ಮೈಸೂರು ಅರಮನೆಯಲ್ಲಿ ಗಜಪಡೆಗೆ ಅದ್ಧೂರಿ ಸ್ವಾಗತ
ಮೈಸೂರು, ಆಗಸ್ಟ್ 26: ಕಲಾಮೇಳಗಳ ಕುಣಿತ, ಮಂಗಳವಾದ್ಯಗಳು, ಪೊಲೀಸ್ ಬ್ಯಾಂಡ್ ಜೊತೆಗೆ ದಸರಾ ಮಹೋತ್ಸವದಲ್ಲಿ ಭಾಗವಹಿಸಲೆಂದು ಇಂದು ಗಜಪಡೆ ಅರಮನೆಯ ಜಯಮಾರ್ತಾಂಡ ದ್ವಾರವನ್ನು ರಾಜಗಾಂಭೀರ್ಯದಲ್ಲಿ ಪ್ರವೇಶಿಸಿತು.
ಅರಮನೆಗೆ ಗಜಪಡೆ ಬಂದಾಯ್ತು; ಇನ್ನೂ ನಿದ್ದೆಯಲ್ಲಿದೆ ಸರ್ಕಾರದ ವೆಬ್ ಸೈಟ್
ಉಪ್ಪರಿಗೆ ಮೇಲಿಂದ ಸುರಿದ ಪುಷ್ಪದಳ, ಪೊಲೀಸರ ಗೌರವ ವಂದನೆ, ವೇದಘೋಷಗಳ ಜಯಕಾರ, ಕುದುರೆಗಳ ಖುರಪುಟದ ಶಬ್ದ ಅಲ್ಲಿ ಮಾರ್ದನಿಸಿತು. ಚಾಮುಂಡಿಬೆಟ್ಟದ ಪ್ರಧಾನ ಅರ್ಚಕ ಶಶಿಶೇಖರ ದೀಕ್ಷಿತ್ ನೇತೃತ್ವದ ಅರ್ಚಕರ ತಂಡ ವೇದಘೋಷಗಳೊಂದಿಗೆ ಆನೆಗಳನ್ನು ಬರಮಾಡಿಕೊಂಡರು.
ಅರ್ಜುನ, ಅಭಿಮನ್ಯು, ಧನಂಜಯ, ವಿಜಯ, ವರಲಕ್ಷ್ಮೀ ಮತ್ತು ಈಶ್ವರ ಆನೆಗಳು ಅರಮನೆಯ ಆವರಣದಲ್ಲಿನ ಗುಡಿಸಲು ಹೊಕ್ಕವು. ಇದೇ ಮೊದಲ ಬಾರಿ ದಸರಾ ಗಜಪಡೆಯಲ್ಲಿ ಭಾಗವಹಿಸಿರುವ ಆನೆ ಈಶ್ವರ ಕೊಂಚ ವಿಚಲಿತನಾದನು. ಪೂಜೆ ಸಲ್ಲಿಕೆ ವೇಳೆ ಗಾಬರಿಗೊಳಗಾದನು. ಅರಣ್ಯ ಭವನದಲ್ಲಿ ಪೊಜೆ ನಡೆಯುತ್ತಿದ್ದ ವೇಳೆ ಗಲಿಬಿಲಿಗೊಂಡ ಆನೆಯನ್ನು ಮಾವುತ ನಿಯಂತ್ರಣಕ್ಕೆ ತಂದರು.
ಇದಾದ ಬಳಿಕ ಅರಮನೆಗೆ ರಾಜಠೀವಿಯಿಂದ ಆಗಮಿಸಿದ ಆನೆಗಳಿಗೆ ಉಸ್ತುವಾರಿ ಸಚಿವ ಸೋಮಣ್ಣ, ಶಾಸಕರಾದ ಎಲ್.ನಾಗೇಂದ್ರ, ಕೆ.ಮಹದೇವ್, ಸಂಸದ ಪ್ರತಾಪ್ ಸಿಂಹ, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಇತರರು ಪಾಲ್ಗೊಂಡು ಪುಷ್ಪಾರ್ಚನೆ ಮಾಡಿದರು.
ಇತ್ತ ಸಚಿವ ಸ್ಥಾನ ಸಿಗದ ಕಾರಣ ಅಸಮಾಧಾನಗೊಂಡಿರುವ ಕೃಷ್ಣರಾಜ ಕ್ಷೇತ್ರ ಶಾಸಕ ಎಸ್.ಎ.ರಾಮದಾಸ್ ಇಂದಿನ ಗಜಪಡೆಯ ಸ್ವಾಗತ ಕಾರ್ಯಕ್ರಮದಲ್ಲೂ ಪಾಲ್ಗೊಳ್ಳಲಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನವನ್ನು ವಿ.ಸೋಮಣ್ಣನವರಿಗೆ ನೀಡಿರುವ ಕಾರಣಕ್ಕೆ ಎಸ್.ಎ.ರಾಮದಾಸ್ ಮುನಿಸಿಕೊಂಡಿದ್ದಾರೆ ಎನ್ನಲಾಗಿದ್ದು ಇಂದಿನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದೆ ಇರುವುದಕ್ಕೆ ಅದು ಪುಷ್ಟಿ ನೀಡಿದೆ. ರಾಮದಾಸ್ ಅವರು ಮೈಸೂರು ದಸರಾ ಕಾರ್ಯಕಾರಿ ಸಮಿತಿ ಸಭೆಗೂ ಗೈರಾಗಿದ್ದರು.