ನಾಗರಹೊಳೆ ಅರಣ್ಯ ವಲಯದಲ್ಲಿ ಪ್ರಾಣಿಗಳ ಮಾರಣ ಹೋಮ
ಎಚ್.ಡಿ.ಕೋಟೆ, ಮಾರ್ಚ್. 03 : ಮೈಸೂರು ಜಿಲ್ಲೆಯ ನಾಗರಹೊಳೆಯ ಮೇಟಿಕುಪ್ಪೆ ವಲಯ ಅರಣ್ಯದಲ್ಲಿ ಗುರುವಾರ 7 ಕಾಡುಕುರಿ ಮತ್ತು 5 ಜಿಂಕೆಗಳು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ.
ತಾಲ್ಲೂಕಿನ ಜಿ.ಎಂ.ಹಳ್ಳಿ ಗ್ರಾಮಕ್ಕೆ ಹೊಂದಿಕೊಂಡಿರುವ ಮೇಟಿಕುಪ್ಪೆ ಅರಣ್ಯ ವಲಯದ ನೀಲಗಿರಿ ತೋಪಿನ ಬಳಿಯ ಹೆಬ್ಬಳಕೊಳ್ಳದಲ್ಲಿ ನೀರು ಕುಡಿದು ಮೃತಪಟ್ಟಿವೆ ಎನ್ನಲಾಗಿದೆ.
ಎಂದಿನಂತೆ ಗುರುವಾರ ಅರಣ್ಯ ಇಲಾಖೆ ಸಿಬ್ಬಂದಿ ಗಸ್ತು ತಿರುಗುತ್ತಿದ್ದ ಸಂದರ್ಭದಲ್ಲಿ ಕೊಳದ ಸಮೀಪ ಕಾಡುಕುರಿ ಮತ್ತು ಜಿಂಕೆ ಮರಿಗಳು ಸತ್ತಿರುವುದು ಕಂಡುಬಂದಿದೆ.
ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ಅಪರೂಪದ ಕಾಡುಕುರಿಗಳಿದ್ದು ಇವು ತುರುಬೇವು ಮರದ ಬೀಜಗಳನ್ನು ತಿನ್ನಲು ಕಾಡಂಚಿನ ಗ್ರಾಮಗಳಿಗೆ ಬರುತ್ತಿದ್ದವು ಎಂದು ಸ್ಥಳೀಯರು ತಿಳಿಸಿದ್ದಾರೆ. ವಿಷಪ್ರಾಶಾನದಿಂದ ಸಾವನ್ನಪ್ಪಿರಬಹುದು ಎಂದು ಅರಣ್ಯಾಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ.
ಪ್ರಾಣಿಗಳು ನೀರು ಕುಡಿದಿರುವ ಕೊಳದ ಸುತ್ತಲೂ ಯೂರಿಯ ಕಂಡುಬಂದಿದೆ. ಯೂರಿಯ ಮಿಶ್ರಣದ ನೀರನ್ನು ಕುಡಿದು ಪ್ರಾಣಿಗಳು ಸತ್ತಿರಬಹುದು.
ಆದರೆ, ಕೊಳ್ಳದಲ್ಲಿರುವ ಮೀನುಗಳು ಬದುಕಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಪಶುವೈದ್ಯ ಉಮಾಶಂಕರ್ ತಿಳಿಸಿದ್ದಾರೆ.