ಅಳುತ್ತಿದೆಯೆಂದು 2 ವರ್ಷದ ಮಗುವನ್ನು ಹೊಡೆದು ಕೊಂದ ತಂದೆ–ತಾಯಿ
ಮೈಸೂರು, ಜುಲೈ 6: ತಂದೆ-ತಾಯಿಯ ನಿರ್ಲಕ್ಷ್ಯದಿಂದ 2 ವರ್ಷದ ಮಗುವೊಂದು ಸಾವಿಗೀಡಾದ ಘಟನೆ ಮೈಸೂರಿನಲ್ಲಿ ನಡೆದಿದೆ.
ಕುಶಾಲ್ ಸಾವನ್ನಪ್ಪಿದ ಮಗು. ಎಚ್.ಡಿ.ಕೋಟೆ ತಾಲ್ಲೂಕಿನ ಸವ್ವೆ ಗ್ರಾಮದ ಶಶಿಕುಮಾರ್ ಹಾಗೂ ಪರಿಮಳಾ ಪ್ರೀತಿಸಿ ಮದುವೆಯಾಗಿದ್ದರು. ಇವರಿಗೆ 4 ವರ್ಷದ ಖುಷಿ ಎಂಬ ಹೆಣ್ಣು ಮಗಳು ಹಾಗೂ 2 ವರ್ಷದ ಕುಶಾಲ್ ಎಂಬ ಗಂಡು ಮಗು ಇತ್ತು. ಆದರೆ ಶಶಿಕುಮಾರ್, ಈ ಗಂಡು ಮಗು ನನಗೆ ಹುಟ್ಟಿಲ್ಲ ಎಂದು ಯಾವಾಗಲೂ ಜಗಳ ತೆಗೆಯುತ್ತಲೇ ಇದ್ದ. ತನ್ನ ಗಂಡನಿಗೆ ಇಷ್ಟವಿಲ್ಲದ ಮಗು ತನಗೂ ಬೇಡ ಎಂಬಂತೆ ಮಗು ಹಠ ಮಾಡಿದರೆ ಪರಿಮಳಾ ಕೂಡ ಆ ಮಗುವಿಗೆ ಹೊಡೆಯುತ್ತಿದ್ದಳು ಎನ್ನಲಾಗಿದೆ.
ಮೈಸೂರಿನ ಅಪರಾಧ ಪ್ರಕರಣಗಳ ಮಾಹಿತಿ ನೀಡಿದ ಆಯುಕ್ತರು
ಮತ್ತೆ ಜೂನ್ 30ರಂದು ಮಗು ಅಳುತ್ತಿದ್ದ ಕಾರಣವಾಗೇ, ಶಶಿಕುಮಾರ್ ಹಾಗೂ ಪರಿಮಳಾ ನಡುವೆ ಜಗಳವಾಗಿದೆ. ಆ ಸಂದರ್ಭದಲ್ಲೂ ಮಗುವಿಗೆ ಥಳಿಸಲಾಗಿದೆ. ಗಾಯಗೊಂಡಮಗುವನ್ನು ಮೈಸೂರಿನ ಚೆಲುವಾಂಬ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಗು ಸಾವನ್ನಪ್ಪಿದೆ.
ಈ ಸಂಬಂಧ ಪರಿಮಳಾ ಸಹೋದರ ಗೋವಿಂದ ರಾಜು ದೂರು ದಾಖಲಿಸಿದ್ದಾರೆ. ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಗುವಿನ ಸಾವಿನಲ್ಲಿ ತಾನು ಭಾಗಿಯಾಗಿರುವುದಾಗಿ ಪರಿಮಳಾ ಪೊಲೀಸರ ಮುಂದೆ ತಪ್ಪು ಒಪ್ಪಿಕೊಂಡಿದ್ದು, ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ.