ಕೆ.ಆರ್.ನಗರದಲ್ಲಿ, ಈ ಸಮಯದಲ್ಲಿ ಫ್ಲೆಕ್ಸ್ ರಾಜಕೀಯ?
ಮೈಸೂರು, ಮೇ 04: ಕೊರೊನಾ ಸೋಂಕು ತಡೆಗೆ ಸರ್ಕಾರ ಲಾಕ್ ಡೌನ್ ಮಾಡಿರುವ ಕಾರಣ ಹಲವು ಬಡ ಕುಟುಂಬಗಳು, ನಿರ್ಗತಿಕರು ಸಮಸ್ಯೆ ಎದುರಿಸುತ್ತಿದ್ದು, ಅವರಿಗೆ ಆಹಾರ, ಹಣ್ಣು, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳನ್ನು ವಿತರಿಸುವ ಕಾರ್ಯವನ್ನು ದಾನಿಗಳು ದೇಶದಾದ್ಯಂತ ಮಾಡುತ್ತಿದ್ದಾರೆ.
Recommended Video
ಮೈಸೂರು ಜಿಲ್ಲೆಯಲ್ಲಿ ಹಲವು ರಾಜಕೀಯ ಮುಖಂಡರು, ಸಂಘ ಸಂಸ್ಥೆಗಳು ಕೂಡ ಬಡವರ ನೆರವಿಗೆ ಧಾವಿಸುತ್ತಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ, ಅದರಲ್ಲೂ ಜನಪ್ರತಿನಿಧಿಗಳು ತಮ್ಮ ಕ್ಷೇತ್ರದಲ್ಲಿ ರೈತರ ಬೆಳೆಗಳನ್ನು ಖರೀದಿಸಿ ಬಡವರಿಗೆ ಉಚಿತವಾಗಿ ಹಂಚುತ್ತಿದ್ದಾರೆ. ಕೆಲಸವೇ ಇಲ್ಲದೆ ಮನೆಯಲ್ಲಿ ಕುಳಿತಿರುವ ಕಾರ್ಮಿಕ ಕುಟುಂಬಗಳಿಗೆ, ರೈತರಿಗೆ ಆಹಾರ ಪದಾರ್ಥಗಳನ್ನು ವಿತರಿಸಲಾಗುತ್ತಿದೆ. ಇಲ್ಲಿ ಜನಪ್ರತಿನಿಧಿಗಳು ಕೂಡ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಸಹಾಯ ಮಾಡುತ್ತಿದ್ದಾರೆ. ಕೆಲವರು ತಾವು ವಿತರಣೆ ಮಾಡುವ ಕಾರ್ಯಕ್ರಮವನ್ನು ಪ್ರಚಾರಕ್ಕೆ ಬಳಸಿಕೊಳ್ಳುತ್ತಿರುವುದು ಕೂಡ ಕಂಡುಬರುತ್ತಿದೆ. ಕೆಲವರು ನೀಡುವ ವಸ್ತುಗಳಿಗಿಂತ ಪ್ರಚಾರವೇ ಜಾಸ್ತಿಯಾಗುತ್ತಿರುವುದು ಕೂಡ ಇದೆ. ಅದು ಏನೇ ಇರಲಿ, ಬಡ ಜನತೆಗೆ ಸಹಾಯ ಮಾಡುತ್ತಿರುವುದಕ್ಕೆ ಅವರಿಗೆ ಕೃತಜ್ಞತೆ ಸಲ್ಲಿಸಲೇಬೇಕಾಗಿದೆ.
