ಲಿದ್ದ ತಳ್ಳು ಗಾಡಿಯಲ್ಲಿಯೂ ತಿನ್ನುತ್ತಿದ್ದರು. ನಮ್ಮ ಹೋಟೆಲ್ ಗೆ ಬಂದಾಗ ಕಸ್ಟಮರ್ ಗಳೊಂದಿಗೆಯೇ ತಿನ್ನುತ್ತಿದ್ದರು. ಅವರೊಟ್ಟಿಗೆ ಫೋಟೋಗೆ ಪೋಸ್ ಸಹ ಕೊಡುತ್ತಿದ್ದರು. 15 - 20 ದಿನಗಳ ಹಿಂದೆಯಷ್ಟೇ ನಮ್ಮ ಹೋಟೆಲ್ ಗೆ ಖುಷಿಯಾಗೇ ಬಂದು, ತಿಂದು ಹೋಗಿದ್ದರು. ಆದರೆ ಇಂದು ಅವರಿಲ್ಲ ಎಂಬುದು ನಂಬಲಸಾಧ್ಯ ಎಂದು ಅಂಬಿಯವರೊಂದಿಗಿನ ಬಾಂಧವ್ಯವನ್ನು ನೆನಪಿಸಿಕೊಳ್ಳುತ್ತಾರೆ.
ಮೈಲಾರಿ ಹೋಟೆಲ್ ನಲ್ಲಿ ನಾಲ್ಕೈದು ಪ್ಲೇಟ್ ದೋಸೆ ತಿನ್ನುತ್ತಿದ್ದರು
ಮೈಸೂರಿನ ಮತ್ತೊಂದು ಪ್ರಸಿದ್ಧವಾದ ಹೋಟೆಲ್ ಮೈಲಾರಿ. ಒಮ್ಮೆ ನಮ್ಮ ಹೋಟೆಲ್ ಗೆ ಅಂಬರೀಶ್ ಬಂದರೆ 4 - 5 ಪ್ಲೇಟ್ ದೋಸೆ ತಿನ್ನುತ್ತಿದ್ದರು. ಅವರಿಗೆ ಸಾಮಾನ್ಯವಾಗಿ ದೋಸೆ ಮಾಡಿದರೆ ಆಗುತ್ತಿರಲಿಲ್ಲ. ಬೆಣ್ಣೆ ಜಾಸ್ತಿ ಹಾಕಿ, ಸಾಗು ಹೆಚ್ಚು ಹಾಕಿ, ರೋಸ್ಟ್ ಮಾಡಿರುವ ದೋಸೆಯೇ ಬೇಕಿತ್ತು. ಅವರೇ ಎದುರು ನಿಂತು ದೋಸೆ ಮಾಡಿಸುತ್ತಿದ್ದದ್ದು ನೆನಪಿದೆ ಎನ್ನುತ್ತಾರೆ ಮೈಲಾರಿ ದೋಸೆ ಹೋಟೆಲ್ ನ ರಾಜಶೇಖರ್.
'ಮಂಡ್ಯದ ಗಂಡೇ' ಆದರೂ ಅಂಬರೀಶ್ 'ಮೈಸೂರು ಜಾಣ'.! ಹೇಗೆ ಅಂತೀರಾ.?
ಗಟ್ಟಿ ಚಟ್ನಿ ಅವರ ಫೇವರಿಟ್
ಇನ್ನಷ್ಟು ಮಾತು ಸೇರಿಸುತ್ತಾ, ನಮ್ಮ ಹೋಟೆಲ್ ಗೆ ಬಾರದೆ 2 ವರ್ಷಗಳು ಕಳೆದಿವೆ. ಆದರೆ ಮೈಸೂರಿಗೆ ಬಂದಾಗ ಕರೆ ಮಾಡಿ, 20 ದೋಸೆ ಪಾರ್ಸೆಲ್ ಬೇಕಪ್ಪ ಎಂದು ಕೇಳುತ್ತಿದ್ದರು. ನಮ್ಮ ಹೋಟೆಲ್ ಗಟ್ಟಿ ಚಟ್ನಿ ಅವರ ಫೇವರಿಟ್ ಎಂದು ಅಂಬರೀಶ್ ಅವರ ಫುಡ್ ಸ್ಟೈಲ್ ಅನ್ನು ನೆನಪಿಸಿಕೊಂಡರು.
ಅಂದು 'ಜಲೀಲ' ಬರೆದಿದ್ದು ವಿದಾಯದ ಪತ್ರವೇ?
ದಾಸ್ ಪ್ರಕಾಶ್ ಹೋಟೆಲ್ ನ ಬಾದಾಮಿ ಹಲ್ವಾ ಬಹಳ ಇಷ್ಟ
ಅಂಬರೀಶ್ ರ ಊಟ-ತಿಂಡಿಯ ಪ್ರೀತಿ ಇಷ್ಟಕ್ಕೇ ನಿಲ್ಲುವುದಿಲ್ಲ. ಮಂಡ್ಯದ ಗಂಡು ಅಂಬಿ ಮೈಸೂರಿನ ದಾಸಪ್ರಕಾಶ್ ಹೋಟೆಲ್ ಗೂ ಭೇಟಿ ನೀಡಿ, ಅಲ್ಲಿನ ಬಾದಾಮಿ ಹಲ್ವಾ ಸಹ ಸವಿಯುತ್ತಿದ್ದರು. ಬಹಳ ಆಸಕ್ತಿಕರ ವಿಚಾರ ಏನೆಂದರೆ, ಕೆಲವು ಬಾರಿ ಮೈಸೂರಿಗೆ ಅಂಬಿ ಬರುತ್ತಿದ್ದುದೇ ತಿಂಡಿ- ಊಟ ಮಾಡುವುದಕ್ಕೆ ಎಂದು ಅನಿಸುತ್ತಿತ್ತು.