ವೈನಾಡು ಮತ್ತು ಕೊಡಗಿನಲ್ಲಿ ಮಳೆಯ ರುದ್ರನರ್ತನ: ನಂಜನಗೂಡಿನಲ್ಲಿ ಪ್ರವಾಹ ಭೀತಿ
ಮೈಸೂರು, ಜುಲೈ 24: ರಾಜ್ಯದ ಮಲೆನಾಡು, ಕರಾವಳಿ ಮತ್ತು ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆ ಬಹುತೇಕ ಕಡೆಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ.
ಈ ನಡುವೆ ಕೇರಳದ ವೈನಾಡು ಮತ್ತು ಕೊಡಗು ವ್ಯಾಪ್ತಿಯಲ್ಲೂ ವರುಣನ ಅಬ್ಬರ ಹೆಚ್ಚಾಗಿರುವ ಪರಿಣಾಮವಾಗಿ ಮೈಸೂರು ಜಿಲ್ಲೆಯ ನಂಜನಗೂಡಿನಲ್ಲೂ ಪ್ರವಾಹದ ಭೀತಿ ಜನರನ್ನು ಆತಂಕಕ್ಕೀಡು ಮಾಡಿದೆ.
ಮಳೆ ಆರ್ಭಟಕ್ಕೆ ಕೆರೆಯಂತಾದ ನವುಲೆ ಕ್ರಿಕೆಟ್ ಸ್ಟೇಡಿಯಂ
ಮಳೆಯ ಆರ್ಭಟ ಜೋರಾದ ಪರಿಣಾಮ ಐತಿಹಾಸಿಕ ಪ್ರವಾಸಿ ತಾಣವಾದ ನಂಜನಗೂಡಿನ ಕಪಿಲಾ ನದಿಯಲ್ಲಿ ಒಳಹರಿವು ಹೆಚ್ಚಾಗಿದ್ದು, ಸ್ನಾನಘಟ್ಟದ ಬಳಿಯ ಐತಿಹಾಸಿಕ ಹದಿನಾರು ಕಲ್ಲು ಮಂಟಪ ಹಾಗೂ ಸೋಪಾನ ಕಟ್ಟೆಗಳು ಭಾಗಶಃ ಮುಳುಗಡೆ ಹಂತಕ್ಕೆ ತಲುಪಿವೆ.
ನದಿಯಲ್ಲಿ ಇನ್ನೂ ಪ್ರವಾಹ ಹೆಚ್ಚಾದರೆ ನಂಜನಗೂಡು ದೇವಸ್ಥಾನ ಹಾಗೂ ಅಕ್ಕಪಕ್ಕದ ತಗ್ಗು ಪ್ರದೇಶದಲ್ಲಿ ವಾಸವಾಗಿರುವ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲು ತಾಲ್ಲೂಕು ಆಡಳಿತ ಮುಂದಾಗಿದೆ.
ಕಪಿಲಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗುತ್ತಿರುವುದರಿಂದ ಸ್ನಾನ ಘಟ್ಟದಲ್ಲಿ ಸ್ನಾನ ಮಾಡುವುದನ್ನು ನಿರ್ಬಂಧಿಸಲಾಗಿದೆ. ಶ್ರೀಕಂಠೇಶ್ವರಸ್ವಾಮಿ ದೇವಾಲಯದ ವತಿಯಿಂದ ನಡೆಸಲಾಗುತ್ತಿದ್ದ ಮುಡಿ ಸೇವೆಯನ್ನು ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ.
ನಂಜನಗೂಡು ತಾಲ್ಲೂಕಿನ ಬೊಕ್ಕಹಳ್ಳಿ, ಕುಳ್ಳಂಕನ ಹುಂಡಿ ನಗರದ ಹಳ್ಳದಕೇರಿ, ಕುರಬಗೇರಿ, ಗೌರಿ ಘಟ್ಟ, ತೋಪಿನ ಬೀದಿಯ ತಗ್ಗು ಪ್ರದೇಶಗಳು ಮುಳುಗಡೆಯಾಗುವ ಸಂಭವವಿದೆ.