ಕ್ಷೇತ್ರದ ಜನರಿಗೆ ಸಹಾಯ ಮಾಡುತ್ತಿರುವ ಸಾರಾ ಮಹೇಶ್
ಮೈಸೂರಿನ ಕೆ.ಆರ್.ನಗರ ವಿಧಾನಸಭಾ ಕ್ಷೇತ್ರದಲ್ಲಿ ಆಹಾರ ಧಾನ್ಯದ ವಿತರಣೆ ಮತ್ತು ಅದರ ಬಗೆಗಿನ ಪ್ರಚಾರಕ್ಕೆ ಸಂಬಂಧಿಸಿದಂತೆ ರಾಜಕೀಯ ಜಟಾಪಟಿಗಳು ಆರಂಭವಾಗಿವೆ. ಕೆ.ಆರ್.ನಗರದಲ್ಲಿ ಈ ಹಿಂದಿನಿಂದಲೂ ಕ್ಷೇತ್ರದ ಶಾಸಕರಾಗಿರುವ ಸಾ.ರಾ.ಮಹೇಶ್ ಸಾರ್ವಜನಿಕರಿಗೆ ಸಹಾಯ ಹಸ್ತ ನೀಡುವುದರಲ್ಲಿ ಹಿಂದೆ ಬಿದ್ದಿಲ್ಲ. ತಮ್ಮ ಕ್ಷೇತ್ರದ ಜನತೆಯ ಕಷ್ಟ ಸುಖಗಳಲ್ಲಿ ಭಾಗಿಯಾಗುತ್ತಾ ಅವರ ಬೇಕು ಬೇಡಗಳನ್ನು ಪರಿಹರಿಸುವ ಕಾರ್ಯವನ್ನು ಹಿಂದಿನಿಂದಲೂ ಮಾಡಿಕೊಂಡು ಬಂದಿದ್ದು, ಅದರಿಂದಲೇ ಅವರು ಸತತವಾಗಿ ಗೆಲುವು ಸಾಧಿಸುತ್ತಾ ಬಂದಿದ್ದಾರೆ ಎಂದರೆ ತಪ್ಪಾಗಲಾರದು.
"ನಾನಿಲ್ಲಿ ರಾಜಕಾರಣ ಮಾಡಲು ಬಂದಿಲ್ಲ"; ಸಚಿವ ಸೋಮಶೇಖರ್
ಜಟಾಪಟಿಗೆ ಕಾರಣವಾದ ಪ್ರಚಾರದ ಕ್ರಮ
ಇದೀಗ ಕೊರೊನಾ ಲಾಕ್ ಡೌನ್ ವೇಳೆ ಬಡವರಿಗೆ ವಿತರಿಸಲಾಗುತ್ತಿರುವ ಆಹಾರ ವಿತರಣೆಯ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಚಾರಕ್ಕೆ ಬಳಸಲಾಗುತ್ತಿರುವ ಕ್ರಮವು ಜಟಾಪಟಿಗೆ ಕಾರಣವಾಗಿದೆ. ಕೆ.ಆರ್.ನಗರದಲ್ಲಿ ಶಾಸಕ ಸಾ.ರಾ.ಮಹೇಶ್ ಮತ್ತು ಮಾಜಿ ಶಾಸಕ ಎಚ್.ವಿಶ್ವನಾಥ್ ಅವರದ್ದು ಎಣ್ಣೆ ಸೀಗೆಕಾಯಿ ಸಂಬಂಧ. ಇದು ರಾಜಕೀಯವಾಗಿಯೂ ಬಳಕೆಯಾಗುತ್ತಿದ್ದು, ಕ್ಷೇತ್ರದಲ್ಲಿ ಆಗಾಗ್ಗೆ ಇವರ ನಡುವೆ ಆರೋಪ ಪ್ರತ್ಯಾರೋಪಗಳು ನಡೆಯುತ್ತಲೇ ಇದೆ. ಸದ್ಯ ಶಾಸಕ ಸಾ.ರಾ.ಮಹೇಶ್ ಅವರು ತಮ್ಮ ಕ್ಷೇತ್ರದ ಬಡವರು, ಕಾರ್ಮಿಕರು, ನಿರ್ಗತಿಕರು ಹೀಗೆ ಸುಮಾರು 80 ಸಾವಿರ ಕುಟುಂಬಕ್ಕೆ 5 ಕೋಟಿ ರೂ. ಸ್ವಂತ ಹಣವನ್ನು ಖರ್ಚು ಮಾಡಿ ಆಹಾರ ಪದಾರ್ಥ, ತರಕಾರಿ, ಇನ್ನಿತರ ಅಗತ್ಯ ವಸ್ತುಗಳನ್ನು ನೀಡಿದ್ದಾರೆ ಎನ್ನಲಾಗಿದ್ದು, ಆ ಕುರಿತಂತೆ ಫ್ಲೆಕ್ಸ್ ಗಳನ್ನು ಅವರ ಅಭಿಮಾನಿಗಳು ಭೇರ್ಯ ಎಂಬಲ್ಲಿ ಹಾಕುವ ಮೂಲಕ ಪ್ರಚಾರ ಮಾಡಿದ್ದಾರೆ.
