ಮೈಸೂರಿನ ದೇವರಾಜ ಮಾರುಕಟ್ಟೆಯಲ್ಲಿ ಬೆಂಕಿ : 6 ಅಂಗಡಿಗಳು ಭಸ್ಮ
ಮೈಸೂರು, ಆಗಸ್ಟ್ 13: ಮೈಸೂರಿನ ದೇವರಾಜ ಮಾರುಕಟ್ಟೆಯಲ್ಲಿ ಸೋಮವಾರ ಅಗ್ನಿ ಆಕಸ್ಮಿಕ ಸಂಭವಿಸಿ ಆರು ಮಳಿಗೆಗಳು ಸುಟ್ಟು ಭಸ್ಮವಾದ ಘಟನೆ ನಡೆದಿದೆ.
ದೆಹಲಿಯ ಬಹುಮಹಡಿ ಕಟ್ಟಡದಲ್ಲಿ ಬೆಂಕಿ: 6 ಮಂದಿ ಸಾವು, 11 ಮಂದಿಗೆ ಗಾಯ
ಪಾರಂಪರಿಕ ಕಟ್ಟಡ ದೇವರಾಜ ಮಾರುಕಟ್ಟೆಯಲ್ಲಿ ಸಂಭವಿಸಿದ ಅನಾಹುತದಲ್ಲಿ ಆರು ಅಂಗಡಿಗಳು ಸುಟ್ಟು, ಸುಮಾರು 30 ಲಕ್ಷ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಸಯ್ಯಾಜಿರಾವ್ ರಸ್ತೆಯ ಪ್ರವೇಶ ದ್ವಾರದಲ್ಲಿ ಸಿಗುವ ಕರ್ಪೂರ, ಪೂಜಾ ಸಾಮಗ್ರಿ, ಗೃಹಬಳಕೆ ವಸ್ತುಗಳು ಮಾರುವ ಅಂಗಡಿಯಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ನಂತರ ಅದು ಆರು ಅಂಗಡಿಗಳಿಗೆ ವ್ಯಾಪಿಸಿದೆ. ವಿಷಯ ತಿಳಿದ ಕೂಡಲೇ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸಿ ಆಗಬಹುದಾದ ಅನಾಹುತ ತಪ್ಪಿಸಿದರು.
ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಸದ್ಯ ಯಾವುದೇ ಪ್ರಾಣಾಪಾಯವಾಗಿಲ್ಲ. ಬೆಂಕಿ ಅನಾಹುತದಿಂದ ಮಾರುಕಟ್ಟೆಯಲ್ಲಿ ಕೆಲಕಾಲ ಆತಂಕ ಉಂಟಾಗಿತ್ತು. ದೇವರಾಜ ಮಾರುಕಟ್ಟೆಯಲ್ಲಿ ಇದು ಆರನೇ ಅಗ್ನಿ ಅವಘಡವಾಗಿದೆ. ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಅಂಗಡಿ ಮುಚ್ಚಿದ ಮಾಲೀಕ ಹಲೀಂ ಮಳಿಗೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿದ್ದ ಪರಿಣಾಮ ಅಂಗಡಿಯಲ್ಲಿದ್ದ ಕರ್ಪೂರ ದಾಸ್ತಾನಿಗೆ ಬೆಂಕಿ ತಗುಲಿದೆ.
ಇಡೀ ಅಂಗಡಿಗೆ ಕೆಲವೇ ನಿಮಿಷಗಳಲ್ಲಿ ಬೆಂಕಿ ಆವರಿಸಿ ದಟ್ಟ ಹೊಗೆ ಕಾಣಿಸಿತು. ಪಕ್ಕದಲ್ಲೇ ಇದ್ದ ಅಂಗಡಿಗೂ ಬೆಂಕಿ ಆವರಿಸಿಕೊಂಡು ಸಂಪೂರ್ಣ ಸುಟ್ಟು ಭಸ್ಮವಾಯಿತು. ಸ್ಥಳಕ್ಕೆ ಶಾಸಕ ನಾಗೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದರು.