ಪಿರಿಯಾಪಟ್ಟಣದ ಅಯ್ಯನಕೆರೆಯಲ್ಲಿ ಮೀನುಗಳ ಮಾರಣಹೋಮ
ಪಿರಿಯಾಪಟ್ಟಣ, ಜೂನ್ 7: ಪಿರಿಯಾಪಟ್ಟಣ ತಾಲೂಕಿನ ಹುಣಸವಾಡಿ ಗ್ರಾಮಕ್ಕೆ ಸೇರಿದ ಅಯ್ಯನಕೆರೆಯಲ್ಲಿ ಮೀನುಗಳ ಮಾರಣ ಹೋಮ ನಡೆದಿದೆ. ಕೋಳಿ ಸಾಕಾಣಿಕಾ ಕೇಂದ್ರದಿಂದ ಹರಿದು ಬಂದ ತ್ಯಾಜ್ಯ ನೀರು ಹರಿದು ಬಂದು ಕೆರೆಗೆ ಸೇರುತ್ತಿರುವುದೇ ಇದಕ್ಕೆ ಕಾರಣವಾಗಿದೆ. ಇದರಿಂದ ಕೆರೆಯ ನೀರುವ ದುರ್ವಾಸನೆ ಬೀರುತ್ತಿದೆ, ಜೊತೆಗೆ ಮೀನುಗಳು ಸಾಯುತ್ತಿವೆ.
ಈ ಕೆರೆಯಲ್ಲಿ ಮೀನು ಸಾಕಾಣಿಕೆ ನಡೆಸಲಾಗುತ್ತಿದ್ದು, ಸುಮಾರು 2ಲಕ್ಷ ರೂ.ಗಿಂತಲೂ ಹೆಚ್ಚಿನ ಹಣವನ್ನು ಖರ್ಚು ಮಾಡಿ ಮೀನುಗಳನ್ನು ಸಾಕಲಾಗುತ್ತಿತ್ತು. ಅಲ್ಲದೆ ಇಲ್ಲಿಂದ ಲಕ್ಷಾಂತರ ರೂ ಆದಾಯ ಬರುವುದರಲ್ಲಿತ್ತು. ಮೀನುಗಳು ಈಗ ಬೆಳವಣಿಗೆಯ ಹಂತದಲ್ಲಿದ್ದವು. ಆದರೀಗ ಎಲ್ಲವೂ ವ್ಯರ್ಥವಾಗಿದೆ.
ಈ ವ್ಯಾಪ್ತಿಯಲ್ಲಿ ಮಳೆ ಸುರಿದ ಕಾರಣ ನೀರು ಹರಿದು ಬಂದು ಕೆರೆಯನ್ನು ಸೇರಿತ್ತು. ಈ ನೀರಿನಲ್ಲಿ ನಂದಿನಾಥಪುರ ಸಮೀಪವಿರುವ ಶ್ರೀ ವೆಂಕಟೇಶ್ವರ ಹ್ಯಾಚರೀಸ್ ಕಂಪನಿಯವರು ನಡೆಸುತ್ತಿರುವ ಕೋಳಿ ಸಾಕಾಣಿಕಾ ಕೇಂದ್ರದಿಂದ ಹರಿದು ಬಂದ ಘನ ತ್ಯಾಜ್ಯ ವಸ್ತುಗಳು ಸೇರಿದಂತೆ ರಾಸಾಯನಿಕ ಪದಾರ್ಥಗಳು ಕೆರೆಗೆ ಬಂದು ಸೇರಿದ್ದವು. ಪರಿಣಾಮ ಮೀನುಗಳು ಸಾವನ್ನಪ್ಪಿವೆ ಎನ್ನುವುದು ಸ್ಥಳೀಯರಾದ ರೈತ ರಮೇಶ್ ಅವರ ಆರೋಪವಾಗಿದೆ.
ಸತ್ತ ಮೀನುಗಳು ಕೆರೆಯಿಂದ ತೇಲಿ ದಡಕ್ಕೆ ಬರುತ್ತಿವೆಯಲ್ಲದೆ, ಕೊಳೆತು ಅದರಿಂದ ಬರುವ ದುರ್ವಾಸನೆಯು ಗ್ರಾಮವನ್ನು ಹರಡುತ್ತಿದ್ದು ಜನ ಮೂಗು ಮುಚ್ಚಿಕೊಂಡು ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಇದೀಗ ಕೆರೆ ಬಳಿ ಹೋದರೆ ಸತ್ತ ಮೀನುಗಳು ದಡದಲ್ಲಿ ಬಿದ್ದಿರುವುದು ಕಂಡು ಬರುತ್ತಿದ್ದು, ಇದನ್ನು ಪ್ರಾಣಿ ಪಕ್ಷಿಗಳು ತಿನ್ನುತ್ತಿದ್ದರೆ ಕಲುಷಿತ ನೀರನ್ನು ಜಾನುವಾರುಗಳು ಕುಡಿಯುತ್ತಿವೆ.
ಇದರಿಂದ ಸುತ್ತಮುತ್ತ ಪರಿಸರ ಕಲುಷಿತಗೊಳ್ಳುತ್ತಿದ್ದು, ಭಯದ ವಾತಾವರಣ ನಿರ್ಮಾಣವಾಗಿದೆ. ಆದ್ದರಿಂದ ಕೂಡಲೇ ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ಇತ್ತ ಗಮನಹರಿಸಿ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.