ಮೈಸೂರಿನಲ್ಲಿ ಹೀಗೊಂದು ವಿಭಿನ್ನ ಮದುವೆ...
ಮೈಸೂರು, ಅಕ್ಟೋಬರ್ 30: ಮದುವೆ ಎಂದರೆ ಕೌಟುಂಬಿಕ ಸಮಾರಂಭ. ಅಲ್ಲಿ ಬರೀ ನೆಂಟರು, ಸ್ನೇಹಿತರು, ಆಪ್ತರನ್ನು ಮಾತ್ರ ಆಹ್ವಾನಿಸಲಾಗುತ್ತದೆ. ಪುಷ್ಕಳ ಭೋಜನ, ಹೊಸ ಒಡವೆ, ವಸ್ತ್ರ ತೊಟ್ಟು, ಬಂಧು ಬಾಂಧವರೊಂದಿಗೆ ಸಂಭ್ರಮಿಸುವುಕ್ಕೆ ಮದುವೆ ಸೂಕ್ತ ವೇದಿಕೆಯೂ ಹೌದು. ಆದರೆ ಇಲ್ಲೊಬ್ಬರು ತಮ್ಮ ಮಗಳ ಮದುವೆಯನ್ನು ವಿಭಿನ್ನ ರೀತಿಯಲ್ಲಿ ಆಚರಿಸಲು ಮುಂದಾಗಿದ್ದಾರೆ.
ಮೈಸೂರಿನ ಬೋಗಾದಿ ಗ್ರಾಮದ ನಿವಾಸಿ ನಾಗರಾಜು ತಮ್ಮ ಮಗಳಾದ ರಶ್ಮಿ ವಿವಾಹವನ್ನು ವಿಭಿನ್ನ ರೀತಿಯಲ್ಲಿ ಆಚರಿಸುತ್ತಿದ್ದಾರೆ. ಅದು ಹೇಗೆ ಎಂದಿರಾ? ಮುಂದೆ ಓದಿ...
ಮದುವೆಗೆ ಇವರೇ ಆಹ್ವಾನಿತರು...
ಇಡೀ ಜಗತ್ತನ್ನೇ ಬಾಧಿಸುತ್ತಿರುವ ಕೋವಿಡ್ 19 ಸಾಂಕ್ರಾಮಿಕ ರೋಗದ ವಿರುದ್ಧ ಪ್ರತಿ ನಿತ್ಯವೂ ಹೋರಾಡುತ್ತಿರುವ, ಹೋರಾಡುತ್ತಲೇ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಣ, ಪೊಲೀಸ್, ವೈದ್ಯಕೀಯ, ಶ್ರಮಿಕ ವರ್ಗ ಹಾಗೂ ಪತ್ರಿಕಾ ವರ್ಗದ 80ಕ್ಕೂ ಹೆಚ್ಚು ಮಂದಿಯನ್ನು ಕೊರೊನಾ ವಾರಿಯರ್ಸ್ ಎಂದು ಪರಿಗಣಿಸಿ ಅವರನ್ನು ಮದುವೆ ವೇಳೆ ಸನ್ಮಾನಿಸುತ್ತಿದ್ದಾರೆ ನಾಗರಾಜ್.
ಕರೆಯೋಲೆಯಲ್ಲಿ ವಾರಿಯರ್ ಗಳ ಹೆಸರು
ಇದೇ ನವೆಂಬರ್ 2ರಂದು ತಮ್ಮ ಮಗಳ ಮದುವೆಯನ್ನು ಬೋಗಾದಿಯಲ್ಲಿ ಹಮ್ಮಿಕೊಂಡಿದ್ದು, ಮದುವೆಯ ಕರೆಯೋಲೆಯಲ್ಲಿ ತಾವು ಮದುವೆಗೆ ಆಹ್ವಾನಿಸಿರುವ ಕೊರೊನಾ ವಾರಿಯರ್ ಗಳ ಹೆಸರನ್ನು ಮುದ್ರಿಸಿದ್ದಾರೆ. ಕರೆಯೋಲೆಯಲ್ಲಿ ಸನ್ಮಾನಿತರ ಹೆಸರುಗಳನ್ನು ಮುದ್ರಿಸುವುದರೊಂದಿಗೆ ನೂತನ ವಧು-ವರರಿಗೆ ಶುಭ ಕೋರುವಂತೆಯೂ ಕೋರಿದ್ದಾರೆ.
"ವಾರಿಯರ್ ಗಳ ಕೆಲಸ ಸ್ಮರಿಸುವುದು ನಮ್ಮ ಕರ್ತವ್ಯ"
ತಮ್ಮ ಈ ವಿಭಿನ್ನ ಮದುವೆ ಕಾರ್ಯಕ್ರಮದ ಕುರಿತು ಮಾತನಾಡಿದ ನಾಗರಾಜ್, "ಕೊರೊನಾದಂತಹ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಶ್ರಮಿಸಿರುವ ಎಲ್ಲರನ್ನು ಸ್ಮರಿಸುವ ಪ್ರಯತ್ನ ಇದು. ಇದರೊಂದಿಗೆ ಸರಳ ವಿವಾಹದ ಮತ್ತೊಂದು ಮುಖದ ಪರಿಚಯ ಮಾಡುವ ಪ್ರಯತ್ನವೂ ಹೌದುʼ ಎಂದು ಹೇಳಿದ್ದಾರೆ.
ನಾಗರಾಜ್ ಕಾರ್ಯಕ್ಕೆ ಮೆಚ್ಚುಗೆ
ತಮ್ಮ ಮಗಳ ಮದುವೆಯನ್ನು ಕೊರೊನಾ ವಾರಿಯರ್ ಗಳ ಸಮ್ಮುಖದಲ್ಲಿ, ಅವರಿಗೆ ಸನ್ಮಾನಿಸುವ ಮೂಲಕ ನೆರವೇರಿಸಲು ನಿರ್ಧರಿಸಿರುವ ನಾಗರಾಜ್ ಅವರ ಕಾರ್ಯಕ್ಕೆ ಮನೆಯವರೂ ಬೆಂಬಲ ಕೊಟ್ಟಿದ್ದಾರೆ. ಜನರೂ ಈ ಭಿನ್ನ ಮದುವೆಯ ಯೋಜನೆಗೆ, ನಾಗರಾಜ್ ಅವರ ಆಲೋಚನೆಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.