ಮೈಸೂರಿನಲ್ಲಿ ಬೀದಿ ನಾಯಿಗಳಿಗೆ ಆಹಾರ ವ್ಯವಸ್ಥೆ
ಮೈಸೂರು, ಏಪ್ರಿಲ್ 12: ಕೊರೊನಾ ವೈರಸ್ ಸೋಂಕಿನಿಂದ ಭಾರತವೇ ಲಾಕ್ ಡೌನ್ ಆಗಿದ್ದು, ಮೈಸೂರು ನಗರದಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಅಪೂರ್ವ ಸ್ನೇಹ ಬಳಗದ ವತಿಯಿಂದ ಮಹಾರಾಜ ಕಾಲೇಜು ಮೈದಾನ, ಯುವರಾಜ ಕಾಲೇಜು, ರಾಮಸ್ವಾಮಿ ವೃತ್ತದ ಸುತ್ತಮುತ್ತಲು ರಸ್ತೆಗಳಲ್ಲಿ ಸಿಗುವ ಮೂಕಪ್ರಾಣಿಗಳಾದ ಬೀದಿ ನಾಯಿಗಳಿಗೆ ಬಿಸ್ಕೆಟ್, ಬನ್, ಹಾಲು, ನೀರು, ಆಹಾರ ನೀಡಲಾಯಿತು.
ಇದೇ ಸಂಧರ್ಭದಲ್ಲಿ ಅಪೂರ್ವ ಸ್ನೇಹ ಬಳಗದ ಅಧ್ಯಕ್ಷರಾದ ಅಪೂರ್ವ ಸುರೇಶ್ ರವರು ಮಾತನಾಡಿ, ""ಮನುಷ್ಯರು ಅವರವರನ್ನು ಕಾಪಾಡಿಕೊಳ್ಳುವಲ್ಲಿ, ಪ್ರಾಣ ಉಳಿಸುಕೊಳ್ಳುವಲ್ಲಿ ಮುಂದಾಗುತ್ತೇವೆ. ಅನ್ನದಾನ, ದಿನಸಿ ವಿತರಣೆ ಮಾಡುತ್ತಿದ್ದೇವೆ ಇದು ಒಳ್ಳೆಯ ಬೆಳವಣಿಗೆ, ಆದರೆ ಇದರ ಜೊತೆಯಲ್ಲಿ ಮೂಕ ಪ್ರಾಣಿ ಪಕ್ಷಿಗಳನ್ನ ಕಾಪಾಡುವುದನ್ನು ನಾವು ಮರೆಯಬಾರದು'' ಎಂದು ಹೇಳಿದರು.
""ನಮ್ಮ ಬೀದಿಯಲ್ಲಿ ಸಿಗುವ ನಾಯಿಗಳಿಗೆ ಮತ್ತು ದನ ಕರುಗಳಿಗೆ ಕನಿಷ್ಠ ಒಂದೊತ್ತಾದರೂ ಆಹಾರವನ್ನು ನೀಡಲು ಮುಂದಾಗೋಣ, ನಗರ ಪಾಲಿಕೆಯ ಚಿಹ್ನೆ ನಂದಿಯಾಗಿದೆ. ಹಾಗಾಗಿ ಮೊದಲು ಪ್ರಾಣಿ-ಪಕ್ಷಿಗಳ ಪೋಷಣೆಗೆ ಗಮನ ನೀಡಬೇಕಾಗಿದೆ'' ಎಂದರು.
ನಗರಪಾಲಿಕೆ ವಾರ್ಡ್ ವ್ಯಾಪ್ತಿಯಲ್ಲಿ ಪ್ರಾಣಿ-ಪಕ್ಷಿಗಳ ರಕ್ಷಣೆ ಮತ್ತು ಆಹಾರ ಪೊರೈಕೆ ಮಾಡಲು ಸಾಮಾಜಿಕ ಸಂಘ ಸಂಸ್ಥೆಗಳನ್ನು ಬಳಸಿಕೊಂಡು ಅನಿಮಲ್ಸ್ ಪ್ರೊಟೆಕ್ಷನ್ ಟಾಸ್ಕ್ ಪೋರ್ಸ್ ರಚಿಸಲು ಯೋಜನೆ ರೂಪಿಸಬೇಕು ಎಂದು ಮನವಿ ಮಾಡಿದರು.
ಅಪೂರ್ವ ಸ್ನೇಹ ಬಳಗದ ಅಧ್ಯಕ್ಷರಾದ ಅಪೂರ್ವ ಸುರೇಶ್, ಕೃಷ್ಣರಾಜೇಂದ್ರ ಸಹಕಾರ ಬ್ಯಾಂಕ್ ಉಪಾಧ್ಯಕ್ಷ ಬಸವರಾಜು ಬಸಪ್ಪ, ಸಮಾಜಸೇವಕ ವಿಕ್ರಂ ಅಯ್ಯಂಗಾರ್, ಯುವ ಮುಖಂಡ ಅಜಯ್ ಶಾಸ್ತ್ರಿ ಮುಂತಾದವರು ಇದ್ದರು.