ಮದ್ದೂರಿನಲ್ಲಿ ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿ ಆತ್ಮಹತ್ಯೆ
ಮದ್ದೂರು, ಏಪ್ರಿಲ್ 20 : ವರದಕ್ಷಿಣೆ ಕಿರುಕುಳದಿಂದ ಮನನೊಂದ ವಿದ್ಯಾವಂತ ಗೃಹಿಣಿಯೊಬ್ಬರು ಡೆತ್ ನೋಟ್ ಬರೆದಿಟ್ಟು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮದ್ದೂರಿನಲ್ಲಿ ನಡೆದಿದೆ.
ಮದ್ದೂರು ಲೀಲಾವತಿ ಬಡಾವಣೆಯ ಮಂಜುನಾಥ-ಗೀತಾ ಅವರ ಪುತ್ರಿ ಎಂ.ಟೆಕ್ ಪದವೀಧರೆ ಎಂ. ಸುಪ್ರಜಾ (28) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ ಮಹಿಳೆ. ವಿದ್ಯಾವಂತಳಾಗಿದ್ದರೂ ಆತ್ಮಹತ್ಯೆಗೆ ಶರಣಾಗಿರುವುದು ವಿಷಾದದ ಸಂಗತಿ. ಡೆತ್ ನೋಟ್ ನಲ್ಲಿ ಗಂಡ, ಅತ್ತೆ, ನಾದಿನಿಯೇ ಕಾರಣ ಎಂದು ಸುಪ್ರಜಾ ಬರೆದಿದ್ದಾರೆ.
ಸುಪ್ರಜಾ ಅವರನ್ನು ಮದ್ದೂರು ಪಟ್ಟಣದ ನಿವೃತ್ತ ಶಿಕ್ಷಕ ರಾಜಣ್ಣ ಹಾಗೂ ಉಪನ್ಯಾಸಕಿ ಊರ್ಮಿಳಾ ಅವರ ದ್ವಿತೀಯ ಪುತ್ರ ಆರ್. ಪ್ರತಾಪ ಅವರಿಗೆ 2011ರಲ್ಲಿ ಮದುವೆ ಮಾಡಿಕೊಡಲಾಗಿತ್ತು. ಲೇವಾದೇವಿ ವ್ಯವಹಾರ ಮಾಡಿಕೊಂಡಿದ್ದ ಪ್ರತಾಪ್, ಸುಪ್ರಜಾ ಅವರನ್ನು ಪ್ರೀತಿಸಿ ಮನೆಯವರ ವಿರೋಧದ ನಡುವೆ ಮದುವೆಯಾಗಿದ್ದನು. [ಮಂಡ್ಯ : ಗೃಹಿಣಿ ನಿಗೂಢ ಸಾವು, ಪತಿ ಮನೆಗೆ ಬೆಂಕಿ]
ಮದುವೆಯಾದ 2 ವರ್ಷಗಳವರೆಗೆ ದಂಪತಿ ಅನೋನ್ಯವಾಗಿಯೇ ಇದ್ದರು. ನಂತರ ಗಂಡ ಪ್ರತಾಪ್, ಅತ್ತೆ ಊರ್ಮಿಳಾ, ಪ್ರತಾಪ್ನ ತಂಗಿ ಡಾ. ಪ್ರತಿಭಾ ಅವರು ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದರು ಎಂದು ಆರೋಪಿಸಲಾಗಿದೆ.
ಈ ಸಂಬಂಧ ಒಂದು ಬಾರಿ ನ್ಯಾಯ ಪಂಚಾಯಿತಿಯೂ ಸಹ ನಡೆದಿತ್ತು. ನಂತರವೂ ಪ್ರತಿನಿತ್ಯ ಆಸ್ತಿ ಮತ್ತು ವರದಕ್ಷಿಣೆ ತರುವಂತೆ ಹಿಂಸಿಸುತ್ತಿದ್ದರಿಂದ ಮನನೊಂದ ಸುಪ್ರಜಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸುಪ್ರಜಾ ಅವರ ತಂದೆ ಮಂಜುನಾಥ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.
ಡಿವೈಎಸ್ಪಿ ಆರ್. ಶಿವಕುಮಾರ್, ತಹಸೀಲ್ದಾರ್ ಮಂಜೇಗೌಡ, ಸಿಪಿಐ ಪ್ರಸಾದ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸುಪ್ರಜಾ ಅವರ ಗಂಡ ಪ್ರತಾಪ್ ಹಾಗೂ ಅತ್ತೆ ಊರ್ಮಿಳಾ ಅವರನ್ನು ಪೊಲೀಸರು ಬಂಧಿಸಿದ್ದಾರೆ. [ವರದಕ್ಷಿಣೆ ಹಿಂಸೆ ಅನುಭವಿಸ್ತಿದ್ರೆ ಹೀಗೆ ಮಾಡಿ]
ಕ್ಷುಲ್ಲಕ ವಿಷಯಕ್ಕೆ ಕೈ ಕಟ್ : ಶ್ರೀರಂಗಪಟ್ಟಣ ಅಂಚೆಕೇರಿ ಬೀದಿಯಲ್ಲಿ ಜಮೀನು ವಿಚಾರಕ್ಕೆ ದಾಯಾದಿಗಳ ನಡುವೆ ಆರಂಭವಾದ ಜಗಳದಲ್ಲಿ ಕೈಯ್ಯನ್ನೇ ಕತ್ತರಿಸಿದ ಘಟನೆ ನಡೆದಿದೆ. ಬಾಬು ಎಂಬಾತನೇ ತನ್ನ ಸಹೋದರನ ಆಕ್ರೋಶಕ್ಕೆ ತುತ್ತಾಗಿ ಕೈಕಳೆದು ಕೊಂಡವನು. ಸಿದ್ದಪ್ಪ ಎಂಬಾತ ಮಚ್ಚಿನಿಂದ ಕೈ ಕತ್ತರಿಸಿದ ಆರೋಪಿ.
ಜಮೀನಿನ ವಿಚಾರವಾಗಿ ಸಿದ್ದಪ್ಪ ಮತ್ತು ಬಾಬು ನಡುವೆ ಜಗಳ ನಡೆದಿದ್ದು, ಜಗಳ ಅತಿರೇಕಕ್ಕೆ ತಿರುಗಿ ಸಿದ್ದಪ್ಪ ಮಚ್ಚಿನಿಂದ ಬಾಬುವಿನ ಎಡಗೈಗೆ ಬಲವಾಗಿ ಹೊಡೆದಿದ್ದರಿಂದ ಕೈನ ಅರ್ಧಭಾಗ ತುಂಡಾಗಿದೆ. ವಿಷಯ ತಿಳಿದು ತಕ್ಷಣವೇ ಸ್ಥಳಕ್ಕಾಗಮಿಸಿದ ಪಟ್ಟಣ ಪೊಲೀಸರು, ಹಲ್ಲೆಗೊಳಗಾದ ಬಾಬುವನ್ನು ಆಸ್ಪತ್ರೆಗೆ ಸೇರಿಸಿ, ಆರೋಪಿ ಸಿದ್ದಪ್ಪನನ್ನು ಬಂಧಿಸಿದ್ದಾರೆ. [ಪ್ರತ್ಯೂಷಾ ಸಾವು : ನಂದಿಬೆಟ್ಟದಲ್ಲಿ ಸಾತ್ವಿಕ್ ಶವ ಪತ್ತೆ]