ಸಚಿವ ಸೋಮಶೇಖರ್ ಕಾರಿಗೆ ಮುತ್ತಿಗೆ ಹಾಕಿದ ರೈತರು
ಮೈಸೂರು, ಸೆಪ್ಟೆಂಬರ್ 19: ಶಂಕರಮಠದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದಕ್ಕೆ ಪಾಲ್ಗೊಳ್ಳಲು ಆಗಮಿಸುತ್ತಿದ್ದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರ ಕಾರಿಗೆ ರೈತರು ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ನಗರದ ಗನ್ ಹೌಸ್ ಹತ್ತಿರ ಕುರುಬೂರು ಶಾಂತಕುಮಾರ್ ಅವರ ನೇತೃತ್ವದಲ್ಲಿ ಸುಮಾರು 20ಕ್ಕೂ ಹೆಚ್ಚು ರೈತರು ಶನಿವಾರ ಉಸ್ತುವಾರಿ ಸಚಿವರ ಕಾರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ನಮ್ಮೂರ ಭೂಮಿ ನಮಗಿರಲಿ, ಅನ್ಯರಿಗಲ್ಲ; ಭೂ ಸುಧಾರಣಾ ಕಾಯ್ದೆ ವಿರೋಧಿಸಿ ಅರೆಬೆತ್ತಲೆ ಪ್ರತಿಭಟನೆ
ರೈತರ ಸಮಸ್ಯೆ ಕುರಿತು ಚರ್ಚಿಸುವ ನೀವು ಇನ್ನೂ ಸಭೆ ಕರೆದಿಲ್ಲ. ಅದಿವೇಶನ ಆರಂಭವಾಗುತ್ತಿದೆ. ರೈತರ ಜೊತೆ ಸಭೆ ನಡೆಸಿ ಚರ್ಚೆ ಮಾಡದೇ, ರೈತರ ಸಮಸ್ಯೆ ಕುರಿತು ನೀವು ಅಧಿವೇಶನದಲ್ಲಿ ಏನು ಮಾತನಾಡುತ್ತೀರಿ ಎಂದು ಪ್ರಶ್ನಿಸಿದರು. ಹೀಗಾಗಿ, ಕೂಡಲೇ ನೀವು ಸಭೆ ಕರೆಯಬೇಕು ಎಂದು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಸೋಮಶೇಖರ್, ಈಗಾಗಲೇ ಸೆ.26ರಂದು ರೈತರ ಜೊತೆ ಸಭೆಯನ್ನು ನಿಗದಿಪಡಿಸಿದ್ದೇನೆ. ಈ ಬಗ್ಗೆ ನಿಮಗೂ ಮಾಹಿತಿ ಕೊಡುತ್ತಿದ್ದರು. ಅಷ್ಟರೊಳಗೆ ನೀವು ಸಭೆ ನಡೆಸಿಲ್ಲ ಎಂದು ಪ್ರತಿಭಟಿಸುತ್ತಿದ್ದೀರಿ. 26ರಂದು ಬನ್ನಿ ಸಮಸ್ಯೆ ಕುರಿತು ಚರ್ಚಿಸೋಣ ಎಂದರು.
ಆದರೂ, ಸಚಿವರು ವಿರುದ್ಧ ರೈತರು ಧಿಕ್ಕಾರ ಕೂಗಿದರು. ಧಿಕ್ಕಾರದ ನಡುವೆಯೂ ಸಚಿವರು ಶಂಕರಮಠಕ್ಕೆ ತೆರಳಿ ಕೊರೊನಾ ವಾರಿಯರ್ಸ್ ವಿಡಿಯೊಗ್ರಾಫರ್ಸ್ ಮತ್ತು ಛಾಯಾಗ್ರಾಹಕರಿಗೆ ಸನ್ಮಾನ ಕಾರ್ಯಕ್ರಮ ನೆರವೇರಿಸಿದರು. ಜೊತೆಯಲ್ಲಿ ಶಾಸಕರಾದ ಎಲ್.ನಾಗೇಂದ್ರ, ಎಸ್.ಎ.ರಾಮದಾಸ್, ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್, ಬಿಜೆಪಿಯ ಮಂಗಳ ಸೋಮಶೇಖರ್ ಇತರರು ಹಾಜರಿದ್ದರು.