"ಸಿನಿಮಾದವರು ಮಾದರಿಯಾಗಬೇಕು, ದಾರಿ ತಪ್ಪಿಸಬಾರದು"
ಮೈಸೂರು, ಸೆಪ್ಟೆಂಬರ್ 5: ಎಷ್ಟೇ ಪ್ರಭಾವಿ ವ್ಯಕ್ತಿಗಳಾದರೂ ಡ್ರಗ್ಸ್ ದಂಧೆಯಲ್ಲಿ ಭಾಗಿಯಾದವರಿಗೆ ಶಿಕ್ಷೆ ಖಚಿತ ಎಂದಿದ್ದಾರೆ ಮೈಸೂರು ಜಿಲ್ಲಾ ಉಸ್ತುವಾರಿ ಹಾಗೂ ಸಹಕಾರಿ ಸಚಿವ ಎಸ್.ಟಿ.ಸೋಮಶೇಖರ್.
ಮೈಸೂರಿನಲ್ಲಿ ಇಂದು ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿ, "ಡ್ರಗ್ಸ್ ನಿಯಂತ್ರಿಸಿ ವ್ಯವಸ್ಥಿತವಾಗಿ ಮಟ್ಟಹಾಕಲು ಕ್ರಮ ಕೈಗೊಳ್ಳಲಾಗುತ್ತಿದೆ. ಯಾರೆಲ್ಲ ಈ ದಂಧೆಯಲ್ಲಿ ತೊಡಗಿಕೊಂಡಿದ್ದಾರೆಯೋ ಅವರಿಗೆ ಶಿಕ್ಷೆ ಖಚಿತ. ಸಿನಿಮಾ ರಂಗದಲ್ಲಿರುವವರು ಯುವಜನತೆಗೆ ಮಾದರಿಯಾಗಬೇಕು. ಅದನ್ನು ಬಿಟ್ಟು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಯುವ ಜನಾಂಗ ಹಾಳಾಗಬಾರದು ಎನ್ನುವ ದೃಷ್ಟಿಯಿಂದ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಲಿದೆ. ಕ್ಯಾಬಿನೆಟ್ ಸಭೆಯಲ್ಲಿ ಕೂಡ ನಾವೆಲ್ಲರೂ, ಎಷ್ಟೇ ಪ್ರಭಾವಿಗಳಾದರೂ ಅವರ ಮೇಲೆ ಕ್ರಮಕ್ಕೆ ಒತ್ತಾಯಿಸಿದ್ದೇವೆ" ಎಂದರು.
ರಾಗಿಣಿ ವಿಚಾರಣೆಗೆ ಯಾರ ಒತ್ತಡವಿದೆ? ಸಿ.ಟಿ. ರವಿಗೆ ಪ್ರಶ್ನೆ!
ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿಯವರ ಸರ್ಕಾರ ಉರುಳಿಸಿದ್ದೇ ಡ್ರಗ್ಸ್ ಹಣದಿಂದ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ "ಆಗ ಅವರೇ ಮುಖ್ಯಮಂತ್ರಿಯಾಗಿದ್ದರು. ಅವರಿಗೆ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳುವ ಪವರ್ ಇತ್ತು. ಯಾಕೆ ಕ್ರಮ ತೆಗೆದುಕೊಳ್ಳಲಿಲ್ಲ? ಅವರಿಗೆ ಅಧಿಕಾರದಲ್ಲಿದ್ದಾಗ ಗೊತ್ತಾಗಿಲ್ಲವಾ? ಈಗ ಅಧಿಕಾರ ಇಲ್ಲ, ಅದಕ್ಕೆ ಮಾತಾಡ್ತಿದ್ದಾರೆ. ಡ್ರಗ್ಸ್ ಹಣ ಬಳಸಿ ಸರ್ಕಾರ ಮಾಡುವ ದುರ್ಬುದ್ಧಿ ಬಿಜೆಪಿಗಿಲ್ಲ" ಎಂದು ಕಿಡಿಕಾರಿದರು.
ದಸರಾ ಉತ್ಸವದ ಕುರಿತು ಪ್ರತಿಕ್ರಿಯಿಸಿ, "ಈ ಕುರಿತು ಸೆ.8ಕ್ಕೆ ಹೈಪರ್ ಕಮಿಟಿ ಸಭೆ ನಡೆಯುತ್ತದೆ. ಅದಾದ ನಂತರ ಮೈಸೂರಿನಲ್ಲಿಯೂ ಸಭೆ ನಡೆಯುತ್ತದೆ. ಹೈಪವರ್ ಕಮಿಟಿಯಲ್ಲಿ ಏನು ತೀರ್ಮಾನ ಮಾಡುತ್ತಾರೆ ಹೇಳಲಿಕ್ಕಾಗುವುದಿಲ್ಲ" ಎಂದರು.