ಇಂದು ಮೈಸೂರು ಅರಮನೆ ತಲುಪಲಿದೆ ಜಂಜೂಸವಾರಿ ಆನೆಗಳು
ಮೈಸೂರು, ಆಗಸ್ಟ್ 26: ಸೆ. 29ರಿಂದ ಅ.8ರವರೆಗೆ ನಡೆಯಲಿರುವ ಮೈಸೂರು ದಸರೆ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲಿರುವ ಮೊದಲ ಹಂತದ ಆನೆಗಳು ಇಂದು ಮೈಸೂರು ಅರಮನೆ ಆವರಣವನ್ನು ಪ್ರವೇಶಿಸಲಿವೆ. ಮಧ್ಯಾಹ್ನ 12 ಗಂಟೆಯ ಅಭಿಜಿನ್ ಲಗ್ನದಲ್ಲಿ ಜಯ ಮಾರ್ತಾಂಡ ದ್ವಾರದ ಮೂಲಕ ಅರಮನೆ ಆವರಣಕ್ಕೆ ಆನೆಗಳನ್ನು ಬರಮಾಡಿಕೊಂಡು ತಾಲೀಮು ನೀಡಲಾಗುತ್ತದೆ.
ಇಲ್ಲಿದೆ ನಾಡಹಬ್ಬ ಮೈಸೂರು ದಸರೆಯ ಸಂಪೂರ್ಣ ಮಾಹಿತಿ
ಮೈಸೂರಿನ ಅರಣ್ಯ ಭವನದ ಆವರಣದಲ್ಲಿರುವ ಅಂಬಾರಿ ಸಾರಥಿ ಅರ್ಜುನ, ಅಭಿಮನ್ಯು, ವರಲಕ್ಷ್ಮಿ, ಧನಂಜಯ, ಈಶ್ವರ್ ಹಾಗೂ ವಿಜಯ ಆನೆಗಳು ಬರಲಿವೆ. ಅರ್ಜುನ ಆನೆ ಸತತ ಎಂಟನೇ ಬಾರಿ ಚಿನ್ನದ ಅಂಬಾರಿ ಹೊರಲು ಎದುರು ನೋಡುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಸಂಸದರು, ಶಾಸಕರು ಹಾಗೂ ಅಧಿಕಾರಿಗಳು ಗಜಪಡೆ ಬರಮಾಡಿಕೊಳ್ಳಲಿದ್ದಾರೆ. ಗಜಪಡೆಯ ಮತ್ತೊಂದು ತಂಡ ಕಾಡಿನಿಂದ ಕೆಲವೇ ದಿನಗಳಲ್ಲಿ ಹೊರಡಲಿದೆ. ಸೆ.29ರಂದು ದಸರಾ ಮಹೋತ್ಸವಕ್ಕೆ ಚಾಮುಂಡಿ ಬೆಟ್ಟದಲ್ಲಿ ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪ ಚಾಲನೆ ನೀಡಲಿದ್ದಾರೆ. ಅ.8ರಂದು ನಾಡಹಬ್ಬಕ್ಕೆ ತೆರೆ ಬೀಳಲಿದೆ.
ಗಜಪಡೆ ವಾಸ್ತವ್ಯಕ್ಕಾಗಿ ಅರಮನೆ ಆವರಣದಲ್ಲಿ ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿವೆ. ಆನೆಗಳು, ಮಾವುತರು, ಕಾವಾಡಿಗರ ಕುಟುಂಬದ ವಾಸ್ತವ್ಯಕ್ಕೆ 18 ತಾತ್ಕಾಲಿಕ ಶೆಡ್ ನಿರ್ಮಿಸಲಾಗಿದೆ. ಮಾವುತರು, ಕಾವಾಡಿಗರು, ಸರ್ಕಾರದ ಅತಿಥಿಗಳು. ಶೌಚಾಲಯ ಸೇರಿದಂತೆ ಮೂಲಸೌಲಭ್ಯಗಳನ್ನು ಒದಗಿಸಬೇಕು ಎಂದು ಸಚಿವ ವಿ.ಸೋಮಣ್ಣ ಕೂಡ ಸೂಚನೆ ನೀಡಿದ್ದಾರೆ.
ಕಳೆದ ಗುರುವಾರ ವಿಶ್ವವಿಖ್ಯಾತ ಮೈಸೂರು ದಸರಾ 2019ರ ಗಜಪಯಣಕ್ಕೆ ಜಿಲ್ಲೆಯ ಹುಣಸೂರು ತಾಲೂಕಿನ ವೀರನಹೊಸಹಳ್ಳಿ ಬಳಿ ಅನೆಗಳಿಗೆ ಪೂಜೆ ಮಾಡಿ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಲಾಗಿತ್ತು. ಇದರ ಜೊತೆಗೆ ಕಲಶ ಹೊತ್ತು ಮಹಿಳೆಯರಿಂದ ಪೂರ್ಣಕುಂಭ ಸ್ವಾಗತದೊಂದಿಗೆ ಅರ್ಜುನ, ವಿಜಯ, ಅಭಿಮನ್ಯು, ವರಲಕ್ಷ್ಮಿ, ಧನಂಜಯ ಮತ್ತು ಈಶ್ವರ ಆನೆಗಳು ಮೈಸೂರಿಗೆ ಪ್ರಯಾಣ ಮಾಡಿದ್ದನ್ನು ಸ್ಮರಿಸಬಹುದಾಗಿದೆ.