ತಂಬಾಕು ಬೆಳೆಗಾಗಿ ಮಾಡಿದ ಸಾಲ ತೀರಿಸಲಾಗದೆ ರೈತ ಆತ್ಮಹತ್ಯೆ
ಮೈಸೂರು, ಏಪ್ರಿಲ್ 22:ಸಾಲಬಾಧೆಯಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಪ್ರಕರಣಗಳು ನಿಲ್ಲುವ ಲಕ್ಷಣಗಳು ಹಳೇ ಮೈಸೂರು ವ್ಯಾಪ್ತಿಯಲ್ಲಿ ಕಂಡು ಬರುತ್ತಿಲ್ಲ. ಆಗಿಂದಾಗ್ಗೆ ಅಲ್ಲೊಬ್ಬ ಇಲ್ಲೊಬ್ಬ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪ್ರಕರಣಗಳು ನಡೆಯುತ್ತಲೇ ಇರುವುದು ಆತಂಕಕಾರಿ ಬೆಳವಣಿಗೆಯಾಗಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ರೈತರ ಅಭಿವೃದ್ಧಿ, ಏಳ್ಗೆ ಬಗ್ಗೆಯೇ ಮಾತನಾಡುತ್ತಿದ್ದ ರಾಜಕೀಯ ಪಕ್ಷಗಳು, ಆಡಳಿತ ರೂಢ ಸರ್ಕಾರಗಳು ಆತ್ಮಹತ್ಯೆಗೆ ಕಾರಣಗಳನ್ನು ಹುಡುಕಿ ಪರಿಹಾರ ಕಂಡು ಕೊಳ್ಳದ ಕಾರಣ ಮತ್ತು ಸರ್ಕಾರ ಸಾಲ ಮನ್ನಾವಾಗುವುದಿಲ್ಲವೇನೋ ಎಂಬ ಆತಂಕದಿಂದ ಮಾಡಿದ ಕೈಸಾಲ ತೀರಿಸಲಾಗದೆ ಸಾಲಗಾರರ ಕಾಟ ತಾಳಲಾರದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ.
ಭೂಮಿ ತಂಪು ಮಾಡಿ ರೈತನ ಹೊಟ್ಟೆಗೆ ಬರೆ ಎಳೆದ ಆಲಿಕಲ್ಲು ಮಳೆ
ಇದೀಗ ಮೈಸೂರು ಜಿಲ್ಲೆಯ ಸರಗೂರು ತಾಲೂಕಿನಲ್ಲಿ ರೈತನೊಬ್ಬ ಸಾಲ ಮಾಡಿಕೊಂಡಿದ್ದು ಅದನ್ನು ತೀರಿಸಲಾಗದೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಸರಗೂರು ತಾಲೂಕಿನ ಹಂಚಿಪುರ ಗ್ರಾಮದ ನಿವಾಸಿ ಎಚ್.ವಿ.ರಾಜಪ್ಪ(55) ಎಂಬಾತ ಆತ್ಮಹತ್ಯೆ ಮಾಡಿಕೊಂಡ ರೈತನಾಗಿದ್ದು, ಇವರು ತಮ್ಮ ಗ್ರಾಮದಲ್ಲಿರುವ ತಮ್ಮ ಮೂರು ಎಕರೆ ಜಮೀನಿನಲ್ಲಿ ಹೊಗೆ ಸೊಪ್ಪು ಹಾಗೂ ಹತ್ತಿ ಬೆಳೆಯಲು ಎಸ್ಬಿಎಂ ಬ್ಯಾಂಕ್ನಿಂದ ೮ ಲಕ್ಷ ರೂ. ಹಾಗೂ ವಿವಿಧೆಡೆಗಳಿಂದ 3 ಲಕ್ಷ ಕೈ ಸಾಲ ಮಾಡಿಕೊಂಡಿದ್ದರು.
ಆದರೆ ತಂಬಾಕು ಬೆಳೆ ಕೈಕೊಟ್ಟಿದ್ದರಿಂದ ಸಾಲ ಹಾಗೆಯೇ ಉಳಿದು ಹೋಗಿತ್ತು. ಈ ನಡುವೆ ಸಾಲಗಾರರ ಕಾಟವೂ ಹೆಚ್ಚಾಗಿತ್ತು. ಸಾಲತೀರಿಸುವುದು ಹೇಗೆಂದು ಯೋಚನೆಯಲ್ಲೇ ಕಾಲ ಕಳೆಯುತ್ತಿದ್ದ ರೈತ ರಾಜಪ್ಪ ದಿನ ಕಳೆದಂತೆ ಸಾಲಗಾರರ ಕಾಟ ಜಾಸ್ತಿಯಾಗಿದ್ದರಿಂದ ಮನನೊಂದು ತಮ್ಮ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಂಡ್ಯದಲ್ಲಿ ಚುನಾವಣೆ ಕಾವಿನ ಮಧ್ಯೆ ಹೆಚ್ಚುತ್ತಿದೆ ರೈತರ ಆತ್ಮಹತ್ಯೆ
ಮೃತ ರೈತನಿಗೆ ಪತ್ನಿ, ಇಬ್ಬರು ಮಕ್ಕಳು ಇದ್ದಾರೆ. ಈ ಸಂಬಂಧ ಸರಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.