ನಾಗರಹೊಳೆ ಬಳಿಯ ಅರಣ್ಯ ಬೆಂಕಿಗಾಹುತಿ: ತಪ್ಪಿದ ಭಾರೀ ಅನಾಹುತ
ಮೈಸೂರು, ಫೆಬ್ರವರಿ 22: ಕಿಡಿಗೇಡಿಗಳು ಹಚ್ಚಿದ ಬೆಂಕಿಗೆ ನಾಗರಹೊಳೆ ಉದ್ಯಾನದಂಚಿನ ಸುಮಾರು 18 ಎಕರೆ ಪ್ರದೇಶ ಅಗ್ನಿಗಾಹುತಿಯಾಗಿರುವ ಘಟನೆ ತಾಲೂಕಿನ ಕೆ.ಜಿ.ಹಬ್ಬನಕುಪ್ಪೆಯ ತರಗನ್ ಎಸ್ಟೇಟ್ನಲ್ಲಿ ನಡೆದಿದ್ದು, ಸ್ವಲ್ಪ ಎಚ್ಚರ ತಪ್ಪಿದ್ದರೂ ಸಮೀಪದ ನಾಗರಹೊಳೆ ಅರಣ್ಯ ಪ್ರದೇಶ ಅಗ್ನಿಗಾಹುತಿಯಾಗುವ ಸಂಭವವಿತ್ತು.
ಅಗ್ನಿ ಅನಾಹುತ ಸಂಭವಿಸಿದ ವಿಷಯ ತಿಳಿಯುತ್ತಿದ್ದಂತೆಯೇ ಕಾರ್ಯಪ್ರವೃತ್ತರಾದ ನಾಗರಹೊಳೆ ವನ್ಯಜೀವಿ ವಿಭಾಗದ ಸಿಎಫ್ ನಾರಾಯಣಸ್ವಾಮಿ, ಆರ್ಎಫ್ಓ ಸುರೇಂದ್ರರ ನೇತೃತ್ವದಲ್ಲಿ ಅರಣ್ಯ ಸಿಬ್ಬಂದಿಯ ಸಹಕಾರದಿಂದ ಬೆಂಕಿಯನ್ನು ನಂದಿಸುವಲ್ಲಿ ಹಾಗೂ ಮುಂದೆ ಆಗಬಹುದಾಗಿದ್ದ ಭಾರೀ ಅನಾಹುತವನ್ನು ತಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಂಗಳೂರಿನ ಮಾಲ್ ನಲ್ಲಿ ಬೆಂಕಿ: ಕೆಲವೇ ನಿಮಿಷಗಳಲ್ಲಿ ನಂದಿಸುವ ಕಾರ್ಯ ಯಶಸ್ವಿ
ಗುರುವಾರ ಮಧ್ಯಾಹ್ನ 3 ಗಂಟೆಯ ಸಮಯದಲ್ಲಿ ಬಿಲ್ಲೇನಹೊಸಳ್ಳಿ ರಸ್ತೆ ಬದಿಯ ಎಸ್ಟೇಟ್ ಬಳಿ ಕಿಡಿಗೇಡಿಗಳು ಬೆಂಕಿ ಹಾಕಿದ್ದು ಅದು ಗಾಳಿಯ ವೇಗಕ್ಕೆ ಸಿಲುಕಿ ಇತರೆಡೆಗೂ ಹಬ್ಬಿದ್ದು, ನೋಡು ನೋಡುತ್ತಿದ್ದಂತೆ ಹತ್ತಾರು ಎಕರೆ ಪ್ರದೇಶವನ್ನು ಆವರಿಸಿಕೊಂಡು ಉರಿದಿದ್ದು, ಇದರಿಂದ ಲಕ್ಷಾಂತರ ರೂ ನಷ್ಟ ಸಂಭವಿಸಿದೆ.
ಮೂರು ಗಂಟೆಯ ಕಾರ್ಯಾಚರಣೆ
ನಾಗರಹೊಳೆ ಉದ್ಯಾನದ ಹುಣಸೂರು ವಲಯದ ಟವರ್ನಲ್ಲಿದ್ದ ಫೈರ್ವಾಚರ್ ಮಾಹಿತಿ ನೀಡುತ್ತಿದ್ದಂತೆ ನಾಗರಹೊಳೆ ಸಿ.ಎಫ್, ನಾರಾಯಣಸ್ವಾಮಿ, ಎ.ಸಿ.ಎಫ್ ಪ್ರಸನ್ನಕುಮಾರ್, ಆರ್.ಎಫ್.ಓ. ಸುರೇಂದ್ರ ಸ್ಥಳಕ್ಕೆ ದೌಡಾಯಿಸಿ 100 ಕ್ಕೂ ಹೆಚ್ಚು ಅರಣ್ಯ ಹಾಗೂ ಅಗ್ನಿಶಾಮಕ ಸಿಬ್ಬಂದಿ, ಆರ್.ಆರ್.ಟಿ ವಾಹನ, ಬೆಂಕಿ ನಂದಿಸುವ ಪರಿಕರಗಳೊಂದಿಗೆ ಸಿಬ್ಬಂದಿಗಳನ್ನು ಕರೆಯಿಸಿ ಹರ ಸಾಹಸ ಮಾಡಿ ಸತತ ಮೂರುಗಂಟೆಗಳ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು.
ನಮ್ಮ ಎಸ್ಟೇಟ್ಗೆ ಕಿಡಿಗೇಡಿಗಳು ಹಚ್ಚಿದ ಬೆಂಕಿಗೆ ಕಂಗಾಲಾಗಿದ್ದೆವು, ಮಾಹಿತಿ ತಿಳಿದು ಅರಣ್ಯ ಇಲಾಖೆ ತಕ್ಷಣವೇ ಸ್ಪಂದಿಸಿ, ಸಿಬ್ಬಂದಿ ಸಮೇತ ವಾಹನಗಳೊಂದಿಗೆ ಆಗಮಿಸಿ ಬೆಂಕಿ ನಂದಿಸಿದ್ದರಿಂದ ನಮ್ಮ ಎಸ್ಟೇಟ್ ಹಾಗೂ ಪಕ್ಕದ ಅರಣ್ಯ ಪ್ರದೇಶಕ್ಕೆ ಬೆಂಕಿ ಹರಡುವುದು ತಪ್ಪಿದ್ದಾಗಿ ಎಸ್ಟೇಟ್ನ ಮಾಲೀಕರು ತಿಳಿಸಿದ್ದಾರೆ.