'ವಿಜ್ಞಾನ'ವನ್ನು ಕನ್ನಡದಲ್ಲಿ ಕಲಿಸಲು ಮುಂದಾದ ಮೈಸೂರಿನ ನೃಪತುಂಗ ಶಾಲೆ
ಮೈಸೂರು, ಮೇ 09:ಸೈನ್ಸ್ ಎಂದರೆ ಇಂಗ್ಲಿಷ್ಮಯ. ಆದರೆ ಪದವಿ ಶಿಕ್ಷಣದಲ್ಲಿ ವಿಜ್ಞಾನ ವಿಷಯ ಇಂಗ್ಲಿಷ್ ಮಾಧ್ಯಮದ ಹೊರತಾಗಿ ಕನ್ನಡ ಮಾಧ್ಯಮದಲ್ಲಿ ಬಂದರೆ ಎಷ್ಟು ಚೆಂದ ಅಲ್ವಾ !. ಇಂತಹದೊಂದು ಕನಸನ್ನು ನನಸು ಮಾಡೋಕೆ ಮೈಸೂರಿನ ನೃಪತುಂಗ ಕನ್ನಡ ಶಾಲೆ ಮುಂದಾಗಿದೆ.
ವಿಜ್ಞಾನ ವಿಷಯ ಆಂಗ್ಲ ಮಾಧ್ಯಮ ಕಲಿಕೆಯಲ್ಲಿರುತ್ತದೆ ಎಂಬ ಕಾರಣಕ್ಕಾಗಿಯೇ ಅನೇಕ ವಿದ್ಯಾರ್ಥಿಗಳು ಆ ವಿಷಯ ಓದಲು ಹಿಂದೇಟು ಹಾಕುತ್ತಾರೆ. ಆದರೆ ಅದನ್ನು ಕನ್ನಡ ಮಾಧ್ಯಮದಲ್ಲಿ ಕಲಿಸಲು ಮೈಸೂರಿನ ರಾಮಕೃಷ್ಣನಗರದ ಕನ್ನಡ ವಿಕಾಸ ಸಂಸ್ಥೆಗಳ ಸಾಮಾಜಿಕ ಸಾಂಸ್ಕೃತಿಕ ತಂಡ ನಿರ್ಣಯಿಸಿದೆ.
ಮೈಸೂರಿನಲ್ಲಿ 33 ಆಂಗ್ಲ ಮಾಧ್ಯಮ ಸರ್ಕಾರಿ ಶಾಲೆಗಳು ಆರಂಭ!
ಈ ಬಗ್ಗೆ ಮಾತನಾಡಿರುವ ಸಂಸ್ಥೆಯ ಅಧ್ಯಕ್ಷ ಪ. ಮಲ್ಲೇಶ್, ಕನ್ನಡ ಪರ ಹೋರಾಟಗಾರರು 30 ವರ್ಷಗಳ ಹಿಂದೆ ಇಂಗ್ಲಿಷ್ ಶಾಲೆಗಳಿಗೆ ಸೆಡ್ಡು ಹೊಡೆದು ಬಡ ಹಾಗೂ ಮಧ್ಯಮ ವರ್ಗದ ಮಕ್ಕಳ ಶಿಕ್ಷಣಕ್ಕಾಗಿ ಸ್ಥಾಪಿಸಿದ ನೃಪತುಂಗ ಕನ್ನಡ ಶಾಲೆ ಸಾಕಷ್ಟು ಬಡ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡುತ್ತಾ ಬಂದಿದೆ.ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಯಶಸ್ಸು ಕಂಡಿದೆ. ಪ್ರಸ್ತುತ ಒಂದರಿಂದ ಹತ್ತನೇ ತರಗತಿಯವರೆಗೆ 300 ಮಕ್ಕಳು ವಿದ್ಯಾಭ್ಯಾಸ ನಡೆಸುತ್ತಿದ್ದಾರೆ ಎಂದು ತಿಳಿಸಿದರು.
ಇನ್ನು ಭೌತ ವಿಜ್ಞಾನ, ರಾಸಾಯನಿಕ ವಿಜ್ಞಾನ ಹಾಗೂ ಗಣಿತ ವಿಭಾಗಗಳನ್ನು ಆಂಗ್ಲ ಭಾಷೆಯ ಹೊರತಾಗಿ, ನನ್ನ ಮಾತೃಭಾಷೆ ಗುಜರಾತಿಯಲ್ಲಿ ಅಭ್ಯಸಿಸಿದರೆ ನಾಲ್ಕು ವರ್ಷದ ಕಲಿಕೆಯನ್ನು ಒಂದೇ ವರ್ಷದಲ್ಲಿ ಕಲಿಯುತ್ತಿದ್ದೆ ಎಂಬ ಗಾಂಧೀಜಿ ಮಾತು ನಮಗೆ ಆದರ್ಶವಾಗಿದೆ ಎನ್ನುತ್ತಾರೆ ಮಲ್ಲೇಶ್.
