ಸಿದ್ದು ಮಗನ ಸ್ಮರಣಾರ್ಥ ಮೈಸೂರಿನಲ್ಲಿ ಹಾಲು ಕರೆಯುವ ಸ್ಪರ್ಧೆ
ಮೈಸೂರು, ಫೆಬ್ರವರಿ 1: ಹಿರಿಯ ನಟ ದಿ.ತೂಗುದೀಪ್ ಶ್ರೀನಿವಾಸ್, ದಿ.ಲೋಕೇಶ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪುತ್ರ ದಿ.ರಾಕೇಶ್ ಸಿದ್ದರಾಮಯ್ಯ ಸ್ಮರಣಾರ್ಥ ರಾಜ್ಯಮಟ್ಟದ ಅಧಿಕ ಹಾಲು ಕರೆಯುವ ಸ್ಪರ್ಧೆಯನ್ನು ಫೆ.3-5ರವೆರೆಗೆ ಆಯೋಜಿಸಲಾಗಿದೆ ಎಂದು ಮೈಸೂರು ನಗರ ಗೋಪಾಲಕರ ಸಂಘದ ಅಧ್ಯಕ್ಷ ಡಿ.ನಾಗಭೂಷಣ ತಿಳಿಸಿದರು.
ಮೈಸೂರು ನಗರ ಗೋಪಾಲಕರ ಸಂಘ ಮತ್ತು ಪಶುಪಾಲನ ಇಲಾಖೆ ಸಹಯೋಗದಲ್ಲಿ ಫೆ.3 ರಿಂದ 5ರವರೆಗೆ ಮೂರುದಿನಗಳ ಕಾಲ ಸ್ಪರ್ಧೆಯನ್ನು ಜೆ.ಕೆ.ಮೈದಾನದಲ್ಲಿ ಆಯೋಜಿಸಲಾಗಿದ್ದು ಫೆ.3ರ ಸಂಜೆ 6ಕ್ಕೆ ಆದಿಚುಂಚನಗಿರಿ ಶಾಖಾಮಠದ ಸೋಮನಾಥನಂದ ಸ್ವಾಮಿ, ರಾಮಕೃಷ್ಣಮಠದ ಆತ್ಮಜ್ಞಾನಂದ ಹಾಗೂ ಯೋಗನರಸಿಂಹಸ್ವಾಮಿ ದೇವಾಲಯ ಸಂಸ್ಥಾಪಕ ಭಾಷ್ಯಂ ಸ್ವಾಮಿಯವರು ಚಾಲನೆ ನೀಡುವರು.['ಕ್ಷೀರಭಾಗ್ಯ ಯೋಜನೆ 5 ದಿನಗಳಿಗೆ ವಿಸ್ತರಣೆ']
ಗೋವುಗಳ ಸಮೇತ ವಿವಿಧ ಜನಪದ ಕಲಾತಂಡಗಳೊಂದಿಗೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಜೆ.ಕೆ.ಮೈದಾನದವರೆಗೆ ಮೆರವಣಿಗೆ ನಡೆಯಲಿದೆ. ಕಾರ್ಯಕ್ರಮದಲ್ಲಿ ಶಾಸಕ ವಾಸು, ಎಂ.ಕೆ.ಸೋಮಶೇಖರ್, ಸತೀಶ್ ಜಾರಕಿಹೊಳಿ, ಸಂಸದ ಹೆಚ್.ವಿಶ್ವನಾಥ್, ವಿಧಾನ ಪರಿಷತ್ ಸದಸ್ಯ ಡಿ.ಮಾದೇಗೌಡ ಇತರರು ಭಾಗವಹಿಸಲಿದ್ದಾರೆ
ಫೆ.4ರ ಸಂಜೆ 6ಕ್ಕೆ ಮಿಮಿಕ್ರಿ ಶಾಮ ಮತ್ತು ಸ್ಮಾರ್ಟ್ ಸಿಂಗರ್ ಶಶಿ, ಡ್ರಾಮಾ ಜೂನಿಯರ್ಸ್ -ಸರಿಗಮಪ ಮಕ್ಕಳಿಂದ ಸೆಲೆಬ್ರಿಟಿ ಸ್ಟಾರ್ಸ್ ನೈಟ್ ಕಾರ್ಯಕ್ರಮ, ಸಮಾರೋಪ ಸಮಾರಂಭವು ಫೆ.5ರ ಭಾನುವಾರದಂದು ನಡೆಯಲಿದೆ. ಬೆಳಿಗ್ಗೆ 6.30ಕ್ಕೆ ಹಾಲು ಕರೆಯುವ ಸ್ಪರ್ಧೆ ಹಾಗೂ ಸಂಜೆ 6ಕ್ಕೆ ಬಹುಮಾನ ವಿತರಣೆಯಾಗಲಿದ್ದು, ಪ್ರಥಮ, ದ್ವಿತೀಯ, ತೃತೀಯ ಬಹುಮಾನ ಕ್ರಮವಾಗಿ ರು.1 ಲಕ್ಷ , 2ಕೆಜಿ ಬೆಳ್ಳಿದೀಪ, ರು 75 ಸಾವಿರ ಹಾಗೂ 1.1/2 ಕೆಜಿ ಬೆಳ್ಳಿ ದೀಪ, ರು.50ಸಾವಿರ ರೂ.ನಗದು ಹಾಗೂ 1ಕೆಜಿ ಬೆಳ್ಳಿ ದೀಪ ನೀಡಲಾಗುವುದು.
ಈ ಕಾರ್ಯಕ್ರಮದಲ್ಲಿ ಮುಡಾ ಅಧ್ಯಕ್ಷ ದ್ರುವಕುಮಾರ್, ಪಶುಸಂಗೋಪನ ಸಚಿವ ಎ.ಮಂಜು ಖ್ಯಾತ ನಟರಾದ ದರ್ಶನ್ ತೂಗುದೀಪ್, ಸೃಜನ್ ಲೋಕೇಶ್, ದಿನಕರ್ ತೂಗುದೀಪ್, ಯತೀಂದ್ರ ಸಿದ್ದರಾಮಯ್ಯ ಹಾಗೂ ಇತರರು ಭಾಗವಹಿಸುವರು ಎಂದು ತಿಳಿಸಿದರು.