ದೆಹಲಿಯಲ್ಲಿ ರೈತರ ಪ್ರತಿಭಟನೆ: ಮತ್ತೊಂದು ಸಿಎಎ ಹೋರಾಟ ಅಷ್ಟೆ: ಸಂಸದ ಪ್ರತಾಪ್ ಸಿಂಹ
ಮೈಸೂರು, ಡಿಸೆಂಬರ್ 10: ದೆಹಲಿಯಲ್ಲಿ ರೈತರು ಮಾಡುತ್ತಿರುವ ಪ್ರತಿಭಟನೆ ಸಿಎಎನ ಇನ್ನೊಂದು ರೂಪ. ಪಂಜಾಬ್ ರೈತರು ದೆಹಲಿಯಲ್ಲೇ ಏಕೆ ಮಾಡಬೇಕು? ಪಂಜಾಬ್ ನಲ್ಲೇ ಪ್ರತಿಭಟನೆ ಮಾಡಬಹುದಲ್ಲ. ದೆಹಲಿಯಲ್ಲಿ ರಾಯಭಾರ ಕಚೇರಿಗಳಿವೆ, ಸೇನೆಯ ಕಚೇರಿಗಳಿವೆ, ಬಹಳ ಸೂಕ್ಷ್ಮ ಪ್ರದೇಶ. ಅಲ್ಲೇ ಯಾಕೆ ಮಾಡಬೇಕು? ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಪ್ರಶ್ನಿಸಿದರು.
ಪಂಜಾಬ್ ನಲ್ಲಿ ಶೇ.32 ಪರಿಶಿಷ್ಟ ವರ್ಗದವರಿದ್ದಾರೆ. ಅವರಲ್ಲಿ ಶೇ.3 ರಷ್ಟು ಮಂದಿಗೆ ಮಾತ್ರ ಭೂಮಿ ಇದೆ. ಶೇ.29 ಜನ ಭೂ ರಹಿತರು. ಶೇ.3 ರಲ್ಲಿ ಊಟಕ್ಕೆ ಮಾತ್ರ ಸೀಮಿತವಾಗಿದೆ. ಮೊದಲಿನಿಂದಲೂ ಗೋಧಿ, ಭತ್ತ ಎಂದರೆ ಪಂಜಾಬ್, ಹರಿಯಾಣ ಮೇಲುಗೈ ಆಗಿತ್ತು. ಈಗ ಗೋಧಿ, ಭತ್ತ ಎರಡಲ್ಲೂ ಪಂಜಾಬ್, ಹರಿಯಾಣ ನಂ.1 ಅಲ್ಲ. ಮಧ್ಯಪ್ರದೇಶ, ಉತ್ತರ ಪ್ರದೇಶ, ಕರ್ನಾಟಕ ಇದೆ ಎಂದರು.
ತಿರಸ್ಕಾರ ಮಾಡುವುದರಲ್ಲಿ ಸಮಯ ವ್ಯರ್ಥ
ಎಂ.ಎಸ್.ಪಿ ತೆಗೆದುಹಾಕುವುದಿಲ್ಲ ಎಂದು ಸಂಸತ್ತಿನಲ್ಲೂ ಸ್ಪಷ್ಟಪಡಿಸಿದ್ದೇವೆ. ಇಷ್ಟಾದರೂ ಚಳವಳಿ ನಡೆಯುತ್ತಿರುವುದು ಸಿಎಎನ ಇನ್ನೊಂದು ರೂಪ. ಅದರಲ್ಲಿ ಒಬ್ಬ ಮುಸಲ್ಮಾನನಿಗೂ ತೊಂದರೆಯಾಗುವುದಿಲ್ಲ ಎಂದರೂ ಪ್ರತಿಭಟನೆ ಮಾಡಿದರು. ಅವರ ಉದ್ದೇಶ ಬೇರೆ ಇದೆ. ಸರ್ಕಾರ ಯಾವುದೇ ಮಾರ್ಗೋಪಾಯ ಸೂಚಿಸಿದರೂ, ತಿರಸ್ಕಾರ ಮಾಡುವುದರಲ್ಲಿ ಸಮಯ ವ್ಯರ್ಥ ಮಾಡುತ್ತಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಟೀಕಿಸಿದರು. ದೇಶದ ಜನ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಇದ್ದಾರೆ. ರೈತರ ಬಗ್ಗೆ ಮೋದಿ, ಬಿಎಸ್ವೈ ಅವರಿಗೆ ಕಾಳಜಿ ಇದೆ ಎಂದು ಸಂಸದ ಸಿಂಹ ಹೇಳಿದರು.
