ಮಹಿಷ ದಸರಾಗೆ ವಿರೋಧ; ಜಂಬೂ ಸವಾರಿವರೆಗೆ ಹೋರಾಟಕ್ಕೆ ತೀರ್ಮಾನ
ಮೈಸೂರು, ಸೆಪ್ಟೆಂಬರ್ 30: ಮಹಿಷ ದಸರಾ ಆಚರಣೆಗೆ ತಡೆ ಒಡ್ಡಿದ್ದನ್ನು ವಿರೋಧಿಸಿ ಮಹಿಷ ದಸರಾ ಆಚರಣಾ ಸಮಿತಿಯು ಜಂಬೂ ಸವಾರಿಯವರೆಗೆ ನಿತ್ಯ ಹೋರಾಟ ನಡೆಸುವುದಾಗಿ ಸಮಿತಿಯ ಅಧ್ಯಕ್ಷ ಮಾಜಿ ಮೇಯರ್ ಪುರುಷೋತ್ತಮ್ ಅವರು ತಿಳಿಸಿದ್ದಾರೆ.
ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, "ಸ್ಥಳೀಯರ ವಿರೋಧ ಇದೆ ಎಂದು ಮಹಿಷ ದಸರಾ ಆಚರಣೆಗೆ ಅವಕಾಶ ಮಾಡಿಕೊಟ್ಟಿಲ್ಲ ಎಂದಾದರೆ ನಾವೂ ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿಸುತ್ತೇವೆ. ಅಲ್ಲದೆ ದಸರಾ ವಿರೋಧಿಸಿ ಪತ್ರ ಬರೆಯುತ್ತೇವೆ" ಎಂದು ಹೇಳಿದರು.
ಮಹಿಷ ದಸರಾ: ಸಂಸದ ಪ್ರತಾಪ್ ಸಿಂಹಗೆ ಯಾಕೆ ಬೇಡ?
"ಮಹಿಷ ದಸರಾ ಸಮಿತಿಯವರನ್ನು ಸರ್ಕಾರ ಚರ್ಚೆಗೆ ಕರೆಯಬೇಕು. ಇಲ್ಲದಿದ್ದರೆ ಜಂಬೂ ಸವಾರಿ ದಿನವೂ ಪ್ರತಿಭಟನೆ ನಡೆಸುತ್ತೇವೆ. ಇಂಗ್ಲಿಷ್ ನಲ್ಲಿ "ಇಲ್ಲಿ ಅಸ್ಪೃಶ್ಯತೆ ಆಚರಿಸಲಾಗುತ್ತಿದೆ" ಎಂದು ಕರ ಪತ್ರ ಮುದ್ರಿಸಿ ವಿದೇಶೀ ಪ್ರವಾಸಿಗರಿಗೆ ಹಂಚುತ್ತೇವೆ. ಸಚಿವ ವಿ ಸೋಮಣ್ಣ ಅವರೊಂದಿಗೆ ಚರ್ಚೆಗೆ ಸಮಯ ಕೋರಿದ್ದಕ್ಕೆ ತಿರಸ್ಕರಿಸಿದ್ದಾರೆ. ನಾವೇನೂ ಹರಟೆ ಹೊಡೆಯಲು ಸಮಯ ಕೇಳಿಲ್ಲ" ಎಂದರು.
ಮಹಿಷ ದಸರಾ ಬಗ್ಗೆ ಚಿಂತಕ ಭಗವಾನ್ ಏನಂತಾರೆ?
ಸಚಿವ ಸಿ.ಟಿ. ರವಿ ಅವರು ತಮ್ಮನ್ನು ಮಾನಸಿಕ ಅಸ್ವಸ್ಥರು ಎಂದು ಟೀಕಿಸಿದ್ದಕ್ಕೆ ಉತ್ತರಿಸಿದ ಅವರು, "ರವಿ ಅವರೇ ಮಾನಸಿಕ ಅಸ್ವಸ್ಥರಾಗಿದ್ದು ಚಿಕಿತ್ಸೆಗೆ ನಾವು ಹಣ ನೀಡುತ್ತೇವೆ" ಎಂದು ಲೇವಡಿ ಮಾಡಿದರು. ಅವರ, "ಇಂದು ಮಹಿಷ, ಮುಂದೆ ನಕ್ಸಲರ ಹಬ್ಬವನ್ನೂ ಆಚರಿಸುತ್ತಾರೆ" ಎಂಬ ಹೇಳಿಕೆಯನ್ನು ಖಂಡಿಸಿ, "ಶೂದ್ರರಾಗಿರುವ ರವಿ ಅವರು ಚುನಾವಣೆಯಲ್ಲಿ ಸ್ಪರ್ಧಿಸಲು ಪ್ರಗತಿಪರರು ಮತ್ತು ಶೂದ್ರರೇ ಕಾರಣ" ಎಂದರು. ದಲಿತ್ ವೆಲ್ ಫೇರ್ ಟ್ರಸ್ಟ್ ಅಧ್ಯಕ್ಷ ಶಾಂತರಾಜು ಮಾತನಾಡಿ, "ಸಂಸದ ಸಿಂಹ ಅವರು ಪೊಲೀಸರನ್ನೇ ನಿಂದಿಸಿ, ಅವರ ರಕ್ಷಣೆಯಲ್ಲೇ ಸಂಸದರು ದಸರಾ ಹಬ್ಬ ಉದ್ಘಾಟಿಸಿರುವುದು ನಾಚಿಕೆಗೇಡು" ಎಂದು ಟೀಕಿಸಿದರು.