ಮೈಸೂರು ಜಿಲ್ಲೆಯಲ್ಲಿ ಬೋನಿಗೆ ಬಿದ್ದ ಚಿರತೆ, ಕಾಡಾನೆ ದಾಳಿಗೆ ರೈತ ಸಾವು
ಮೈಸೂರು, ನವೆಂಬರ್ 19: ಗುರುವಾರ ಬೆಳಗಿನ ಜಾವ ಮನೆಯ ಮೇಲೆ ದಾಳಿ ನಡೆಸಿದ ಕಾಡಾನೆಯು ಮನೆಯಲ್ಲಿದ್ದ ರೈತನನ್ನು ಕೊಂದು ಹಾಕಿದ್ದು, ಮನೆಯಲ್ಲಿದ್ದ ರೈತನ ಪತ್ನಿ ಗಂಭೀರವಾಗಿ ಗಾಯಗೊಂಡ ಘಟನೆ ಎಚ್.ಡಿ.ಕೋಟೆ ತಾಲೂಕಿನಲ್ಲಿ ನಡೆದಿದೆ.
ವಿಷಯ ತಿಳಿಯುತ್ತಿದ್ದಂತೆಯೇ ಅರಣ್ಯ ಇಲಾಖೆಯ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಎಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೈಸೂರು; ಪೈಪ್ ಒಳಗೆ ನುಗ್ಗಿದ್ದ ಚಿರತೆ ಕೂಡಿ ಹಾಕಿದ ಗ್ರಾಮಸ್ಥರು
ಎಚ್.ಡಿ.ಕೋಟೆ ತಾಲೂಕಿನ ನೆಟ್ಟಕಲ್ಲಹುಂಡಿ ಗ್ರಾಮದಲ್ಲಿನ ರೈತ ಚಿನ್ನಪ್ಪ ಎಂಬುವವರ ಮನೆಯ ಮೇಲೆ ಗುರುವಾರ ಬೆಳಿಗ್ಗೆ ಕಾಡಾನೆ ದಾಳಿ ನಡೆಸಿದ ಪರಿಣಾಮ ಚಿನ್ನಪ್ಪ (58) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅವರ ಪತ್ನಿ ಕೊಟ್ಟೂರಮ್ಮ ಅವರಿಗೆ ಗಂಭೀರ ಗಾಯಗಳಾಗಿದ್ದು, ಎಚ್.ಡಿ.ಕೋಟೆ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ವಿಷಯ ತಿಳಿಯುತ್ತಿದ್ದಂತೆಯೇ ಅರಣ್ಯ ಇಲಾಖೆಯ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಎಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೈಸೂರು ಜಿಲ್ಲೆಯಲ್ಲಿ ಬೋನಿಗೆ ಬಿದ್ದ ಚಿರತೆ
ಇನ್ನು ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ದೊಡ್ಡ ಹುಣಸೂರು ಗ್ರಾಮದ ಹೊರವಲಯದಲ್ಲಿ ನಾಲ್ಕು ವರ್ಷದ ಗಂಡು ಚಿರತೆಯೊಂದು ಅರಣ್ಯ ಇಲಾಖೆ ಇರಿಸಿದ ಬೋನಿಗೆ ಬಿದ್ದಿದೆ.
ಕೆಲ ವಾರಗಳಿಂದ ಗ್ರಾಮಕ್ಕೆ ರಾತ್ರಿ ವೇಳೆ ನುಗ್ಗಿ ಜಾನುವಾರಗಳನ್ನು, ನಾಯಿಗಳನ್ನು ತಿನ್ನುತ್ತಿದ್ದ ಚಿರತೆಯ ಕಾಟದಿಂದ ಗ್ರಾಮಸ್ಥರು ರೋಸಿ ಹೋಗಿದ್ದರು.
ತೀವ್ರ ಉಪಟಳ ನೀಡುತ್ತಿರುವ ಚಿರತೆಯನ್ನು ಸೆರೆ ಹಿಡಿಯುವಂತೆ ಗ್ರಾಮಸ್ಥರು ಅರಣ್ಯಾಧಿಕಾರಿಗಳಿಗೆ ಒತ್ತಾಯಿಸಿದ್ದ ಮೇರೆಗೆ ಚಂದ್ರಶೇಖರ್ ಎಂಬುವರ ಜಮೀನಿನಲ್ಲಿ ಮೂರು ದಿನಗಳಿಂದ ಬೋನು ಇಡಲಾಗಿತ್ತು. ಆಹಾರ ಅರಸಿ ಬಂದ ಚಿರತೆ ಬುಧವಾರ ರಾತ್ರಿ ಬೋನಿಗೆ ಬಿದ್ದಿದೆ.
ಚಿರತೆ ಬೋನಿಗೆ ಬಿದ್ದಿದ್ದರೂ ಅದರ ಆಕ್ರೋಶ ಮಾತ್ರ ಕಡಿಮೆಯಾಗಿರಲಿಲ್ಲ. ಸೆರೆ ಸಿಕ್ಕಿರುವ ಚಿರತೆಯನ್ನು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಡಿ.ಬಿ.ಕುಪ್ಪೆ ವಲಯಕ್ಕೆ ಬಿಡಲು ಅರಣ್ಯಾಧಿಕಾರಿಗಳು ನಿರ್ಧರಿಸಿದ್ದಾರೆ.