ಮೈಸೂರಿಗರೇ ಹುಷಾರ್: 12 ಲಕ್ಷ ರೂ. ಮೌಲ್ಯದ ಚಿನ್ನ ದರೋಡೆ ಮಾಡಿದ್ದ 5 ದುಷ್ಕರ್ಮಿಗಳ ಬಂಧನ
ಮೈಸೂರು, ಸೆಪ್ಟೆಂಬರ್ 21: ವೃದ್ಧ ದಂಪತಿಗಳನ್ನು ಹೆದರಿಸಿ ಮನೆ ದರೋಡೆ ಮಾಡಿದ್ದ ಐದು ಮಂದಿಯ ತಂಡದ ಹೆಡೆಮುರಿ ಕಟ್ಟುವಲ್ಲಿ ದೇವರಾಜ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದು, ಬಂಧಿತರಿಂದ 12 ಲಕ್ಷ ರುಪಾಯಿ ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತರನ್ನು ಸಾತಗಳ್ಳಿ ಬಸ್ ಡಿಪೋ ಹಿಂಬದಿ ನಿವಾಸಿ ಆಟೋ ಚಾಲಕ ಜಬೀವುಲ್ಲಾ (27), ಉದಯಗಿರಿ ನಿವಾಸಿ, ಬಟ್ಟೆ ವ್ಯಾಪಾರಿ ಇಬ್ರಾಹಿಂ (24), ಗೌಸಿಯಾ ನಗರ ನಿವಾಸಿ ಬಟ್ಟೆ ವ್ಯಾಪಾರಿ ಖಾಸಿಫ್ ಬಿನ್ ಅನ್ವರ್ ಪಾಷಾ (22), ಹಾಸನ ಜಿಲ್ಲೆ ಗುಡ್ಡಯ್ಯನಹಳ್ಳಿ ಕೊಪ್ಪಲು ಗ್ರಾಮದ ನಿವಾಸಿ, ಚಾಲಕ ವೃತ್ತಿಯಲ್ಲಿರುವ ಗಿರಿ, ಬೋವಿ ಪಾಳ್ಯ ನಿವಾಸಿ ಗವೀಗೌಡ ಅಲಿಯಾಸ್ ಸುರೇಶ್ ಬಿನ್ ರಂಗೇಗೌಡ (42), ಹುಣಸೂರು ತಾಲೂಕು ನಿವಾಸಿ, ಹಾಲಿ ಮೈಸೂರು ವಿವೇಕಾನಂದ ನಗರ ನಿವಾಸಿ ಬ್ರೋಕರ್ ಕೆಲಸ ಮಾಡುವ ಗಿರೀಶ್ ಬಿ.ಎಸ್, (52) ಎಂದು ಗುರುತಿಸಲಾಗಿದ್ದು, ಈ ತಂಡವು ವೃದ್ಧರು ವಾಸಿಸುವ ಮನೆಗಳನ್ನೇ ಗುರುತಿಸಿ ದರೋಡೆಯಲ್ಲಿ ತೊಡಗಿತ್ತು ಎನ್ನಲಾಗಿದೆ.
ಮೈಸೂರಿನಲ್ಲಿ ನಿವೃತ್ತ ಪ್ರಾಂಶುಪಾಲರ ಕೊಲೆ
ಚಿನ್ನಾಭರಣ, ಗೃಹ ಬಳಕೆ ವಸ್ತುಗಳನ್ನು ಲೂಟಿ ಮಾಡಿದ್ದರು
ಕಳೆದ ಆಗಸ್ಟ್ 29 ರಂದು ಮೈಸೂರಿನ ಮನೆಯೊಂದರಲ್ಲಿ ವಯಸ್ಸಾದ ದಂಪತಿಯನ್ನು ಹೆದರಿಸಿ ದರೋಡೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಆರೋಪಿ ಗಿರೀಶ್ ತಮ್ಮ ಪಕ್ಕದ ಮನೆಯಲ್ಲಿ ವೃದ್ಧ ದಂಪತಿಗಳು ಮಾತ್ರ ಇದ್ದು, ಬೇರೆ ಯಾರೂ ಇರಲ್ಲ ಎಂದು ಜಬೀವುಲ್ಲಾ, ಸಜ್ಜಾದ್, ಖಾಸಿಫ್ ಗೆ ತಿಳಿಸಿದ್ದ ಮೇರೆಗೆ ಆರೋಪಿಗಳ ತಂಡ ಚಿನ್ನಾಭರಣ, ಗೃಹ ಬಳಕೆ ವಸ್ತುಗಳನ್ನು ಲೂಟಿ ಮಾಡಿತ್ತು.
