ಮೈಸೂರು-ಬೆಳಗಾವಿ ಮಧ್ಯೆ ವಿಮಾನ ಹಾರಾಟಕ್ಕೆ ಚಾಲನೆ
ಮೈಸೂರು, ಜನವರು17: ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಮತ್ತೊಂದು ವಿಮಾನ ಹಾರಾಟ ಆರಂಭವಾಗಿದ್ದು, ಮೈಸೂರು ಮತ್ತು ಬೆಳಗಾವಿ ನಡುವಿನ ವಿಮಾನ ಹಾರಾಟಕ್ಕೆ ಇಂದು ಚಾಲನೆ ಸಿಕ್ಕಿದ್ದು, ಮೈಸೂರು ಸಂಸದ ಪ್ರತಾಪ್ ಸಿಂಹ ಅವರ ಪತ್ನಿ ಅರ್ಪಿತಾ ಸಿಂಹ ಮತ್ತು ಬಿಜೆಪಿ ಮುಖಂಡರಾದ ಹೆಚ್.ವಿ.ರಾಜೀವ ಅವರು ಹಸಿರು ನಿಶಾನೆ ತೋರಿದರು.
ಕೆಲವೇ ದಿನಗಳಲ್ಲಿ ಮೈಸೂರು-ಕೊಚ್ಚಿ ವಿಮಾನ ಸೇವೆ ಆರಂಭ
ಇಂದು ಬೆಳಿಗ್ಗೆ 10.30 ಕ್ಕೆ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಬೆಳಗಾವಿಗೆ ಪ್ರಯಾಣ ಆರಂಭಿಸುವ ಟ್ರೂಜೆಟ್ ವಿಮಾನಕ್ಕೆ ಹಸಿರು ನಿಶಾನೆ ತೋರಿಸಲಾಗಿದ್ದು, ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ರಾಜೇಂದ್ರ, ಸೇಫ್ ವ್ಹೀಲ್ ಸ್ಥಾಪಕಾಧ್ಯಕ್ಷ ಪ್ರಶಾಂತ್ ಬಿ.ಎಸ್ ಮೈಸೂರು ವಿಮಾನ ನಿಲ್ದಾಣದ ನಿರ್ದೇಶಕ ಆರ್.ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.
ಬೆಳಗಾವಿಯಿಂದ ಮೈಸೂರಿಗೆ 35 ಜನ ಹಾಗೂ ಮೈಸೂರಿನಿಂದ ಬೆಳಗಾವಿಗೆ 35 ಮಂದಿ ಪ್ರಯಾಣಿಕರು ಈವರೆಗೆ ಟಿಕೆಟ್ ಬುಕ್ ಮಾಡಿದ್ದು, ಈ ವಿಮಾನಕ್ಕೂ ಉತ್ತಮ ಪ್ರತಿಕ್ರಿಯೆ ಬರಲಾರಂಭಿಸಿದೆ ಎಂದು ನಿರ್ದೇಶಕ ಆರ್.ಮಂಜುನಾಥ್ ತಿಳಿಸಿದ್ದಾರೆ.
ಈಗಾಗಲೇ ಮೈಸೂರಿನಿಂದ ಬೆಂಗಳೂರು, ಕಲಬುರ್ಗಿ, ಚೆನ್ನೈ, ಹೈದರಾಬಾದ್ ಹಾಗೂ ಗೋವಾಕ್ಕೆ ನೇರ ವಿಮಾನ ಸಂಪರ್ಕವಿದೆ. ಇದೀಗ ಮತ್ತೊಂದು ಸೇವೆ ಸೇರ್ಪಡೆಯಾಗಿದೆ.