ಸರಳ ದಸರಾಗೆ ಅರಣ್ಯ ಇಲಾಖೆಯಿಂದ ಐದು ಆನೆಗಳ ಪಟ್ಟಿ ಸಿದ್ಧ, ಮಾಹಿತಿ ಇಲ್ಲಿದೆ!
ಮೈಸೂರು, ಸೆಪ್ಟೆಂಬರ್ 11: ನಾಡಹಬ್ಬ ಮೈಸೂರು ದಸರಾವನ್ನು ಈ ಬಾರಿ ಅತ್ಯಂತ ಸರಳದಿಂದ, ಅರಮನೆಗೆ ಸೀಮಿತವಾಗಿ ಆಚರಿಸಲು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನೇತೃತ್ವದ ಉನ್ನತ ಮಟ್ಟದ ಸಮಿತಿಯು ತೀರ್ಮಾನಿಸಿದೆ.
ಅಲ್ಲದೆ ದಸರಾದಲ್ಲಿ ಭಾಗವಹಿಸುವ ಆನೆಗಳ ಸಂಖ್ಯೆಯನ್ನೂ 5ಕ್ಕೆ ಮಿತಿಗೊಳಿಸಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಐದು ಆನೆಗಳ ಪಟ್ಟಿಯನ್ನು ಸಿದ್ಧಪಡಿಸಿದ್ದಾರೆ. ಅರ್ಜುನನಿಗೆ 60 ವರ್ಷ ಮೀರಿರುವ ಹಿನ್ನೆಲೆಯಲ್ಲಿ ಈ ಬಾರಿ ಅಭಿಮನ್ಯು ಆನೆ ಅಂಬಾರಿ ಹೊರುವುದು ಬಹುತೇಕ ಖಚಿತವಾಗಿದೆ.
ಸಾಂಸ್ಕೃತಿಕ ನಗರಿಗೆ ಹೆಚ್ಚಾದ ಪ್ರವಾಸಿಗರು; ಪುಟಿದೆದ್ದ ಪ್ರವಾಸೋದ್ಯಮ
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಸಿ ಅಲೆಗ್ಸಾಂಡರ್ ಅವರು, ದಸರಾ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ವತಿಯಿಂದ ಈಗಾಗಲೇ ಆನೆಗಳ ಆಯ್ಕೆ ಪ್ರಕ್ರಿಯೆ ಆರಂಭಿಸಲಾಗಿದ್ದು, ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲಿರುವ ಆನೆಗಳ ತಾತ್ಕಾಲಿಕ ಪಟ್ಟಿಯನ್ನು ತಯಾರಿಸಿ ಸರ್ಕಾರಕ್ಕೆ ಕಳುಹಿಸಲಾಗಿದೆ. ಈ ಪಟ್ಟಿಯಲ್ಲಿ ಅಭಿಮನ್ಯು, ವಿಕ್ರಮ, ಗೋಪಿ, ಕಾವೇರಿ ಹಾಗೂ ವಿಜಯ ಆನೆಗಳ ಹೆಸರನ್ನು ಸಹ ಸೂಚಿಸಲಾಗಿದೆ ಎಂದರು.
ನೂರಾರು ವರ್ಷದ ಇತಿಹಾಸವಿರುವ ದಸರಾ ಮಹೋತ್ಸವದಲ್ಲಿ ಹಲವು ಆನೆಗಳನ್ನು ಅಂಬಾರಿ ಹೊರಲು ಬಳಸಲಾಗಿದೆ. ಹೀಗಾಗಿ ನಮಗೆ ದಸರೆಯಲ್ಲಿ ಅಂಬಾರಿ ಹೊರಲು ಆನೆ ಬೇಕಿದೆಯೇ ಹೊರತು, ಯಾವ ಆನೆ ಎಂಬುದು ಮುಖ್ಯವಲ್ಲ. ಎಲ್ಲಕ್ಕಿಂತ ಕಾನೂನು ಮುಖ್ಯವಾಗಿದ್ದು, ನಾವು ಕಾನೂನು ಪಾಲಿಸಬೇಕಿದೆ.
ಈ ಬಾರಿಯ ಸರಳ ದಸರಾ ಆಚರಣೆ ಅರಮನೆಗೆ ಮಾತ್ರ ಸೀಮಿತ: ಏನಿರುತ್ತೆ? ಏನಿರಲ್ಲ?
ಈ ಹಿನ್ನೆಲೆಯಲ್ಲಿ ಅಭಿಮನ್ಯು ಹೆಸರು ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದ ಅವರು, ಒಂದು ವೇಳೆ ಕೊನೆಯ ಕ್ಷಣದಲ್ಲಿ ಬದಲಾವಣೆ ಆಗಲುಬಹುದು, ಸರ್ಕಾರದ ನಿರ್ಧಾರ ನಂತರ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.
ಉಳಿದಂತೆ ವಿವಿಧ ಕ್ಯಾಂಪ್ ನಲ್ಲಿ ಆನೆಗಳ ಆರೋಗ್ಯವನ್ನು ಪರಿಶೀಲಿಸುತ್ತಿದ್ದು, ಎಲ್ಲಾ ಆನೆಗಳು ಆರೋಗ್ಯವಾಗಿವೆ. ಆದರೆ ಅಲ್ಲಿ ನೀಡುವ ತಾಲೀಮನ್ನು ಕಾಡಿನಲ್ಲಿ ನೀಡಲು ಸಾಧ್ಯವಿಲ್ಲ. ಆದರೆ ದಸರೆಗೆ ಕನಿಷ್ಠ ಸಮಯದಲ್ಲಿ ಆನೆಗಳನ್ನು ಮೈಸೂರಿಗೆ ತರಲಾಗವುದು. ಜತೆಗೆ ಕೊರೊನಾ ಹಿನ್ನೆಲೆಯಲ್ಲಿ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು, ಮಾವುತರು ಹಾಗೂ ಕಾವಾಡಿಗಳಿಗೆ ಪರೀಕ್ಷೆ ಮಾಡಿಸಲಾಗುವುದು. ಅವಶ್ಯಕತೆ ಬಿದ್ದರೆ ಆನೆಗಳಿಗೂ ಕೊರೊನಾ ಟೆಸ್ಟ್ ಮಾಡಿಸುವುದಾಗಿ ತಿಳಿಸಿದರು.