Breaking: ಮೈಸೂರಿನ ಚಿನ್ನಾಭರಣ ಅಂಗಡಿಯಲ್ಲಿ ಫೈರಿಂಗ್: ಓರ್ವ ಸಾವು
ಮೈಸೂರು, ಆಗಸ್ಟ್ 23: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಹಾಡಹಗಲೇ ನಡೆದ ಗುಂಡಿನ ಮೊರೆತ ಜನರನ್ನು ಬೆಚ್ಚಿ ಬೀಳಿಸಿದ್ದು, ಗುಂಡಿನ ದಾಳಿಯಲ್ಲಿ ಒಬ್ಬ ಮೃತಪಟ್ಟಿದ್ದಾನೆ.
ದರೋಡೆಕೋರರು ಮೈಸೂರಿನ ವಿದ್ಯಾರಣ್ಯಪುರಂ ಅಮೃತ್ ಗೋಲ್ಡ್ ಅಂಡ್ ಸಿಲ್ವರ್ ಚಿನ್ನಾಭರಣ ಅಂಗಡಿಗೆ ಕಳ್ಳತನಕ್ಕೆ ಬಂದಿದ್ದರು. ಮೂವರು ದರೋಡೆಕೋರರ ತಂಡ ಹಾಡಹಗಲೇ ಈ ದುಷ್ಕೃತ್ಯ ನಡೆಸಿದೆ.
ಬೈಕ್ನಲ್ಲಿ ಬಂದು ದಿಢೀರ್ ಪ್ರತ್ಯಕ್ಷರಾದ ಮೂವರು ಚಿನ್ನ, ಬೆಳ್ಳಿ ಕದಿಯಲು ಮುಂದಾಗಿದ್ದಾರೆ. ಈ ವೇಳೆ ಚಿನ್ನಾಭರಣ ಅಂಗಡಿ ಮಾಲೀಕ ಧರ್ಮೇಂದ್ರ ಕಳ್ಳರನ್ನು ತಡೆಯಲು ಮುಂದಾಗಿದ್ದಾನೆ.
ಆಗ ಧರ್ಮೇಂದ್ರನ ಮೇಲೆ ಗುಂಡಿನ ದಾಳಿ ಮಾಡಿದ್ದಾರೆ. ಗುಂಡಿನ ಏಟಿಗೆ ಆತ ಅಂಗಡಿಯಲ್ಲೆ ಕುಸಿದು ಬಿದ್ದಿದ್ದಾನೆ. ಜ್ಯೂವೆಲ್ಲರಿ ಅಂಗಡಿಯಿಂದ ಹೋಗುವಾಗ ಅಲ್ಲೆ ರಸ್ತೆಯಲ್ಲಿ ನಿಂತಿದ್ದ ದಡದಹಳ್ಳಿ ಗ್ರಾಮದ ಚಂದ್ರು ಮೇಲೆ ಕೂಡ ಶೂಟ್ ಔಟ್ ಮಾಡಿದ್ದಾರೆ. ಗುಂಡು ಆತನನ್ನು ಸೀಳಿದ ಕಾರಣ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಇನ್ನು ಚಿನ್ನಾಭರಣ ಅಂಗಡಿ ಮಾಲೀಕ ಧರ್ಮೇಂದ್ರನಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಡಿಸಿಪಿ ಗೀತಾ ಪ್ರಸನ್ನ ಹಾಗೂ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಶ್ವಾನ ದಳ ಅಲ್ಲೇ ಸುತ್ತಾಡಿದರೂ ದರೋಡೆಕೋರರು ಇದ್ದ ಸ್ಥಳ ಯಾವುದೆಂದು ಪತ್ತೆಯಾಗಲಿಲ್ಲ. ಶ್ವಾನ ವಾಸನೆ ಹಿಡಿದು ಅಲ್ಲೆ ಓಡಾಡುವುದನ್ನು ನೋಡಿದರೆ ದರೋಡೆಕೋರರು ಅಟ್ಯಾಕ್ ಮಾಡಲು ವಾಚ್ ಮಾಡುತ್ತಿರುವುದು ಸ್ಪಷ್ಟವಾಗಿದೆ.
ಹಾಡಹಗಲೆ ನಡೆದ ಶೂಟೌಟ್ನಿಂದ ಮೈಸೂರಿನ ಜನರು ಸಹಜವಾಗಿಯೇ ಬೆಚ್ಚಿ ಬಿದ್ದಿದ್ದಾರೆ. ಇನ್ನು ಮೈಸೂರಲ್ಲಿ ಈ ರೀತಿಯ ಕ್ರೈಂ ಇತ್ತೀಚಿನ ವರ್ಷಗಳಲ್ಲಿ ನಡೆದಿರಲಿಲ್ಲ. ಆದರೆ ಸೋಮವಾರ ನಡೆದಿರುವ ಘಟನೆಯಿಂದ ಜನರು ಆತಂಕಕ್ಕೆ ಒಳಗಾಗಿದ್ದಾರೆ.