ಮೈಸೂರು; ಕೊರೊನಾಗೆ ತತ್ತರಿಸಿದ ರೈತರ ನಿದ್ದೆಗೆಡಿಸಿದ ಹುಲಿ
ಮೈಸೂರು, ಮೇ 07; ಒಂದೆಡೆ ಕೊರೊನಾ ಅಟ್ಟಹಾಸ ಮೆರೆಯುತ್ತಿದ್ದು ಅದರ ಹಾವಳಿಯಿಂದ ಪಾರಾಗುವುದು ಹೇಗೆಂದು ಚಿಂತೆಯಲ್ಲಿದ್ದ ನಾಗರಹೊಳೆ ರಾಷ್ಟ್ರೀಯ ಉದ್ಯಾನದಂಚಿನ ರೈತರಿಗೆ ಇದೀಗ ಹುಲಿಯ ಹಾವಳಿ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಕೋವಿಡ್ನಿಂದಾಗಿ ಕೃಷಿ ನೆಲಕಚ್ಚುತ್ತಿರುವ ಸಂದರ್ಭದಲ್ಲಿ ಜಾನುವಾರುಗಳೇ ರೈತರಿಗೆ ಆಸರೆಯಾಗಿದೆ. ಇಂತಹ ಸಂದರ್ಭದಲ್ಲಿ ಹುಲಿಯೊಂದು ರೈತರ ಜಾನುವಾರುಗಳನ್ನೇ ಗುರಿಯಾಗಿಸಿಕೊಂಡು ಕೊಂದು ಹಾಕುತ್ತಿರುವುದು ರೈತರು ಸೇರಿದಂತೆ ಕಾಡಂಚಿನ ಜನರ ನಿದ್ದೆಗೆಡಿಸಿದೆ.
ಕೊಡಗಿನ ಲಕ್ಕುಂದ ಬಳಿ ಹುಲಿ ಶವ ಪತ್ತೆ; ಇದೇನಾ ಆ ನರಭಕ್ಷಕ?
ಹುಣಸೂರು ತಾಲೂಕಿನ ದಾಸನಪುರ ಮತ್ತು ದೊಡ್ಡಹೆಜ್ಜೂರಿನಲ್ಲಿ ಹುಲಿಯೊಂದು ಮೇಲಿಂದ ಮೇಲೆ ಜಾನುವಾರಗಳ ಮೇಲೆ ದಾಳಿ ಮಾಡುತ್ತಿದ್ದು ಇದರಿಂದ ಜನ ಭಯಭೀತರಾಗಿದ್ದಾರೆ. ಹೀಗಾಗಿ ಹುಲಿಯನ್ನು ಸೆರೆಹಿಡಿಯುವಂತೆ ಒತ್ತಡ ಬಂದಿದ್ದರಿಂದ ಅರಣ್ಯ ಇಲಾಖೆ ಕಾರ್ಯಾಚರಣೆ ಕೈಗೊಂಡಿದೆ. ಆದರೆ ಹುಲಿ ಮಾತ್ರ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗುತ್ತಿದೆ.
ಮಡಿಕೇರಿ; ಹುಲಿ ಸೆರೆ ಅಸಾಧ್ಯವಾದರೆ ಮಾತ್ರ ಕಂಡಲ್ಲಿ ಗುಂಡು
ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಅಂಚಿನಲ್ಲಿರುವ ದಾಸನಪುರ, ನೇಗತ್ತೂರು, ಕಚುವಿನಹಳ್ಳಿ ಮತ್ತು ದೊಡ್ಡಹೆಜ್ಜೂರಿನ ಜನಕ್ಕೆ ಹುಲಿ ಮತ್ತು ಕಾಡಾನೆಗಳ ಹಾವಳಿ ಹೊಸತೇನಲ್ಲ. ಆದರೆ ಕೊರೊನಾ ಸಂಕಷ್ಟ ಕಾಲದಲ್ಲಿ ತಾವು ನಂಬಿದ್ದ ಜಾನುವಾರಗಳ ಮೇಲೆಯೇ ಹುಲಿ ದಾಳಿ ಮಾಡುತ್ತಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಕುಶ ಆನೆ ಮರಳಿ ಕಾಡಿಗೆ; ಸಚಿವ ಅರವಿಂದ ಲಿಂಬಾವಳಿ
ಇದುವರೆಗೂ ಐದು ಜಾನುವಾರು ಬಲಿ
ಹುಲಿ ಕಳೆದೊಂದು ವಾರದಲ್ಲಿ 5 ಜಾನುವಾರಗಳನ್ನು ಬಲಿ ಪಡೆದಿದೆ. ಹೀಗಾಗಿ ಅದನ್ನು ಸೆರೆಹಿಡಿಯಬೇಕು ಅಥವಾ ಕಾಡಿಗೆ ಅಟ್ಟಬೇಕೆಂಬ ಒತ್ತಾಯ ಗ್ರಾಮಸ್ಥರದ್ದಾಗಿದೆ. ಗ್ರಾಮಸ್ಥರ ಒತ್ತಾಯಕ್ಕೆ ಮಣಿದ ಅರಣ್ಯ ಇಲಾಖೆ ಇದೀಗ ಕಾರ್ಯಾಚರಣೆ ಕೈಗೊಂಡಿದ್ದು ಹುಲಿಯ ಹುಡುಕಾಟ ನಡೆಯುತ್ತಿದೆ.