Infographics: ಗೋ ಹತ್ಯೆ ನಿಷೇಧ ವಿಧೇಯಕದ ಪ್ರಮುಖ ಅಂಶಗಳೇನು
ಗೋ ಹತ್ಯೆ ನಿಷೇಧ ಕಾಯ್ದೆ
ಇದೇ ವೇಳೆ ಗೋಹತ್ಯೆ ನಿಷೇಧ ವಿಧೇಯಕ ಕುರಿತು ಪ್ರತಿಕ್ರಿಯಿಸಿದ ಪ್ರತಾಪ್ ಸಿಂಹ, ""ಜನರು ಪೂಜಿಸುವ ಗೋಮಾತೆಯನ್ನು ಕೊಂದು ತಿನ್ನುವುದು ಸರಿಯಲ್ಲವೆಂದು ಗೋಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಕಾಂಗ್ರೆಸ್ ವಿನಾಕಾರಣ ತಗಾದೆ ತೆಗೆಯುವ ಅಗತ್ಯವಿಲ್ಲ ಎಂದು ತಿಳಿಸಿದರು. ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರ ಗೋಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೆ ತಂದಿರುವುದನ್ನು ಸ್ವಾಗತಿಸಿ, ಮೈಸೂರು ನಗರದ ಪಿಂಜಾರಾಪೋಲ್ ನಲ್ಲಿ ಬಿಜೆಪಿ ವತಿಯಿಂದ ಗೋವುಗಳಿಗೆ ಮೇವು ನೀಡಿ, ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಗೋವಿನೊಂದಿಗೆ ಭಾವನಾತ್ಮಕ ಸಂಬಂಧವಿದೆ
ಕಾಂಗ್ರೆಸ್ ನವರು ಗಾಂಧೀಜಿ ಅವರ ಹೆಸರು ಹೇಳುತ್ತಾರೆ. ಆದರೆ ಗಾಂಧೀಜಿ ಅವರು ಗೋ ಮಾತೆ ಬಗ್ಗೆ ಏನು ಹೇಳಿದ್ದಾರೆ ಎಂದು ತಿಳಿದುಕೊಂಡಿಲ್ಲ ಎಂದರು. ತಾಯಿಯ ಎದೆಯಲ್ಲಿ ಹಾಲು ಬರಲಿಲ್ಲವೆಂದರೂ ಗೋ ಮಾತೆ ನಮ್ಮನ್ನು ಸಾಕುತ್ತಾಳೆ. ಗೋವನ್ನು ಮಾತ್ರ ಮಾತೆ ಎನ್ನುತ್ತೇವೆ. ಗೋವಿನೊಂದಿಗೆ ಒಂದು ಭಾವನಾತ್ಮಕ ಸಂಬಂಧವಿದೆ. ಕೋಟ್ಯಾಂತರ ಜನ ಗೋವನ್ನು ಮಾತೆ ಎಂದು ಪೂಜಿಸುತ್ತಿದ್ದು, ಅವರ ಭಾವನೆಗಳಿಗೆ ಸ್ಪಂದಿಸುವ ಸಲುವಾಗಿ ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೆ ತಂದಿದ್ದಾರೆ ಎಂದರು.
ಪರ್ಯಾಯ ವ್ಯವಸ್ಥೆಗಳು ಬೇಕಾದಷ್ಟಿವೆ
ಗೋ ಹತ್ಯೆ ನಿಷೇಧ ಕಾಯ್ದೆಯ ವಿಚಾರವಾಗಿ ವಿನಾಕಾರಣ ತಗಾದೆ ತೆಗೆಯುವ ಅಗತ್ಯವಿಲ್ಲ. ಇಂದು ಪ್ರಾಣಿ ದಯಾ ಸಂಘ (ಪೇಟಾ) ದವರು ಜಗತ್ತಿನಾದ್ಯಂತ ಅಭಿಯಾನ ಮಾಡುತ್ತಿದ್ದಾರೆ. ಚರ್ಮದಲ್ಲೇ ಎಲ್ಲ ವಸ್ತು ಮಾಡಬೇಕೆಂದಿಲ್ಲ. ಪರ್ಯಾಯ ವ್ಯವಸ್ಥೆಗಳು ಬೇಕಾದಷ್ಟು ಬಂದಿದೆ. ಅದರಲ್ಲಿ ನೀವು ಚಪ್ಪಲಿ, ಶೂ, ವ್ಯಾನಿಟಿ ಮಾಡಬಹುದು. ದಯವಿಟ್ಟು ಕ್ಷುಲಕ ಕಾರಣ ನೀಡುವುದನ್ನು ಕಾಂಗ್ರೆಸ್ ನವರು ನಿಲ್ಲಿಸಬೇಕು ಎಂದರು.
ದೇಶದ ಮುಂದಿನ ಭವಿಷ್ಯ ಅವರಿಗೆ ಗೊತ್ತಿಲ್ಲ
ಓರ್ವ ಬಿಜೆಪಿ ಕಾರ್ಯಕರ್ತನನ್ನು ನಿನ್ನ ಗುರಿ, ಸಂಕಲ್ಪ, ಉದ್ದೇಶ ಏನು ಎಂದು ಕೇಳಿದರೆ, ಆರ್ಟಿಕಲ್ 370, ತ್ರಿವಳಿ ತಲಾಖ್, ರಾಮಮಂದಿರ ನಿರ್ಮಾಣ ಈ ರೀತಿ ಹತ್ತು ವಿಚಾರ ಹೇಳುತ್ತಾರೆ. ಕಾಂಗ್ರೆಸ್ ಕಾರ್ಯಕರ್ತನನ್ನು ಕೇಳಿದರೆ ಓಲೈಸುವುದರ ಬಗ್ಗೆ ಮಾತನಾಡುತ್ತಾರೆ. ಅದು ಬಿಟ್ಟರೆ ಜಾತ್ಯತೀತತೆ ಅಂತ ಭಾಷಣ ಮಾಡುವುದು. ಈ ದೇಶದ ಮುಂದಿನ ಭವಿಷ್ಯದ ಬಗ್ಗೆ ಅವರಿಗೆ ಗುರಿ, ಕಲ್ಪನೆ, ಸಂಕಲ್ಪ ಇದೆಯಾ, ಇಲ್ಲ ಎಂಟು ವಾಗ್ದಾಳಿ ನಡೆಸಿದರು.