ಎಲ್ಲೆಲ್ಲೂ ರಾರಾಜಿಸುತ್ತಿದ್ದ ಫ್ಲೆಕ್ಸ್ ಗಳು
ಇದು ಸಾ.ರಾ.ಮಹೇಶ್ ಅವರ ಗಮನಕ್ಕೆ ಬಂದಿದೆಯೋ ಗೊತ್ತಿಲ್ಲ. ಆದರೆ ಫ್ಲೆಕ್ಸ್ ಗಳು ಎಲ್ಲೆಲ್ಲೂ ರಾರಾಜಿಸುತ್ತಿದ್ದದ್ದು, ಅವರ ವಿರೋಧಿಗಳ ಕಣ್ಣು ಕೆಂಪಾಗಿಸುವಂತೆ ಮಾಡಿದೆ. ಜತೆಗೆ ಈ ಸಂದರ್ಭದಲ್ಲಿ ಫ್ಲೆಕ್ಸ್ ಹಾಕಿ ಪ್ರಚಾರದ ಅಗತ್ಯವೂ ಇರಲಿಲ್ಲ. ಈ ಬಗ್ಗೆ ದೂರುಗಳು ಬಂದ ಹಿನ್ನಲೆಯಲ್ಲಿ ಇದೀಗ ಫ್ಲೆಕ್ಸ್ಗಳನ್ನು ಅಧಿಕಾರಿಗಳು ತೆರವುಗೊಳಿಸಿದ್ದಾರೆ.
ಮೈಸೂರಿನಲ್ಲಿ ಬರೋಬ್ಬರಿ 107 ಜನರನ್ನು ಸ್ಕ್ರೀನಿಂಗ್ ಮಾಡಲಾಗಿದೆ
ಎಚ್.ವಿಶ್ವನಾಥ್ ಮೇಲೆ ಆರೋಪ
ಈ ಫ್ಲೆಕ್ಸ್ಗಳನ್ನು ತೆರವುಗೊಳಿಸುವಲ್ಲಿ ಮಾಜಿ ಶಾಸಕ ಎಚ್.ವಿಶ್ವನಾಥ್ ಅವರ ಕೈವಾಡವಿದೆ ಎನ್ನುವುದು ಸಾ.ರಾ.ಮಹೇಶ್ ಅಭಿಮಾನಿಗಳ ಆರೋಪವಾಗಿದೆ. ಫ್ಲೆಕ್ಸ್ ತೆರವುಗೊಳಿಸುವ ವಿಚಾರದಲ್ಲಿ ಎಚ್.ವಿಶ್ವನಾಥ್ ಅವರ ಕೈವಾಡ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಅಭಿಮಾನಿಗಳು ಮಾತ್ರ ಆ ಕುರಿತಂತೆ ಆರೋಪ ಮಾಡುತ್ತಿದ್ದಾರೆ. ಈ ಲಾಕ್ ಡೌನ್ ಸಮಯದಲ್ಲಿ ಆಹಾರ ಧಾನ್ಯ ವಿತರಣೆ ಸಂದರ್ಭದಲ್ಲಿ ಗ್ರಾಮಗಳಲ್ಲಿ ಇಂಥ ಸಂಗತಿಗಳು ಅಶಾಂತಿಗೆ ಕಾರಣವಾಗಿರುವುದೂ ಸುಳ್ಳಲ್ಲ.