ಚಿನ್ನದ ಅಂಗಡಿಯಲ್ಲಿ ಮಾರಾಟ ಮಾಡಲು ಪ್ರಯತ್ನ
ಸೆ.17 ರಂದು ಪಿಎಸ್ಐ ಎಸ್.ರಾಜು ಅವರು ಗರುಡಾ ವಾಹನದಲ್ಲಿ ಗಸ್ತಿನಲ್ಲಿದ್ದಾಗ ಸಂಜೆ 4 ಗಂಟೆಯ ವೇಳೆ ಯಾರೋ ಐದು ಮಂದಿ ಆಟೋದಲ್ಲಿ ಬಂದು ವಿನೋಬ ರಸ್ತೆಯ ಶಿವಾಯ ನಮಃ ಮಠ ರಸ್ತೆಯಲ್ಲಿ ಒಂದು ಚಿನ್ನದ ಚೈನ್ ಮಾರಾಟ ಮಾಡಲು ಪ್ರಯತ್ನಿಸುತಿರುವುದಾಗಿ ಮಾಹಿತಿ ಸಿಕ್ಕಿದ್ದು, ಪಿಎಸ್ಐ ರಾಜು ಅವರು ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಇಬ್ಬರು ಚಿನ್ನದ ಅಂಗಡಿಯಲ್ಲಿ ಮಾರಾಟ ಮಾಡಲು ಪ್ರಯತ್ನಿಸುತ್ತಿರುವುದು ಕಂಡು ಬಂದಿತ್ತು.
ದರೋಡೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ
ಮತ್ತೆ ಮೂರು ಮಂದಿ ಆಟೋ ಬಳಿ ನಿಂತಿದ್ದರು. ಇವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿ, ಜಜೀ ಎಂಬುವವನ ಬಳಿ ಎರಡು ಎಳೆಯ ಮಾಂಗಲ್ಯ ಸರ ಇರುವುದು ಕಂಡು ಬಂದಿತ್ತು. ವಿಚಾರಣೆಯಲ್ಲಿ ಸರಿಯಾಗಿ ಮಾಹಿತಿ ನೀಡಲಿಲ್ಲ. ಠಾಣೆಗೆ ಕರೆತಂದು ವಿಚಾರಿಸಲಾಗಿ ಹದಿನೈದು ದಿನಗಳ ಹಿಂದೆ ಮೈಸೂರಿನ ಮನೆಯೊಂದರಲ್ಲಿ ಇದ್ದ ವಯಸ್ಸಾದ ದಂಪತಿಯನ್ನು ಹೆದರಿಸಿ ದರೋಡೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.
ಇನ್ಸ್ ಪೆಕ್ಟರ್ ಪ್ರಸನ್ನ ಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ
ಬಂಧಿತರಿಂದ ಚಿನ್ನಾಭರಣ, ಟಿವಿ, ಫ್ರಿಡ್ಜ್, ಮಂಚ, ಸೋಪಾ, ವಾಶಿಂಗ್ ಮಿಷನ್ ವಶಕ್ಕೆ ಪಡೆದಿದ್ದಾರೆ. ಸರಗಳ್ಳರ ಪತ್ತೆ ಕಾರ್ಯವನ್ನು ಡಿಸಿಪಿ ಡಾ.ಎ.ಎನ್ ಪ್ರಕಾಶ್ ಗೌಡ ಮತ್ತು ಗೀತಾ ಪ್ರಸನ್ನ ಮಾರ್ಗದರ್ಶನದಲ್ಲಿ ದೇವರಾಜ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಪ್ರಸನ್ನ ಕುಮಾರ್ ನೇತೃತ್ವದಲ್ಲಿ ಪಿಎಸ್ಐ ರಾಜು ಮತ್ತು ಸಿಬ್ಬಂದಿಗಳು ಈ ಕಾರ್ಯ ಮಾಡಿದ್ದಾರೆ.