ಕನ್ನಡದಲ್ಲಿಯೂ ಸಾಧನೆ ಮಾಡಲು ಸಾಧ್ಯ
ಈ ದಿಸೆಯಲ್ಲಿ ಪೋಷಕರ ಮನಸ್ಥಿತಿಯನ್ನು ಬದಲಿಸುವ ದಿಸೆಯಲ್ಲಿ ಹಾಗೂ ಕನ್ನಡದಲ್ಲಿಯೂ ಸಾಧನೆ ಮಾಡಲು ಸಾಧ್ಯವಿದೆ ಎಂಬುದನ್ನು ತೋರಿಸುವ ನಿಟ್ಟಿನಲ್ಲಿ ಈ ಪ್ರಯತ್ನಕ್ಕೆ ಮುಂದಾಗಿದೆ ಈ ಶಾಲೆ. ಸರ್ಕಾರದ ನಿಯಮದ ಪ್ರಕಾರ ಯಾವುದೇ ಶಿಕ್ಷಣವನ್ನು ಮಾತೃಭಾಷೆಯಲ್ಲಿ ಕಲಿಯಬಹುದು, ಮಾತ್ರವಲ್ಲದೆ ಪದವಿಪೂರ್ವ ಶಿಕ್ಷಣದಲ್ಲಿ ವಿಜ್ಞಾನ ವಿಷಯವನ್ನು ಕನ್ನಡದಲ್ಲಿಯೂ ಬರೆಯಬಹುದು. ಕನ್ನಡದಲ್ಲಿಯೂ ಪಠ್ಯಪುಸ್ತಕ ಪ್ರಶ್ನೆಪತ್ರಿಕೆಗಳು ಇರಲಿವೆ ಎಂಬುದನ್ನು ವಿದ್ಯಾರ್ಥಿಗಳು ಮನದಟ್ಟು ಮಾಡಿಕೊಳ್ಳಬೇಕಿದೆ. ಈ ದಿಸೆಯಲ್ಲಿ ಸಂಸ್ಥೆ ಆವರಣದಲ್ಲಿ ಇದೀಗ ನೃಪತುಂಗ ಕನ್ನಡ ವಿಜ್ಞಾನ ವಾಣಿಜ್ಯ ಪದವಿ ಪೂರ್ವ ಕಾಲೇಜು ಆರಂಭಿಸಲಾಗಿದೆ.
ವಿದ್ಯಾರ್ಥಿಗಳು ಕನ್ನಡದಲ್ಲೇ ಕಲಿಯಬಹುದು
ಕನ್ನಡ ಮಾಧ್ಯಮ ಅಪೇಕ್ಷಿಸುವ ಮಕ್ಕಳಿಗಾಗಿ ಶಿಕ್ಷಣ ಕೊಡಿಸುವ ಸದುದ್ದೇಶದಿಂದ ಸಂಸ್ಥೆ ಈ ಪ್ರಯತ್ನಕ್ಕೆ ಮುಂದಾಗಿದೆ. ಖಾಸಗಿ ಕಾಲೇಜುಗಳ ಮಾದರಿಯಲ್ಲೇ ಸುಸಜ್ಜಿತವಾದ ಮೂರು ಅಂತಸ್ತಿನ ಕಟ್ಟಡ ಹಾಗೂ ಇಂದಿನ ತಂತ್ರಜ್ಞಾನಕ್ಕೆ ಅನುಗುಣವಾದ ಪ್ರಯೋಗಾಲಯ ಉಪನ್ಯಾಸ ಕೊಠಡಿಗಳನ್ನು ನೂತನ ಕಾಲೇಜು ಒಳಗೊಂಡಿದೆ. ಪರಿಣಿತ ಬೋಧಕರ ತಂಡ ಸುಸಜ್ಜಿತ ಪ್ರಯೋಗಾಲಯಗಳು ಹಾಗೂ ಜ್ಞಾನ ಸಿರಿ ಗ್ರಂಥಾಲಯ ಸೌಲಭ್ಯ ಹೊಂದಿದೆ. ಭೌತ ವಿಜ್ಞಾನ, ರಸಾಯನ ವಿಜ್ಞಾನ, ಗಣಿತ, ಜೀವ ವಿಜ್ಞಾನ ಮತ್ತು ಗಣಿತ ವಿಜ್ಞಾನ ವಿಷಯವನ್ನು ಕನ್ನಡದಲ್ಲೇ ವಿದ್ಯಾರ್ಥಿಗಳು ಕಲಿಯಬಹುದಾಗಿದೆ.