ಆನೆಗಳ ಸಹಾಯದಿಂದ ಕಾರ್ಯಾಚರಣೆ
ಸಾಕಾನೆಗಳಾದ ಕೃಷ್ಣ ಮತ್ತು ಗೋಪಾಲಸ್ವಾಮಿಯ ಸಹಾಯದಿಂದ ದೊಡ್ಡಹೆಜ್ಜೂರಿನ ಹಳೇ ಊರು ಹನುಮಂತಪುರದ ಅಂಗಳದಲ್ಲಿ ಹುಡಕಾಟ ನಡೆಸಿದ್ದು, ಈ ವೇಳೆ ಬಿದಿರು ಪೊದೆಯೊಳಗೆ ಸ್ವಲ್ಪ ದೂರದಲ್ಲಿ ಹುಲಿ ಕಾಣಿಸಿಕೊಂಡಿತ್ತಾದರೂ ಅರಣ್ಯ ಸಿಬ್ಬಂದಿಯೊಂದಿಗೆ ಆಗಮಿಸಿದ ಆನೆಗಳ ಜೊತೆ ಮೂನ್ನೂರಕ್ಕೂ ಹೆಚ್ಚು ಸಂಖ್ಯೆಯ ಗ್ರಾಮಸ್ಥರನ್ನು ಕಂಡು ಹುಲಿ ಗಾಬರಿಯಿಂದ ಪೊದೆಯೊಳಗೆ ಓಡಿ ಮರೆಯಾಗಿದೆ.
60 ಮಂದಿಯಿಂದ ಹುಡುಕಾಟ
ಇದೀಗ ಹುಲಿ ಯಾರ ಕಣ್ಣಿಗೂ ಸಿಗದೆ ಚಳ್ಳೆ ಹಣ್ಣು ತಿನ್ನಿಸುತ್ತಿದೆ. ಈಗಾಗಲೇ ಹುಣಸೂರು ಗ್ರಾಂಮಾತರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಚಿಕ್ಕಸ್ವಾಮಿ ಹಾಗೂ ನಾಗರಹೊಳೆ ಅರಣ್ಯ ವಿಭಾಗದ ಎ. ಸಿ. ಎಫ್. ಸತೀಶ್, ವೀರನಹೊಸಹಳ್ಳಿ ವಲಯದ ಆರ್. ಎಫ್. ಓ. ನಮನ್ ನಾರಾಯಣನಾಯಕ್, ಡಿಆರ್ಎಫ್ ಓ ಚಂದ್ರೇಶ್ ನೇತೃತ್ವದಲ್ಲಿ 60ಕ್ಕೂ ಹೆಚ್ಚು ಮಂದಿ ಸಿಬ್ಬಂದಿ ಮೂರು ವಿಭಾಗಗಳಾಗಿ ದಾಸನಪುರ, ಲಕ್ಷ್ಮಣತೀರ್ಥ ನದಿ ಹಾಗೂ ದೊಡ್ಡಹೆಜ್ಜೂರು ಹಳೇವೂರು ಭಾಗದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದರೂ ಹುಲಿ ಮಾತ್ರ ಯಾರ ಕಣ್ಣಿಗೂ ಬಿದ್ದಿಲ್ಲ.
ಇನ್ನು ಲಕ್ಷ್ಮಣತೀರ್ಥ ನದಿ ದಡದ ಬಿದಿರು ಮೆಳೆಗಳ ನಡುವೆ ಅಡಗಿ ಕುಳಿತಿರಬಹುದೆಂದು ನದಿಯಲ್ಲಿ ತೆಪ್ಪದ ಮೂಲಕವೂ ಹುಡುಕಾಟ ನಡೆಸಲಾಗಿದೆ. ಆದರೆ ಎಲ್ಲಿಯೂ ಹುಲಿಯ ಸುಳಿವು ಸಿಕ್ಕಿಲ್ಲ. ಹೀಗಾಗಿ ಹುಲಿಗಾಗಿ ಹುಡುಕಾಟ ಮುಂದುವರೆದಿದೆ.
ಗುಂಪುಗೂಡುವ ಜನ
ಪೊಲೀಸರಿಗೆ ಗ್ರಾಮಸ್ಥರನ್ನು ನಿಭಾಯಿಸುವುದೇ ಕಷ್ಟವಾಗಿದೆ. ಕಾರ್ಯಾಚರಣೆ ವೇಳೆ ಜನ ಕುತೂಲಹಲದಿಂದ ಗುಂಪುಗೂಡುವುದು ಚಿಂತೆಯಾಗಿದೆ. ಕೋವಿಡ್ ಸೋಂಕು ತೀವ್ರಗತಿಯಲ್ಲಿ ಹರಡುತ್ತಿರುವ ಈ ವೇಳೆ ಜನ ಸಾಮಾಜಿಕ ಅಂತರ ಮರೆತು ಒಂದೆಡೆ ಸೇರುತ್ತಿರುವುದರಿಂದ ಪೊಲೀಸರು ಹುಲಿಯ ಸೆರೆಗೆ ಕಾರ್ಯಾಚರಣೆ ನಡೆಸುವುದೋ ಜನರನ್ನು ನಿಭಾಯಿಸುವುದೋ ಎಂಬಂತಾಗಿದೆ. ಜನ ಇನ್ನಾದರೂ ತಮ್ಮ ಆರೋಗ್ಯದ ದೃಷ್ಠಿಯಿಂದ ದೂರವಿದ್ದು ಅರಣ್ಯ ಇಲಾಖೆಯ ಕಾರ್ಯಾಚರಣೆಗೆ ಅವಕಾಶ ಮಾಡಿಕೊಡಬೇಕಾಗಿದೆ.