ಮೈಸೂರಿನಲ್ಲಿ ಬೀಡಾಡಿ ದನಗಳ ಹಸಿವು ನೀಗಿಸುವ ಕಾರ್ಯ
ಮೈಸೂರು, ಏಪ್ರಿಲ್ 07: ಲಾಕ್ ಡೌನ್ ಹಿನ್ನೆಲೆಯಲ್ಲಿ ಮೈಸೂರು ನಗರದಾದ್ಯಂತ ಅಡ್ಡಾಡುವ ಬೀದಿ ದನಗಳು ಮೇವಿಲ್ಲದೆ ಪರದಾಡುತ್ತಿವೆ. ಅಂಗಡಿ ಮುಂದೆ, ಮಾರುಕಟ್ಟೆಯ ವರ್ತಕರು ನೀಡುತ್ತಿದ್ದ ಮೇವನ್ನು ಸೇವಿಸಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ದನಗಳು ಈಗ ಅಂಗಡಿ ಮುಂಗಟ್ಟುಗಳು ಬಂದ್ ಆಗಿರುವ ಹಿನ್ನಲೆಯಲ್ಲಿ ಹಸಿವಿನಿಂದ ಕಂಗಾಲಾಗಿವೆ.
ಕೆಲವು ದನಗಳ ಮಾಲೀಕರು ಕೇವಲ ಹಾಲು ಕರೆಯುವ ಹಸುಗಳ ಬಗ್ಗೆ ಕಾಳಜಿ ವಹಿಸುತ್ತಿದ್ದು, ಹಾಲು ನೀಡದ ಹಸು ಮತ್ತು ಎತ್ತುಗಳ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಇಂತಹ ದನಗಳು ಗಲ್ಲಿ ಗಲ್ಲಿ ಅಲೆಯುತ್ತಾ, ಅಂಗಡಿ, ಹೋಟೆಲ್ ಮುಂದೆ ನಿಲ್ಲುತ್ತಾ ಅವರು ನೀಡಿದ್ದನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತವೆ. ಆದರೆ ಈಗ ಜನರೇ ಮನೆಯಿಂದ ಆಚೆ ಬರುವುದು ಕಡಿಮೆ. ಜತೆಗೆ ಅಂಗಡಿ, ಹೋಟೆಲ್ ಯಾವುದೂ ತೆರೆಯದ ಕಾರಣದಿಂದಾಗಿ ದನಗಳಿಗೆ ಆಹಾರ ನೀಡುವವರೇ ಇಲ್ಲವಾಗಿದ್ದಾರೆ.
ಪ್ರಾಣಿ ಪಕ್ಷಿಗಳಿಗೆ ನೀರು-ಮೇವಿಡುವುದರಲ್ಲಿ ತೃಪ್ತಿ ಕಾಣುವ ಹಲಗೂರಿನ ಪಿಡಿಒ
ದನಗಳ ಸಂಕಷ್ಟವನ್ನು ಅರಿತ ಶ್ರೀ ರಾಮಚಂದ್ರಾಪುರ ಮಠದ ಭಾರತೀಯ ಗೋಪರಿವಾರ ಹಾಗೂ ಅಪೂರ್ವ ಸ್ನೇಹ ಬಳಗದ ಸಹಯೋಗದೊಂದಿಗೆ ನಗರದ ಚಾಮುಂಡಿಪುರಂ, ನಂಜುಮಳಿಗೆ, ಅಗ್ರಹಾರದ ಸುತ್ತಮುತ್ತಲಿನ ಹಸುಗಳಿಗೆ ಜೋಳದ ತೆನೆ, ಹುಲ್ಲು ಹಾಕಿ ಅವುಗಳ ಹಸಿವು ನೀಗಿಸುವ ಕಾರ್ಯಕ್ಕೆ ಮುಂದಾಗಿರುವುದು ಕಂಡು ಬರುತ್ತಿದೆ. ಇದರ ಜೊತೆಗೆ ಪ್ರವಾಸಿಗರಿಲ್ಲದೆ ಟಾಂಗಾ ಗಾಡಿಗಳ ಮಾಲೀಕರು ಸಂಕಷ್ಟಕ್ಕೀಡಾಗಿದ್ದಾರೆ. ತಮ್ಮ ಕುದುರೆಗಳಿಗೆ ಹಸಿ ಹುಲ್ಲು ಸೇರಿದಂತೆ ಮೇವು ನೀಡಲು ಸಾಧ್ಯವಾಗದ ಸ್ಥಿತಿಯಲ್ಲಿರುವುದರಿಂದ ಅಂತಹ ಸ್ಥಳಗಳಿಗೆ ತೆರಳಿ ಕುದುರೆಗಳಿಗೆ ಮೇವು ನೀಡುವ ಕಾರ್ಯವನ್ನು ಮಾಡಲಾಗುತ್ತಿದೆ.
"ಸರ್ಕಾರ ಹಾಗೂ ಸಂಘ-ಸಂಸ್ಥೆಗಳು ಮನುಷ್ಯರ ಹಸಿವನ್ನು ನೀಗಿಸಲು ಶ್ರಮಿಸುತ್ತಿವೆ. ಈ ನಡುವೆ ತರಕಾರಿ ಮಾರುಕಟ್ಟೆ, ಹೋಟೆಲ್, ಮದುವೆ ಮಂಟಪ ಸೇರಿದಂತೆ ಹಲವು ಜಾಗಗಳು ಬಂದ್ ಆಗಿರುವುದರಿಂದ ಬೀಡಾಡಿ ದನಗಳು ಮೇವಿನ ಕೊರತೆ ಎದುರಿಸುತ್ತಿವೆ. ಮೇವು ಸಾಗಾಟವೂ ಎಂದಿನಂತಿಲ್ಲ. ಜತೆಗೆ ರೈತರ ಬೆಳೆಯ ಕಟಾವು, ಸಾಗಾಟ ಮತ್ತು ಮಾರಾಟ ಎಲ್ಲವೂ ಸಮರ್ಪಕವಾಗಿ ನಡೆಯುತ್ತಿಲ್ಲ.
ಹೀಗಾಗಿ ರೈತರಿಗೂ ಅನುಕೂಲವಾಗಲೆಂಬ ಸದಾಶಯದಿಂದ ಅವರಿಂದಲೇ ಮೇವು ಖರೀದಿಸಿ ದನಗಳು ಹೆಚ್ಚಿರುವ ಜಾಗಗಳನ್ನು ಗುರುತಿಸಿ ಅಲ್ಲಿ ಮೇವನ್ನು ಹಾಕುವ ಕೆಲಸ ಮಾಡಲಾಗುತ್ತಿದೆ. ಜತೆಗೆ ಹಸುಗಳ ಮಾಲೀಕರಿಗೆ ಮೇವು ವಿತರಣೆ ಮಾಡಲಾಗುತ್ತಿದೆ. ಇನ್ನು ನಗರದ ಮಾಧವರಾವ್ ವೃತ್ತದಲ್ಲಿನ ಟಾಂಗಾ ನಿಲ್ದಾಣಕ್ಕೂ ಭೇಟಿ ನೀಡಿ ಅಲ್ಲಿನ ಕುದುರೆಗಳಿಗೂ ಮೇವಿನ ವ್ಯವಸ್ಥೆ ಮಾಡಲಾಗಿದೆ" ಎಂದು ನಗರಪಾಲಿಕೆ ಸದಸ್ಯರಾದ ಮಾ.ವಿ.ರಾಂಪ್ರಸಾದ್ ಹೇಳಿದ್ದಾರೆ.