ವಿಜಯ್ ಮಲ್ಯ ರೀತಿ ನನ್ನ ಸಾಲವನ್ನೂ ಮನ್ನಾ ಮಾಡಿ: ರೈತ ಪತ್ರ
ಉದ್ಯಮಿ ವಿಜಯ್ ಮಲ್ಯ ಸಾಲ ಮನ್ನಾ ಮಾಡಿದಂತೆ ನನ್ನ ಸಾಲವನ್ನೂ ಸಹ ಮನ್ನಾ ಮಾಡಿ ಎಂದು ಮೈಸೂರಿನ ಮದ್ದಕ್ ತಾಲ್ಲೂಕಿನ ರೈತನೊಬ್ಬ ಭಾರತೀಯ ಸ್ಟೇಟ್ ಬ್ಯಾಂಕ್ ಗೆ ಪತ್ರ ಬರೆದಿದ್ದಾನೆ.
ಮೈಸೂರು, ನವೆಂಬರ್, 24: ಮದ್ಯದ ದೊರೆ ವಿಜಯಮಲ್ಯ ಸಾಲ ಮನ್ನಾ ಮಾಡಿದಂತೆ ನನ್ನ ಸಾಲವನ್ನೂ ಮನ್ನಾ ಮಾಡಿ ಎಂದು ಮೈಸೂರಿನ ರೈತರೊಬ್ಬರು ಭಾರತೀಯ ಸ್ಟೇಟ್ ಬ್ಯಾಂಕ್ ಗೆ ಪತ್ರ ಬರೆದಿದ್ದಾರೆ.
ಮೈಸೂರಿನ ಮದ್ದಕ್ ತಾಲ್ಲೂಕಿನ ರೈತ ಸುಧಾಕರ್ ಎಂಬುವವರು ಭಾರತೀಯ ಸ್ಟೇಟ್ ಬ್ಯಾಂಕ್ ನ ಶಿವಪುರ ಶಾಖೆಯ ಮ್ಯಾನೇಜರ್ ಗೆ "ಬ್ಯಾಂಕ್ ನಿಂದ ನಾನು ಪಡೆದುಕೊಂಡಿರುವ 7ಲಕ್ಷ ರೂ. ಸಾಲವನ್ನು ಮನ್ನಾ ಮಾಡಿ" ಎಂದು ಪತ್ರ ಬರೆದಿದ್ದಾರೆ.[ಉದ್ದೇಶಪೂರ್ವಕ ಸುಸ್ತಿದಾರ ಮಲ್ಯಗೆ ಎಸ್ಬಿಐ ಸಾಲದಿಂದ ಮುಕ್ತಿ!]
ಉದ್ಯಮಿ ವಿಜಯಮಲ್ಯ ಸೇರಿದಂತೆ ಇತರ ವ್ಯಕ್ತಿಗಳ ಒಟ್ಟು 7 ಸಾವಿರ ಕೊಟಿ ರೂ. ಸಾಲವನ್ನು ಇತ್ತೀಚೆಗಷ್ಟೆ ಭಾರತೀಯ ಸ್ಟೇಟ್ ಬ್ಯಾಂಕ್ ಮನ್ನಾ ಮಾಡಿತ್ತು.
"2005-2006ರಲ್ಲಿ ಬ್ಯಾಂಕಿನಿಂದ ನಾನು ಸಾಲ ಪಡೆದುಕೊಂಡಿದ್ದೆ. ಬ್ಯಾಂಕಿನವರು ವಿಜಯ್ ಮಲ್ಯ ಅವರ ಸಾವಿರಾರು ಕೋಟಿ ರೂ. ಸಾಲವನ್ನು ಮನ್ನಾ ಮಾಡುವುದಾದರೆ ನನ್ನ ಸಾಲವನ್ನೂ ಮನ್ನಾ ಮಾಡಲಿ ಎಂದು ರೈತ ಸುಧಾಕರ್ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ತಿಳಿಸಿದ್ದಾರೆ. ನ್ಯೂಸ್ ಮಿನಿಟ್ ಸಹ ಈ ಸುದ್ದಿಯನ್ನು ಪ್ರಕಟಿಸಿದೆ.
"ಸಾಲ ಪಡೆದಿದ್ದ ಶೇ. 80ರಷ್ಟು ಹಣವನ್ನು ಕೃಷಿ ಚಟುವಟಿಕೆಗಳಿಗಾಗಿ ಬಳಸಿಕೊಂಡಿದ್ದೇನೆ. ಉಳಿದ ಹಣವನ್ನು ವೈಯಕ್ತಿಕ ಕಾರಣಗಳಿಗಾಗಿ ವೆಚ್ಚಿಸಿದ್ದೇನೆ. 4.91ಲಕ್ಷ ರೂ. ಟ್ರಾಕ್ಟರ್ ಖರೀದಿಗಾಗಿ ಸಾಲ ಮಾಡಿದ್ದೇನೆ. [ಮಲ್ಯ ಅವರ ಸಾಲಮನ್ನಾ ಪುಸ್ತಕಕ್ಕೆ ಸೀಮಿತ : ಜೇಟ್ಲಿ]
40 ಸಾವಿರ ರೂ. ಬೆಳೆಸಾಲ ತೆಗೆದುಕೊಂಡಿದ್ದೇನೆ. ಬೆಳೆ ಕೈಕೊಟ್ಟು 10 ವರ್ಷಗಳಿಂದ ಸಾಲ ತೀರಿಸಲು ಪರದಾಡುತ್ತಿದ್ದೇನೆ. ಆದರೆ ಬ್ಯಾಂಕ್ ನವರು ಮಾತ್ರ ನೋಟಿಸ್ ಮೇಲೆ ನೋಟಿಸ್ ಕಳಿಸಿ ನನ್ನ ಮಾನಸಿಕ ನೆಮ್ಮದಿ ಕೆಡಿಸಿದ್ದಾರೆ" ಎಂದು ಸುಧಾಕರ್ ಹೇಳಿದ್ದಾರೆ.
ಬೆಳೆನಷ್ಟ ಅನುಭವಿಸಿದಾಗ, ಬರ ಆವರಿಸಿದಾಗ ಮಾಡಿದ ಸಾಲವನ್ನು ತೀರಿಸಲು ರೈತರು ತುಂಬಾ ಕಷ್ಟಪಡುತ್ತಾರೆ. ಇಂತಹ ಸಮಯದಲ್ಲಿ ಬ್ಯಾಂಕ್ ನವರು ರೈತರ ಸಾಲ ಮನ್ನಾ ಮಾಡಿ ದೊಡ್ಡ ಮನಸ್ಸು ತೋರಿಸಬೇಕು ಎಂದು ಅವರು ಹೇಳಿದ್ದಾರೆ.
ಉದ್ಯಮಿ ವಿಜಯ್ ಮಲ್ಯ ಅವರು ತಮ್ಮ ಕಿಂಗ್ ಫಿಶರ್ ಏರ್ ಲೈನ್ಸ್ ಸಂಸ್ಥೆಗಾಗಿ ಸುಮಾರು 9 ಸಾವಿರ ಕೋಟಿಗೂ ಅಧಿಕ ಮೊತ್ತದ ಸಾಲವನ್ನು ದೇಶದ ವಿವಿಧ ಬ್ಯಾಂಕ್ ಗಳಿಂದ ಪಡೆದುಕೊಂಡಿದ್ದರು.