ಹ್ಯಾಪಿ ನ್ಯೂಸ್: ಶಾಲಾ ಮಕ್ಕಳ ಬ್ಯಾಗ್ ಭಾರ ಇಳಿಸಿದ ಸರ್ಕಾರ
8 ವಿದ್ಯಾರ್ಥಿಗಳಿಂದ ಅರ್ಜಿ ಸಲ್ಲಿಕೆ
40 ಮಂದಿ ಕೂರುವ ಕಂಪ್ಯೂಟರ್ ಪ್ರಯೋಗಾಲಯ, ಪ್ರಾಂಶುಪಾಲರ ಕೊಠಡಿ, ಅಧ್ಯಾಪಕರ ಕೊಠಡಿ, ವಿಜ್ಞಾನ ಪ್ರಯೋಗಾಲಯ ಸೇರಿದಂತೆ ತರಗತಿ ನಡೆಸಲು 4 ಕೊಠಡಿಗಳ ಭವ್ಯ ಕಟ್ಟಡ ನಿರ್ಮಿಸಲಾಗಿದೆ. ಇದುವರೆಗೂ ಎಸ್ಸೆಸ್ಸೆಲ್ಸಿ ಉತ್ತೀರ್ಣರಾದ 600 ವಿದ್ಯಾರ್ಥಿಗಳನ್ನು ಸಂಪರ್ಕಿಸಿದ್ದು, ಸದ್ಯ 8 ವಿದ್ಯಾರ್ಥಿಗಳು ಪ್ರವೇಶಾತಿ ಅರ್ಜಿ ಸಲ್ಲಿಸಿದ್ದಾರೆ.
ಐಚ್ಛಿಕ ವಿಷಯಗಳ ಸೌಲಭ್ಯವೂ ಇದೆ
ಪ್ರಥಮ ವರ್ಷದ ಪಠ್ಯಪುಸ್ತಕಗಳನ್ನು ಈಗಾಗಲೇ ಪದವಿಪೂರ್ವ ಶಿಕ್ಷಣ ಇಲಾಖೆ ಕನ್ನಡದಲ್ಲೇ ಸಿದ್ಧಪಡಿಸಿದ್ದು, ಸದ್ಯದಲ್ಲೇ ಮಾರುಕಟ್ಟೆಗೆ ಬರಲಿದೆ. ಕಂಪ್ಯೂಟರ್ ಅನ್ನು ಸಂಸ್ಥೆ ವತಿಯಿಂದಲೇ ಗಣಿತಜ್ಞರಿಂದ ತಯಾರಿಸಲಾಗಿದೆ. ಕನ್ನಡದಲ್ಲೇ ವಿಜ್ಞಾನ ಬೋಧಿಸಲು 50 ವರ್ಷ ಬೋಧನಾ ಪ್ರವೃತ್ತಿಯಲ್ಲಿದ್ದು, ನಿವೃತ್ತರಾಗಿರುವ ಪರಿಣಿತ ಅಧ್ಯಾಪಕರನ್ನು ನೇಮಕ ಮಾಡಲಾಗಿದೆ. 18 ಮಂದಿ ವಿದ್ಯಾರ್ಥಿಗಳಿಗೆ ಈಗಾಗಲೇ ಉಚಿತ ಶಿಕ್ಷಣ ನೀಡಲಾಗುತ್ತಿದೆ. ವಿಜ್ಞಾನ ವಿಷಯದಲ್ಲಿ ಪಿಸಿಎಂಬಿ, ಪಿಸಿಎಂಸಿ ಐಚ್ಛಿಕ ವಿಷಯಗಳ ಸೌಲಭ್ಯವಿದೆ.
ಬೆಂಗಳೂರಿನ 138 ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತರಗತಿ ಶೀಘ್ರ ಆರಂಭ
ಉದ್ಘಾಟನೆಗೆ ಬರಲಿದ್ದಾರೆ ಸಿದ್ದರಾಮಯ್ಯ
ವಿದ್ಯಾರ್ಥಿಗಳಿಗೆ ಕನ್ನಡದಲ್ಲೇ ಪಠ್ಯಕ್ರಮ ರೂಪಿಸಿದ್ದು, ಪದವಿಪೂರ್ವ ಶಿಕ್ಷಣ ಇಲಾಖೆ ಮುದ್ರಿಸಿಕೊಟ್ಟಿದೆ. ಮೈಸೂರು ಜಿಲ್ಲೆಯ ಹಿಂದಿನ ಜಿಲ್ಲಾಧಿಕಾರಿ ಶಿಖಾ ಅವರ ಶ್ರಮ ಇದರ ಹಿಂದಿದೆ ಎನ್ನುತ್ತಾರೆ ಮಲ್ಲೇಶ್. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಸಂಸ್ಥೆಯ ಶೈಕ್ಷಣಿಕ ಅಭಿವೃದ್ಧಿಗೆ ಎರಡು ಕೋಟಿ ರೂ.ಅನುದಾನ ಘೋಷಿಸಿ ಒಂದು ಕೋಟಿ ಹಣವನ್ನು ಬಿಡುಗಡೆಗೊಳಿಸಿದ್ದರು. ಅವರು ಮೇ 19 ರಂದು ನೂತನ ಕಾಲೇಜು ಕಟ್ಟಡ ಉದ್ಘಾಟಿಸಲು ಆಗಮಿಸಲಿದ್ದಾರೆ.